ಬೆಂಗಳೂರು ಗಲಭೆ FIR: ಬೆಚ್ಚಿಬಿಳಿಸುತ್ತಿದೆ ಲೂಟಿ, ಸಂಚು!
ಬೆಂಗಳೂರು, ಆ. 16: ಬೆಂಗಳೂರು, ಆ. 16: ಬೆಂಗಳೂರಿನ ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಪುಲಕೇಶಿನಗರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ದೂರು ದಾಖಲಿಸಿದ್ದಾರೆ. ಕಳೆದ ಮಂಗಳವಾರ ರಾತ್ರಿ ಕಾವಲ್ ಬೈರಸಂದ್ರದಲ್ಲಿ ಫೇಸ್ಬುಕ್ ಕಮೆಂಟ್ಗೆ ಸಂಬಂಧಿಸಿದಂತೆ ಒಂದು ಸಮುದಾಯದ ಜನರು ದೊಂಬಿ ನಡೆಸಿದ್ದರು. ದೊಂಬಿ ವೇಳೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಾಶ ಮಾಡಿದ್ದರು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ನವೀನ್ ಫೇಸ್ಬುಕ್ ಕಮೆಂಟ್ ಮಾಡಿದ್ದು ಗಲಭೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಶಾಸಕರು ಅವರ ಸಹೋದರ ಮನೆಗಳು ಸೇರಿದಂತೆ, ವಾಹನಗಳಿಗೆ ಬೆಂಕಿ ಹಚ್ಚಿ ಸುಡಲಾಗಿತ್ತು.
Recommended Video
ಜೊತೆಗೆ ಕಾವಲ್ ಬೈರಸಂದ್ರದಲ್ಲಿ ಹಲವು ಮನೆ-ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ದೂರು ಕೊಟ್ಟಿದ್ದಾರೆ. ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ದೂರಿನಲ್ಲಿರುವ ಮಾಹಿತಿಗಳು ಬೆಚ್ಚಿ ಬೀಳಿಸುವಂತಿವೆ. ಅದರ ಸಂಪೂರ್ಣ ವಿವರಗಳು ಇಲ್ಲಿವೆ.
ಬೆಂಗಳೂರು ಗಲಭೆ; ಆಗಸ್ಟ್ 18ರ ತನಕ ನಿಷೇಧಾಜ್ಞೆ ವಿಸ್ತರಣೆ
ಏಕಾಏಕಿ ದಾಳಿ
ತಮ್ಮ ಪೂರ್ವಜರು ಸೇರಿದಂತೆ ತಾವು ಹುಟ್ಟಿ-ಬೆಳೆದಿದ್ದ ಮನೆಯ ಮೇಲಿನ ದಾಳಿಯಿಂದ ನೊಂದಿದ್ದರಿಂದ ತಡವಾಗಿ ದೂರು ಸಲ್ಲಿಸುತ್ತಿರುವುದಾಗಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾಹಿತಿ ಕೊಟ್ಟಿದ್ದಾರೆ. ಘಟನೆ ನಡೆದು ಮೂರು ದಿನಗಳ ನಂತರ ದೂರು ಸಲ್ಲಿಸಿರುವುದಕ್ಕೆ ಅವರು ಕಾರಣ ಕೊಟ್ಟಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ದೂರು ಆಧರಿಸಿ ಪೊಲೀಸರು ಎಫ್ಐಆರ್ ಹಾಕಿದ್ದಾರೆ. ಮಂಗಳವಾರ ರಾತ್ರಿ ಏಕಾಏಕಿ ಪೂರ್ವ ತಯಾರಿಯೊಂದಿಗೆ 2 ಸಾವಿರ ರಿಂದ 3 ಸಾವಿರ ಜನರು ನಮ್ಮ ಮನೆಗೆ ಬೆಂಕಿ ಹಚ್ಚಿ ದರೋಡೆ ಮಾಡಿದ್ದಾರೆಂದು ಉಲ್ಲೇಖಿಸಿದ್ದಾರೆ. ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಕಾರುಗಳು, ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ಒಮ್ಮೆಲೆ ಮನೆಯೊಳಗೆ ನುಗ್ಗಿ ದಸ್ತಾವೇಜು, ಚಿನ್ನಾಭರಣ ದೋಚಿದ್ದಾರೆಂದು ಎಫ್ಐಆರ್ ದಾಖಲಿಸಲಾಗಿದೆ.
ಸಜೀವ ದಹನದ ದುರುದ್ದೇಶ
ದುಷ್ಕರ್ಮಿಗಳು, ನಮ್ಮ ಇಡೀ ಕುಟುಂಬವನ್ನು ಸಜೀವವಾಗಿ ದಹನ ಮಾಡುವ ಉದ್ದೇಶದಿಂದ ಕೃತ್ಯವನ್ನು ಎಸಗಿದ್ದಾರೆಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ದೂರು ದಾಖಲಿಸಿದ್ದಾರೆ. ಅದರಂತೆ ಎಫ್ಐಆರ್ ದಾಖಲಾಗಿದೆ. ಇಡೀ ಘಟನೆ ಪೂರ್ವ ನಿಯೋಜಿತ. ಮೊದಲೇ ಒಳಸಂಚು ರೂಪಿಸಿ ಕಿಡಗೇಡಿಗಳ ಮುಖಾಂತರ ನಮ್ಮ ಇಡೀ ಕುಟುಂಬವನ್ನು ಹತ್ಯೆಮಾಡುವ ಉದ್ದೇಶದಿಂದ ದಾಳಿ ಮಾಡಲಾಗಿದೆ.
