ಸ್ಮಾರ್ಟ್ ಸಿಟಿಗೆ ಬಲಿಯಾಗಲಿದೆಯೆ ಶಿವಾಜಿನಗರದ ರಸೆಲ್ ಮಾರ್ಕೆಟ್
ಬೆಂಗಳೂರು, ಜುಲೈ 28: ಬೆಂಗಳೂರಿನ ಪಾಲಿಗೆ ಭುಜಕೀರ್ತಿಯಂಥ ಶಿವಾಜಿನಗರದ ರಸೆಲ್ ಮಾರ್ಕೆಟ್ ರೂಪಾಂತರಗೊಳ್ಳಲಿದೆ. ಈ ಮಾರ್ಕೆಟ್ ಗೆ ಹೊಸ ರೂಪ ಕೊಡುವ ಇರಾದೆ ಬಿಬಿಎಂಪಿ ಅವರದು. ಹಿಂಭಾಗದಲ್ಲಿರುವ ರಚನೆಯನ್ನು ಕೆಡವಿ, ನಾಲ್ಕಂತಸ್ತಿನ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಿದೆ.
ಡ್ರೈ ಫ್ರೂಟ್ಸ್ ಪ್ರಿಯರೇ, ಈ ಅಂಗಡಿ ಮಿಸ್ ಮಾಡ್ಕೋಬೇಡಿ!
ಸ್ಮಾರ್ಟ್ ಸಿಟಿ ಯೋಜನೆ ಭಾಗವಾಗಿ ಈ ನಿರ್ಮಾಣ ಕೈಗೊಳ್ಳಲಾಗುವುದು. ಸಂಪೂರ್ಣ ವರದಿಯನ್ನು ಇನ್ನೂ ಸಲ್ಲಿಸಬೇಕಿದೆ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್, ಸ್ಮಾರ್ಟ್ ಸಿಟಿ ಯೋಜನೆಯ ಜವಾಬ್ದಾರಿ ಹೊತ್ತಿರುವ ಬಸವರಾಜ್ ಕಬಾಡೆ ತಿಳಿಸಿದ್ದಾರೆ.
ಆದರೆ, ಈ ರೀತಿ ನಿರ್ಮಾಣ ಮಾಡುವುದರಿಂದ ಪಾರಂಪರಿಕ ಕಟ್ಟಡಕ್ಕೆ ಹಾನಿ ಮಾಡಿದಂತೆ ಆಗುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ. ಹೇಗೆ ಮರ್ಫಿ ಟೌನ್ ನ ಲೈಬ್ರರಿಗೆ ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ಆತಂಕ ಎದುರಾಗಿದೆಯೋ ಅದೇ ರೀತಿ ಬೆಂಗಳೂರಿನ ಹಳೆ ಮಾರ್ಕೆಟ್ ಗೂ ತೊಂದರೆ ಎದುರಾಗಲಿದೆ ಎಂದು ವೃತ್ತಿಯಿಂದ ಆರ್ಕಿಟೆಕ್ಟ್ ಆದ ಮನ್ಸೂರ್ ಅಲಿ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.
ಅವರು ನೂರೈವತ್ತು ವರ್ಷದ ಹಳೆಯ ಸೆಂಟ್ರಲ್ ಕ್ಲಾಕ್ ಟವರ್ ಕೆಡವಲು ಯೋಜನೆ ರೂಪಿಸಿದ್ದಾರೆ. ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಯಾವುದೇ ಯೋಜನೆ ಮಾಡುವ ಮುಂಚೆ ಪರಿಸರ ತಜ್ಞರನ್ನು ಬಿಬಿಎಂಪಿಯವರು ಸಂಪರ್ಕಿಸಬೇಕು. ಪಾರಂಪರಿಕ ಮಾರ್ಕೆಟ್ ಕಟ್ಟಡ ಕೆಡವುವುದನ್ನು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಾರೆ ಮನ್ಸೂರ್ ಅಲಿ.
ರಸೆಲ್ ಮಾರ್ಕೆಟ್ ಹೂಹಣ್ಣು ಮನೆ ಮುಂದಿನ ಬೃಂದಾವನ
ಆದರೆ, ಬಿಬಿಎಂಪಿ ಹೇಳುವ ಪ್ರಕಾರ ಸೆಂಟ್ರಲ್ ಕ್ಲಾಕ್ ಉಳಿಸಿಕೊಳ್ಳುವ ಇರಾದೆ ಇದೆ. ಮತ್ತು ಮಾರ್ಕೆಟ್ ನ ಮುಂಭಾಗ ಹಾಗೇ ಉಳಿಸಿಕೊಂಡು, ಹಿಂಭಾಗದಲ್ಲಿ ಕೆಡುವುವ ಬಗ್ಗೆ ಚಿಂತಿಸಿದೆ. ಪಾದಚಾರಿಗಳಿಗೂ ಅನುಕೂಲವಾಗುವಂತೆ ಅಂಡರ್ ಗ್ರೌಂಡ್ ವಾಹನ ನಿಲುಗಡೆ ವ್ಯವಸ್ಥೆ ಮಾಡುವ ಉದ್ದೇಶ ಬಿಬಿಎಂಪಿಗೆ ಇದೆ.
ಸೇಂಟ್ ಮೇರಿ ಬೆಸಿಲಿಕಾ ಮತ್ತು ರಸೆಲ್ ಮಾರ್ಕೆಟ್ ನ ಮಧ್ಯೆ ಅಂಡರ್ ಗ್ರೌಂಡ್ ವಾಹನ ನಿಲುಗಡೆ ವ್ಯವಸ್ಥೆ ಬರಲಿದೆ. ರಸೆಲ್ ಮಾರ್ಕೆಟ್ ನ ರಸ್ತೆಗಳು ತೀರಾ ಕಿರಿದಾಗಿದ್ದು, ಕಾರುಗಳ ಸಂಚಾರ ತೀರಾ ಕಷ್ಟವಾಗುತ್ತಿದೆ. ಈ ಇಡೀ ಪ್ರದೇಶ ಪಾದಚಾರಿಗಳಿಗೆ ಮೀಸಲಾಗುತ್ತದೆ. ವಾಹನಗಳನ್ನು ಅಂಡರ್ ಗ್ರೌಂಡ್ ನಲ್ಲಿ ನಿಲುಗಡೆ ಮಾಡಬೇಕು ಎನ್ನುತ್ತಾರೆ ಎಂಜಿನಿಯರ್ ಬಸವರಾಜ್ ಕಬಾಡೆ.
ರಸೆಲ್ ಮಾರ್ಕೆಟ್- ಬ್ರಿಟೀಷರ ಕೊಡುಗೆ; ನಮಗೆ ರಸದೌತಣ
ಹಾಳಾಗಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸುವುದು ಕೂಡ ಯೋಜನೆಯಲ್ಲಿ ಸೇರಿಕೊಂಡಿದೆ. ಇಡಿ ಮಾರುಕಟ್ಟೆಯನ್ನು ಹಣ್ಣು, ತರಕಾರಿ ಮತ್ತು ಮಾಂಸ ಮಾರುಕಟ್ಟೆಯಾಗಿ ವಿಭಜನೆ ಮಾಡಲಾಗುವುದು. ಒಮ್ಮೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾದ ಮೇಲೆ ಯೋಜನೆಯ ಪೂರ್ಣ ಸ್ವರೂಪ ಗೊತ್ತಾಗಲಿದೆ ಎನುತ್ತಾರೆ ಪಾಲಿಕೆ ಅಧಿಕಾರಿಗಳು.