ಬೆಂಗಳೂರು ಶಾಲಾ ಮಕ್ಕಳ ಬಿಸಿಯೂಟದಲ್ಲಿ ಸಿರಿಧಾನ್ಯ!
ಬೆಂಗಳೂರು, ಜನವರಿ 08: ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತಿರುವ ಪ್ರಮುಖ ಸ್ವಯಂಸೇವಾ ಸಂಸ್ಥೆಯಾದ ಇಸ್ಕಾನ್ ಹಾಗೂ ಕೃಷಿ ಇಲಾಖೆ ಸಹಯೋದಲ್ಲಿ ಬೆಂಗಳೂರಿನ ಕೆಲವು ಸರ್ಕಾರಿ ಶಾಲೆಗಳ 1 ರಾಜ್ಯದಲ್ಲಿ ಸಾವಿರ ಮಕ್ಕಳಿಗೆ ಸಿರಿಧಾನ್ಯ ಬಳಸಿ ಬಿಸಿಯೂಟ ನೀಡುವ ಯೋಜನೆ ರೂಪಿಸಿದೆ. ಜನವರಿ 11 ರಂದು ಇದಕ್ಕೆ ಚಾಲನೆ ದೊರೆಯಲಿದೆ.
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ ಪೂರೈಸುತ್ತಿರುವ ಇಸ್ಕಾನ್ ನ ಅಕ್ಷಯ ಪಾತ್ರ ಫೌಂಡೇಶನ್ ರಾಜ್ಯ ಕೃಷಿ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಕೆಲವು ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಿರಿಧಾನ್ಯ ಬಳಸಿ ಬಿಡಿಯೂಟವನ್ನು ನೀಡಲು ನಿರ್ಧರಿಸಿದೆ. ಇದರಿಂದ ಮಕ್ಕಳಲ್ಲಾಗುವ ದೈಹಿಕ ಬೆಳವಣಿಗೆ ಕುರಿತು ವರದಿ ತಯಾರಿಸಲಿದ್ದಾರೆ.
ಪ್ರಸ್ತುತ , ಬಿಸಿಯೂಟ ಯೋಜನೆಯಲ್ಲಿ ನಿತ್ಯ ಅನ್ನ, ಸಾಂಬಾರ್, ಬಿಸಿಬೇಳೆ ಬಾತ್, ವಾರದಲ್ಲಿ ಎರಡು ದಿನ ಕೇಸರಿ ಬಾತ್, ಶಾವಿಗೆ ಪಾಯಸ ಮತ್ತಿತರೆ ಆಹಾರ ನೀಡಲಾಗುತ್ತಿತ್ತು. ಇದೀಗ ಪ್ರಾಯೋಗಿಕ ಯೋಗ ಯೋಜನೆಯಡಿ ನಗರದ ಕೆಲ ಶಾಲೆಗಳ 1 ಸಾವಿರ ಮಕ್ಕಳಿಗೆ ಬಿಸಿಯೂಟದಲ್ಲಿ ಸಿರಿಧಾನ್ಯಗಳನ್ನು ಬಳಕೆ ಮಾಡಿ ಆಹಾರ ತಯಾರಿಸಿ ಬಡಿಸಲಾಗುತ್ತದೆ. ಸುಮಾರು 6 ರಿಂದ 8 ತಿಂಗಳ ಕಾಲ ಸಿರಿಧಾನ್ಯದ ಆಹಾರ ಸೇವಿಸುವ ಮಕ್ಕಳ ಬೆಳವಣಿಗೆ, ಆರೋಗ್ಯದ ಮೇಲೆ ನಿಗಾ ವಹಿಸಿ ವರದಿ ತಯಾರಿಸಲಾಗುತ್ತದೆ ಎಂದು ಅಕ್ಷಯ ಪಾತ್ರ ಫೌಂಡೇಷನ್ ಪ್ರತಿನಿಧಿಗಳು ಮಾಹಿತಿ ನೀಡಿದ್ದಾರೆ.
ಸಿರಿಧಾನ್ಯ ಬಳಕೆ ಹೇಗೆ: ಹೆಚ್ಚಿನ ಪೋಷಕಾಂಶ ಇರುವ ಸಿರಿಧಾನ್ಯಗಳಾದ ನವಣೆ, ಸಜ್ಜೆ, ಆರ್ಕ, ಊದಲು, ರಾಗಿ, ಕೊರ್ಲೆ ಮುಂತಾದವುಗಳನ್ನು ಬಿಸಿಯೂಟದಲ್ಲಿ ನೀಡಲಾಗುತ್ತದೆ.
ಈವರೆಗೆ ಬಿಸಿಯೂಟದಲ್ಲಿ ನೀಡಲಾಗುತ್ತಿರುವ ಸಾಮಾನ್ಯ ಅಕ್ಕಿಯ ಬದಲು ವಾರದಲ್ಲಿ ಎರಡುದಿನ ಸಾಮೆ ಅಥವಾ ಆರ್ಕದಿಂದ ಮಾಡಿದ ಅನ್ನ ಬಡಿಸುವುದು, ಸಾಂಬಾರ್ ಗೂ ತರಕಾರಿ ಜತೆಗೆ ಬೇಳೆಗಳನ್ನು ಬಳಸಲಾಗುತ್ತದೆ. ಸಿಹಿ ಪದಾರ್ಥ ಬದಲು ಸಿರಿಧಾನ್ಯದಿಂದ ಮಾಡಿದ ಕಾಜಾ, ಲಡ್ಡು ಮತ್ತಿತರೆ ಖಾದ್ಯಗಳನ್ನು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.