ಮಾರಕಾಸ್ತ್ರಗಳಿಂದ ಮನೆಯೊಳಗೆ ನುಗ್ಗಿದ್ದ ಕಿಡಿಗೇಡಿಗಳು ಮನೆಗೆ ಬೆಂಕಿ ಹಚ್ಚಿದ್ದಾರೆಂದು ಎಫ್ಐಆರ್ ದಾಖಲಾಗಿದೆ.
ಚಿನ್ನಾಭರಣ ದರೋಡೆ
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯಲ್ಲಿನ ಒಟ್ಟು 28 ವಸ್ತುಗಳನ್ನು ಲೂಟಿ ಮಾಡಲಾಗಿದೆ. ಮನೆಯಲ್ಲಿನ ಸುಮಾರು 20 ಲಕ್ಷ ರೂ ಮೌಲ್ಯದ 5 ನೂರು ಗ್ರಾಂ ಚಿನ್ನಾಭರಣ, ಕಾವಲ್ ಬೈರಸಂದ್ರದ ವಾಸದ ಮನೆಯ ಮೂಲ ಪತ್ರಗಳು, ಶ್ಯಾಂಪುರ ರಸ್ತೆಯ ವಾಸದ ಮನೆ ಹಾಗೂ ವಾಣಿಜ್ಯ ಕಟ್ಟಡದ ಮೂಲಪತ್ರಗಳು, ವಾಹನಗಳ ಮೂಲ ದಾಖಲೆಗಳು, ಸಾದಹಳ್ಳಿ ಹಾಗೂ ಇತರೇ ಜಮೀನಿನ ಮೂಲಪತ್ರಗಳು, ಅಂದಾಜು 50 ಲಕ್ಷ ರೂ. ಮೌಲ್ಯದ ಆರು ಗಾಡ್ರೇಜ್ ಬೀರುಗಳು, ಎರಡು ಕಂಪ್ಯೂಟರ್ಗಳು, ಎರಡು ಲ್ಯಾಪ್ಟಾಪ್ಗಳು, ಒಂದು ಟೆಲಿಫೋನ್, ಎರಡು ಟಿವಿಗಳು, ಎರಡು ಕಾರ್ಯನಿರ್ವಾಹಕ ಕಡತಗಳನ್ನು ಲೂಟಿ ಮಾಡಿದ್ದಾರೆ.
ಮನೆಯ ಹೊರಗಡೆ ನಿಲ್ಲಿಸಿದ್ದ ಹೊಂಡಾ ಬ್ರಿಯೋ ಕಾರು, ಯಮಹಾ ಆರ್ಎಕ್ಸ್ ಬೈಕ್ , ಎರಡು ರಾಯನ್ ಎಲ್ಫೀಲ್ಡ್ ಬೈಕ್ಗಳು, ಬಜಾಜ್ ಸ್ಕೂಟರ್ ಸೇರಿದಂತೆ ಒಟ್ಟು ಸುಮಾರು 20 ಲಕ್ಷ ರೂ. ಮೌಲ್ಯದ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಸಹೋದರರ ಮನೆಯಲ್ಲಿ ಲೂಟಿ
ಇನ್ನು ಶಾಸಕರ ಸಹೋದರ ಮಹೇಶ್ ಕುಮಾರ್ ಅವರಿಗೆ ಸೇರಿದ 10 ಲಕ್ಷ ರೂ ಮೌಲ್ಯದ 250 ಗ್ರಾಂ ಚಿನ್ನಾಭರಣ, ಬೀರುವಿನಲ್ಲಿದ್ದ 8 ರಿಂದ 8.5 ಲಕ್ಷ ರೂ. ನಗದು ಹಣವನ್ನು ದೋಚಿದ್ದಾರೆ. ಜೊತೆಗೆ ವಾಹನಗಳ ನೋಂದಣಿ ಪತ್ರಗಳು, ಪಾಸ್ಪೋರ್ಟ್ಗಳು, ವಿದ್ಯಾಭ್ಯಾಸದ ಎಲ್ಲಾ ಕಾಗದ ಪತ್ರಗಳು, ಮಹೇಶ್ ಕುಮಾರ್ ಅವರಿಗೆ ಸೇರಿದ ಎಲ್ಲ ಆಸ್ತಿಗಳ ಮೂಲ ದಾಖಲೆಗಳನ್ನು ನಷ್ಠ ಮಾಡಲಾಗಿದೆ.
ಮತ್ತೊಬ್ಬ ಸಹೋದರ ಚಂದ್ರಶೇಖರ್ ಅವರಿಗೆ ಸೇರಿದ ಅಂದಾಜು 20 ಲಕ್ಷ ರೂ. ಮೌಲ್ಯದ 500 ಗ್ರಾಂ ಚಿನ್ನಾಭರಣ, ಜಮೀನು ಮತ್ತು ನಿವೇಶನ ಮೂಲ ಪತ್ರಗಳು, ವಿದ್ಯಾಭ್ಯಾಸದ ಎಲ್ಲ ಮೂಲ ಪ್ರಮಾಣಪತ್ರಗಳು, 3 ಲಕ್ಷ ರೂಪಾಯಿ ನಗದು ಹಣವನ್ನು ಕಿಡಗೇಡಿಗಳು ದೋಚಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ದೂರಿನನ್ವಯ ಸುಮಾರು 3 ಕೋಟಿ ರೂಪಾಯಿಗಳಷ್ಟು ಹಾನಿಯಾಗಿದೆ ಎಂದು ಎಫ್ಐಆರ್ ದಾಖಲಾಗಿದೆ.