ಬೆಳ್ಳಂದೂರು ಕೆರೆ ಮತ್ತೆ ನೊರೆ ಉಗುಳಲು ಯಾರು ಕಾರಣ?
ಬೆಂಗಳೂರು, ಜುಲೈ, 29: ಬೆಳ್ಳಂದೂರು ಕೆರೆ ಮಾಲಿನ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಅದರೊಂದಿಗೆ ಬೆಳ್ಳಂದೂರು ಕೆರೆಯಲ್ಲೂ ಬಿಳಿ ನೊರೆ ಆಳೆತ್ತರಕ್ಕೆ ಏರಿದೆ.
ಗುರುವಾರ ರಾತ್ರಿಯಿಂದ ಆರಂಭವಾದ ಮಳೆಗೆ ಇಡೀ ಮಹಾನಗರವೇ ಬೆಚ್ಚಿ ಬಿದ್ದಿದೆ. ಬೆಳ್ಳಂದೂರು ಕೆರೆಗೆ ನೀರಿನ ಪ್ರವಾಹ ನುಗ್ಗಿದ್ದು ನೊರೆ ಹತ್ತಿರದ ನಿವಾಸಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.
ಬೆಂಗಳೂರಿನ ಮರ್ಯಾದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದ ಕರೆ ಇದೀಗ ನೋಡಲು ಸುಂದರ, ಆದರೆ ಮಾಲಿನ್ಯದ ಅಂತರಾಳ. ನೊರೆ ಪ್ರಮಾಣ ವ್ಯಾಪಕವಾಗಿದ್ದು ಹತ್ತಿರದ ನಿವಾಸಿಗಳು ಸಾಂಕ್ರಾಮಿಕ ರೋಗ ಭೀತಿ ಎದುರಿಸುವಂತೆ ಆಗಿದೆ.[ಮಳೆ ಬಂತು, ಕೊಳಚೆ ನೀರಿನ ಕೆರೆಯಾದ ಬೆಂಗಳೂರು]
ವರ್ಷದ ಸಮಸ್ಯೆ
ಬೆಳ್ಳಂದೂರು ಕೆರೆಯಲ್ಲಿ ರಾಸಾಯನಿಕ ನೊರೆ ಮತ್ತು ಬೆಂಕಿ ಕಾಣಿಸಿಕೊಂಡು ವರ್ಷಗಳೇ ಉರುಳಿದೆ. ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದ್ದು ಶಾಶ್ವತ ಪರಿಹಾರ ಮಾತ್ರ ಇನ್ನು ಸಿಕ್ಕಿಲ್ಲ.
ಗೂಗಲ್ ಮ್ಯಾಪ್ ನಲ್ಲಿ ಮಾನ ಹರಾಜು
ರಾಸಾಯನಿಕ ನೊರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು ಹಾಕಿದ್ದು ಹಿಂದೆ ಸುದ್ದಿಯಾಗಿತ್ತು. ಬಿಳಿ ನೊರೆ ತುಂಬಿದ ಕೆರೆಯನ್ನು ಮ್ಯಾಪ್ ಬಿತ್ತರಿಸಿತ್ತು.
ಅವರ ಮೇಲೆ ಇವರ ದೂರು
ಬಿಎಂಎಂಪಿ ಕೇಳಿದರೆ ಕರೆ ನಮ್ಮದಲ್ಲ ಬಿಡಿಎದು, ಬಿಡಿಎ ಕೇಳಿದರೆ ಸರ್ಕಾರದ್ದು ಎಂದು ಹೇಳುತ್ತಲೇ ಕಾಲಹರಣ ಮಾಡಿದ್ದವು. ಬಿಟ್ಟರೆ ಪರಿಹಾರ ಹುಡುಕಲು ಪ್ರಮಾಣಿಕ ಯತ್ನ ಮಾಡಲೇ ಇಲ್ಲ.
ಸಮಿತಿ ರಚನೆಯಾಗಿದೆ
ರಾಸಾಯನಿಕ ತುಂಬಿರುವ ಬೆಳ್ಳಂದೂರು ಕೆರೆ ಪುನಶ್ಚೇತನ ಹಾಗೂ ಅಭಿವೃದ್ಧಿಗೆ ಸಂಬಂಧಿಸಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 18 ಸದಸ್ಯರ ತಜ್ಞರ ಸಮಿತಿ ರಚನೆ ಮಾಡಿದೆ. ಇದು ವರದಿ ಸಲ್ಲಿಕೆ ಮಾಡಿ ಇನ್ನು ಅದು ಅನುಷ್ಠಾನ ಆಗುವುದು ಯಾವ ಕಾಲಕ್ಕೋ?