ರೋಟರಿ ಫೌಂಡೇಶನ್ ಗೆ 100 ಕೋಟಿ ರೂ. ದಾನ ನೀಡಿದ ಬೆಂಗಳೂರು ಉದ್ಯಮಿ
ಬೆಂಗಳೂರು, ಜುಲೈ 2: ಬೆಂಗಳೂರಿನ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಬರೋಬ್ಬರಿ 100 ಕೋಟಿ ರೂಪಾಯಿಯನ್ನು ರೋಟರಿ ಫೌಂಡೇಶನ್ ಗೆ ದಾನ ನೀಡಿದ್ದಾರೆ.
ಸಾರ್ವಜನಿಕರಿಗೆ ಉಪಯೋಗವಾಗುವಂಥಹ ನೀರು, ನೈರ್ಮಲ್ಯ, ಶಿಕ್ಷಣ, ಮಕ್ಕಳ ಆರೋಗ್ಯ ಸೇರಿದಂತೆ ರೋಟರಿ ಸಂಸ್ಥೆ ಕೈಗೊಳ್ಳಲಿರುವ ಯೋಜನೆಗಳಿಗಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ.
ಅರ್ಧ ಆಸ್ತಿ ದಾನ ಮಾಡಲು ನಂದನ್ ನಿಲೇಕಣಿ ದಂಪತಿ ನಿರ್ಧಾರ
ಸ್ವಾತಂತ್ರ್ಯ ಹೋರಾಟಗಾರ ಕಾಮೇಶ್ ಅವರ ಪುತ್ರ ಡಿ. ರವಿಶಂಕರ್ ಈ ಭಾರೀ ಮೊತ್ತವನ್ನು ರೋಟರಿ ಸಂಸ್ಥೆಗೆ ನೀಡಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ರೋಟರಿ ಅಧಿಕಾರಿ ಸುರೇಶ್ ಹರಿ, "ರವಿಶಂಕರ್ ಅವರ ತಂದೆ ಕಾಮೇಶ್ ಅವರು ವಿನೋಬಾ ಭಾವೆ ಅವರ ಭೂದಾನ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ವಿನೋಬಾ ಭಾವೆಯವರ ಚಳುವಳಿಗೆ ಎಲ್ಲಾ ಭೂಮಿಯನ್ನು ದಾನ ಮಾಡಿದ ಇತಿಹಾಸ ಅವರ ತಂದೆಗಿದೆ. ಜೊತೆಗೆ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೂ ಹೋಗಿದ್ದರು," ಎಂದಿದ್ದಾರೆ.
ರವಿಶಂಕರ್ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿಯೇ ಅವರನ್ನು ಸಾಕಿದ್ದರು. ಈ ಹಿನ್ನೆಲೆಯಲ್ಲಿ ಬಡತನವನ್ನು ಅನುಭವಿಸಿ ಬಂದಿರುವ ರವಿಶಂಕರ್ ಅದೇ ಸಮುದಾಯದವರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಹಣವನ್ನು ದಾನ ನೀಡಿದ್ದಾರೆ ಎನ್ನುತ್ತಾರೆ ಸುರೇಶ್ ಹರಿ.
ರವಿಶಕರ್ ಅವರು ನೀಡಿದ ಹಣದಲ್ಲಿ ಶೇಕಡಾ 50 ರಷ್ಟು ಹಣ ವಿವಿಧ ಯೋಜನೆಗಳಿಗಾಗಿ ಜಾಗತಿಕವಾಗಿ ಬಳಕೆಯಾಗಲಿದೆ. ಉಳಿದ ಶೇಕಡಾ 50ರಷ್ಟು ಹಣ ಮಕ್ಕಳ ಆರೋಗ್ಯ ಸೇರಿದಂತೆ ಉಳಿದ ಆರು ರೀತಿಯ ಕೆಲಸಗಳಿಗೆ ಬಳಕೆಯಾಗಲಿದೆ ಎಂದು ಸುರೇಶ್ ಹರಿ ಮಾಹಿತಿ ನೀಡಿದ್ದಾರೆ .
ರವಿಶಂಕರ್ ಅವರ ಜೊತೆಗೆ ಸೇರಿ ಸುರೇಶ್ ಹರಿ ಅವರು 'ಹರ ಹೌಸಿಂಗ್' ಎನ್ನುವ ಕಂಪನಿ ಸ್ಥಾಪಿಸಿದ್ದರು. ಇದರಲ್ಲಿ ದುಡಿದ ಹಣವನ್ನು ಅವರೀಗ ದಾನ ನೀಡಿದ್ದಾರೆ.
2025ರ ವೇಳೆಗೆ ರೋಟರಿ ಸಂಸ್ಥೆ ಪರವಾಗಿ ಕಾರ್ಪಸ್ ಫಂಡ್ ರೂಪದಲ್ಲಿ 25 ಬಿಲಿಯನ್ ಡಾಲರ್ ಗಳನ್ನು ಸಂಗ್ರಹಿಸುವುದು ಸುರೇಶ್ ಹರಿ ಅವರ ಯೋಜನೆಯಾಗಿದೆ.