ಬೆಂಗಳೂರಿನ ಉದ್ಯಮಿಗೆ ಕೇರಳ ಮಾಜಿ ಸಿಎಂ ದಂಡ ಕಟ್ಬೇಕು?
ಬೆಂಗಳೂರು, ಅಕ್ಟೋಬರ್ 25: ವಂಚನೆ ಪ್ರಕರಣದಲ್ಲಿ ಸಿಲುಕಿರುವ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಭಾರಿ ದಂಡ ವಿಧಿಸಿದೆ. ಬೆಂಗಳೂರು ಮೂಲದ ಉದ್ಯಮಿ ಎಂಕೆ ಕುರುವಿಲ್ಲಾ ಅವರಿಗೆ 1.5 ಕೋಟಿ ರು ಪಾವತಿಸುವಂತೆ ಸೂಚಿಸಿದೆ.
ಬಹುಕೋಟಿ ಸೋಲಾರ್ ಪ್ಯಾನಲ್ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಉದ್ಯಮಿಗೆ ವಂಚಿಸಿದ ಆರೋಪವನ್ನು ಉಮ್ಮನ್ ಚಾಂಡಿ ಹಾಗೂ ಅವರ ಸಹಚರರು ಹೊತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟಿನ ಜಡ್ಜ್ ಎನ್ ಆರ್ ಕೇಶವ ಅವರು ex-parte ನಂತೆ ಆದೇಶ ನೀಡಿದ್ದಾರೆ. ಉಮ್ಮನ್ ಚಾಂಡಿ ಅವರು ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದಾಗಿದೆ.['ಸೋಲಾರ್' ಸರಿತಾಗೆ ಗಿಣಿಪಾಠ ಹೇಳಿಕೊಟ್ಟ ಆಡಿಯೋ ಲೀಕ್]
ಏನಿದು ಪ್ರಕರಣ: ಸೋಲಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮ್ಮನ್ ಚಾಂಡಿ ಅವರ ಸಹಚರರು ಕುರುವಿಲ್ಲಾ ಅವರನ್ನು ನವದೆಹಲಿಗೆ ಕರೆಸಿಕೊಂಡು ಲಂಚ ಸ್ವೀಕರಿಸಿದ್ದಾರೆ. ಲಂಚದ ಮೊತ್ತ 1 ಕೋಟಿ 35 ಸಾವಿರ ರುಗಳಾಗಿರುತ್ತದೆ. ಈ ಕುರಿತಂತೆ ಕೋರ್ಟಿಗೆ ಚಲನ್ ಕಾಪಿ ಹಾಗೂ ವಿವಿಧ ಬ್ಯಾಂಕುಗಳಿಗೆ ಹಣ ವರ್ಗಾವಣೆ ಮಾಡಿದ ದಾಖಲೆಗಳನ್ನು ನೀಡಿದ್ದಾರೆ.[ಸೋಲಾರ್ ಹಗರಣ: ಸರಿತಾ ಹಾಕಿದ 'ಬಾಂಬ್' ಗೆ ಪುಢಾರಿಗಳು ಶಾಕ್]
ಈ ಪ್ರಕರಣದಲ್ಲಿ ಚಾಂಡಿ ಅವರು ಐದನೇ ಆರೋಪಿಯಾಗಿದ್ದಾರೆ. ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಲ್ಜಿತ್, SCOSSA ಶಿಕ್ಷಣ ಸಲಹೆಗಾರ ಸಂಸ್ಥೆ ಮಾಲೀಕ ಬಿನು ನಾಯರ್ ಮುಂತಾದವರು ಆರೋಪಿಗಳಾಗಿದ್ದಾರೆ. ಉಮ್ಮನ್ ಚಾಂಡಿ ಅವರ ಸಂಬಂಧಿ ಆಂಡ್ರೂಸ್ ಈ ಪ್ರಕರಣದ ಮುಖ್ಯ ಆರೋಪಿಯಾಗಿದ್ದಾನೆ. ಸೋಲಾರ್ ಪ್ರಕರಣದ ಆರೋಪಿ ಸರಿತಾ ನಾಯರ್ ಮೂಲಕ ಚಾಂಡಿ ಅವರ ಪರಿಚಯವಾಯಿತು. ಸೋಲಾರ್ ಪ್ಯಾನಲ್ ಫ್ರಾಂಚೈಸಿ ಕೊಡಿಸುವುದಾಗಿ ಸರಿತಾ ಭರವಸೆ ನೀಡಿದ್ದರು ಎಂದು ಕುರುವಿಲ್ಲಾ ಹೇಳಿದ್ದಾರೆ.['ನನಗೆ ಗಲ್ಲು ಶಿಕ್ಷೆ ಕೊಡಿ' ಎಂದ 'ಸೋಲಾರ್' ಅಪರಾಧಿ]