ಪೇಜಾವರ ಶ್ರೀಗಳನ್ನು ಚರ್ಚೆಗೆ ಕರೆದ ದಿನೇಶ್ ಅಮಿನಮಟ್ಟು
ಬೆಂಗಳೂರು, ಅಕ್ಟೋಬರ್. 07: ವಿವೇಕಾನಂದರು ಹೇಳಿದ ಹಿಂದು ಧರ್ಮದ ವ್ಯಾಖ್ಯಾನದ ಬಗ್ಗೆ ಬಹಿರಂಗ ಚರ್ಚೆಗೆ ನಾನು ಸಿದ್ಧನಿದ್ದೇನೆ? ಚಕ್ರವರ್ತಿ ಸೂಲಿಬೆಲೆಯವರು ಸಿದ್ಧರಿದ್ದಾರೆಯೇ? ಪೇಜಾವರ ಶ್ರೀಗಳು ಜಾತಿ ಪದ್ಧತಿ ಇರಲಿ, ಅಸ್ಪೃಶ್ಯತೆ ಬೇಡ ಎನ್ನುತ್ತಾರೆ, ಇದು ಯಾವ ಬಗೆಯ ಹೇಳಿಕೆ? ಹೀಗೆಂದು ಪ್ರಶ್ನೆ ಮಾಡಿದವರು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ, ಹಿರಿಯ ಪತ್ರಕರ್ತ ದಿನೇಶ್ ಅಮಿನಮಟ್ಟು.
ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಬುಧವಾರ ಸಮಾನ ಮನಸ್ಕರ ವೇದಿಕೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅಮಿನಮಟ್ಟು, ಉತ್ತರ ಪ್ರದೇಶದಲ್ಲಿ ಗೋಮಾಂಸ ಸಂಗ್ರಹಿಸಿಟ್ಟಿದ್ದಾರೆ ಎಂದು ಹಿರಿಯ ಜೀವವನ್ನು ಹತ್ಯೆ ಮಾಡಲಾಗಿದೆ. ದಲಿತ ದೇವಾಲಯ ಪ್ರವೇಶ ಮಾಡುತ್ತಾನೆ ಎಂದು ಆತನನ್ನು ಸುಟ್ಟುಹಾಕಲಾಗಿದೆ. ನಾವು ಯಾವ ಕಾಲದಲ್ಲಿದ್ದೇವೆ ಎಂದು ಪ್ರಶ್ನೆ ಮಾಡಿದರು.[ಗೋಮಾಂಸ ತಿನ್ನಲು ಮುಂದಾದವರಿಗೆ ಜನರ ಪ್ರಶ್ನೆ?]
ಪುರಭವನದ ಎದುರು ಸೇರಿದ್ದ ಚಿಂತಕರು, ಬರಹಗಾರರು, ದಲಿತ ಸಂಘಟನೆಗಳ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು. ಗೋ ಮಾಂಸ ಭಕ್ಷಣೆಗೆ ನಿರ್ಬಂಧ ಹೇರಲು ಹೊರಟಿರುವ ಸರ್ಕಾರ ಮೂಲಭೂತ ಹಕ್ಕು ಕಸಿಯುತ್ತಿದೆ ಎಂದು ಆರೋಪಿಸಿದರು. ನಂತರ ಸಾರ್ವಜನಿಕವಾಗಿ ಗೋ ಮಾಂಸ ಭಕ್ಷಣೆ ಮಾಡಿದರು. ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ, ಸಮೀನಾ, ಲೇಖಕಿ ಚೇತನಾ ತೀರ್ಥಹಳ್ಳಿ ಭಾಗವಹಿಸಿದ್ದರು.
ಗೋ ಮಾಂಸ ಸೇವನೆ
ಪ್ರತಿಭಟನೆ ಅಂತಿಮ ಹಂತ ತಲುಪಿದ ನಂತರ ಸಾರ್ವಜನಿಕವಾಗಿಯೇ ಗೋ ಮಾಂಸ ಭಕ್ಷಣೆ ಮಾಡಲಾಯಿತು. ಕಳೆದ ಸಾರಿ ಇಂಥದ್ದೇ ಪ್ರತಿಭಟನೆ ಹಮ್ಮಿಕೊಂಡಿದ್ದಾಗ ಪೊಲೀಸರು ಮಧ್ಯ ಪ್ರವೇಶ ಮಾಡಿ ಗೋ ಮಾಂಸ ಕೊಂಡೊಯ್ದಿದ್ದರು.
ನರೇಂದ್ರ ಮೋದಿ ವಿರುದ್ಧ ಘೋಷಣೆ
ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ದೇಶದಲ್ಲಿ ಸಂಘ ಪರಿವಾರ ಕೋಮು ವಾತಾವರಣ ಸೃಷ್ಟಿಸಿದೆ. ದಲಿತರ ಮೇಲೆ ಹಲ್ಲೆ ನಡೆಯುತ್ತಿದೆ. ಸಂವಿಧಾನ ಇರುವುದಕ್ಕೆ ಜಾತಿ ಪದ್ಧತಿ ಹೊರಗೆ ಕಾಣುತ್ತಿಲ್ಲ ವಿನಃ ಒಳಗಿನ ದುಷ್ಟ ಮನಸ್ಸು ಹಾಗೇ ಇದೆ ಎಂದು ಅಮಿನಮಟ್ಟು ಹೇಳಿದರು.
ರೈತರಿಗೆ ಮಾತ್ರ ಗೋವಿನ ಬಗ್ಗೆ ಮಾತನಾಡುವ ಹಕ್ಕಿದೆ
ಗೋ ರಕ್ಷಣೆ ಹೆಸರು ಹೇಳಿಕೊಂಡು ಓಡಾಡುವ ಜನರಿಗೆ ಗೋವಿನ ನೋವು ನಲಿವುಗಳು ಗೊತ್ತೆ? ಈ ದೇಶದಲ್ಲಿ ಗೋವಿನ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇದ್ದರೆ ಅದು ರೈತರಿಗೆ ಮಾತ್ರ ಎಂದು ಅಮಿನಮಟ್ಟು ಹೇಳಿದರು.
ಜಾಲತಾಣ ಶೂರರು
ಸಾಮಾಜಿಕ ಜಾಲತಾಣದಲ್ಲಿ ಮನಸೋ ಇಚ್ಛೆ ಬರೆದುಕೊಳ್ಳುವ ಇವರ ಬುದ್ಧಿಗೇಡಿತನವನ್ನು ನೆನೆದರೆ ನಾಚಿಕೆಯಾಗುತ್ತದೆ. ಗೋ ರಕ್ಷಣೆ ಎಂಬ ಪದವನ್ನು ಕೇವಲ ರಾಜಾಕರಣಕ್ಕೆ, ಸಾಮಾಜಿಕ ನೆಮ್ಮದಿ ಹಾಳು ಮಾಡಲು ಇವರು ಬಳಸಿಕೊಳ್ಳುತ್ತಿದ್ದಾರೆ ಎಂದು ದಿನೇಶ್ ಹೇಳಿದರು