ಜೂನ್ 17 ರಂದು ಜ್ಯೋತ್ಸ್ನಾ ಕಾಮತ್ ಅವರಿಗೆ ಚಿದಾನಂದ ಪ್ರಶಸ್ತಿ ಪ್ರದಾನ
ಬೆಂಗಳೂರು, ಜೂನ್ 16: ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಇತಿಹಾಸಗಳ ಕುರಿತು ಅಪಾರ ಜ್ಞಾನವುಳ್ಳ ಹಿರಿಯ ಸಂಶೋಧಕಿ ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಅವರು 2018 ರ ಚಿದಾನಂದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಜೂನ್ 17 ರಂದು 10:30 ಕ್ಕೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ.ಆರ್ ಶೇಷ ಶಾಸ್ತ್ರಿ ಅವರು ಕಾರ್ಯಕ್ರಮದ ಅಭಿನಂದನ ಭಾಷಣ ಮಾಡಲಿದ್ದು, ಖ್ಯಾತ ಪುರಾತತ್ವ ಶಾಸ್ತ್ರಜ್ಞ ಮತ್ತು ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ನಾಗರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮೂಲತಃ ಮಹಾರಾಷ್ಟ್ರದವರಾದ ಜ್ಯೋತ್ಸ್ನಾ ಅವರು ಕರ್ನಾಟಕ ವಿವಿಯಲ್ಲಿ ಇತಿಹಾಸ ವಿಷಯದಲ್ಲಿ ಎಂಎ ಮತ್ತು ಪಿಎಚ್ ಡಿ ಪದವಿ ಗಳಿಸಿದರು. ಆಕಾಶವಾಣಿಯ ನಿವೃತ್ತ ನಿರ್ದೇಶಕರೂ ಆಗಿರುವ ಜ್ಯೋತ್ಸ್ನಾ ಅವರು Social Life in Medival Karnataka, Education in Kannada through the ages, ಕರ್ನಾಟಕ ಶಿಕ್ಷಣ ಪರಂಪರೆ, ಶಾಂತಲೆ-ವಿಷ್ಣುವರ್ಧನ, ಮಹಿಳೆ-ಒಂದು ಅಧ್ಯನ ಇತ್ಯಾದಿ 20 ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ, ಇಂಗ್ಲಿಷ್ ಹಾಗೂ ಕೊಂಕಣಿ ಭಾಷೆಗಳಲ್ಲಿ ರಚಿಸಿದ್ದಾರೆ.
ಪ್ರಸ್ತುತ ಕೆ.ಎಲ್ ಕಾಮತ್ ಮೆಮೊರಿಯಲ್ ಟ್ರಸ್ಟ್ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರಿಗೆ ಈ ಪ್ರಶಸ್ತಿ ಬಂದಿದ್ದು ಹೆಮ್ಮೆಯ ವಿಷಯ ಎನ್ನಿಸಿದೆ. ಹಿರಿಯ ಸಂಶೋಧಕರಾದ ಚಿದಾನಂದ ಮೂರ್ತಿ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಇದಾಗಿದೆ.