ಬೆಂಗಳೂರು:ಕೊರೊನಾ ಹೊಂದಿದ್ದ ಮಗನನ್ನು ಬಚ್ಚಿಟ್ಟಿದ್ದ ರೈಲ್ವೆ ಅಧಿಕಾರಿ ಅಮಾನತು
ಬೆಂಗಳೂರು, ಮಾರ್ಚ್ 20: ಮಗನಿಗೆ ಕೊರೊನಾ ಬಂದಿರುವುದು ತಿಳಿದಿದ್ದರೂ ನೂರಾರು ಮಂದಿ ಇರುವ ರೈಲ್ವೆ ವಿಶ್ರಾಂತಿ ಗೃಹದಲ್ಲಿ ತಂಗಲು ಅವಕಾಶ ಮಾಡಿಕೊಟ್ಟಿದ್ದ ರೈಲ್ವೆ ಮಹಿಳಾ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಹೌದು.. ನೈಋತ್ಯ ರೈಲ್ವೇ ಇಲಾಖೆಯ ಗೆಜೆಟೆಡ್ ಅಧಿಕಾರಿಯೊಬ್ಬರು ಇಂತಹುದೊಂದು ಅಪಾಯ ತಂದೊಡ್ಡಿದ್ದು, ಇತ್ತೀಚೆಗೆ ಜರ್ಮನಿಯಿಂದ ವಾಪಾಸ್ ಆಗಿದ್ದ ತಮ್ಮ ಮಗನನ್ನು ಯಾವುದೇ ರೀತಿಯ ವೈದ್ಯಕೀಯ ತಪಾಸಣೆಗೊಳಪಡಿಸದೇ ಇಲಾಖೆಯ ಕ್ವಾರ್ಟರ್ಸ್ ನಲ್ಲಿ ವಿಶ್ರಾಂತಿ ಮಾಡಲು ಬಿಟ್ಟಿದ್ದಾರೆ.
ಕೊರೊನಾ ಸೋಂಕಿತನಿಗೆ ರೈಲ್ವೆ ಇಲಾಖೆ ಕೊಠಡಿಯಲ್ಲೇ ಇರಲು ಅವಕಾಶ ಕೊಟ್ಟ ಅಧಿಕಾರಿ
ಈಗಾಗಲೇ ಈ ಸಂಬಂಧ ಇಲಾಖೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಈ ವಿಶ್ರಾಂತಿ ಗೃಹದಲ್ಲಿ ತಂಗಿದ್ದ ಇತರೆ ಅಧಿಕಾರಿಗಳನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ. ಅಲ್ಲದೆ ಮಹಿಳಾ ಅಧಿಕಾರಿಯನ್ನೂ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಆಕೆಯೊಂದಿಗೆ ಸಂಪರ್ಕದಲ್ಲಿದ್ದ ಎಲ್ಲ ಸಿಬ್ಬಂದಿಗಳು ಮತ್ತು ಅಧಿಕಾರಿಗಳನ್ನೂ ತಪಾಸಣೆ ಮಾಡಲಾಗುತ್ತಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಅಧಿಕಾರಿಯ ವೈರಸ್ ಸೋಂಕಿತ ಮಗ ತಂಗಿದ್ದ ಮಾರ್ಚ್ 13ರಿಂದ ಮಾರ್ಚ್ 1ರವರೆಗೂ ಸುಮಾರು 40 ಮಂದಿ ಅದೇ ವಿಶ್ರಾಂತಿ ಗೃಹದಲ್ಲಿ ತಂಗಿದ್ದರು ಎಂಬ ಅಘಾತಕಾರಿ ಬೆಳಕಿಗೆ ಬಂದಿದೆ. ಇದೀಗ ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಮತ್ತು ಅಧಿಕಾರಿಗಳಿಗೆ ಸಾಕಷ್ಟು ಮುಂಜಾಗ್ರತಾ ಸೂಚನೆ ನೀಡಿದ್ದರೂ ಜವಾಬ್ದಾರಿಯುತ ಅಧಿಕಾರಿಯ ಬೇಜವಾಬ್ದಾರಿ ನಡೆ ಇದೀಗ ರೈಲ್ವೆ ಇಲಾಖೆ ಇತರೆ ಸಿಬ್ಬಂದಿಗಳ ಆರೋಗ್ಯವನ್ನು ಅಪಾಯಕ್ಕೂ ದೂಡಿದೆ.
ಮೂಲಗಳ ಪ್ರಕಾರ ಇದೇ ಮಾರ್ಚ್ 13ರಂದು ಮಹಿಳಾ ಅಧಿಕಾರಿಯ ಮಗ ಜರ್ಮನಿಯಿಂದ ಸ್ಪೈನ್ ಮೂಲಕವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದು, ಅಧಿಕಾರಿಗಳ ವಿಶ್ರಾಂತಿ ಗೃಹ (ಒಆರ್ ಹೆಚ್)ದಲ್ಲಿ ತಂಗಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲೇ ಅಧಿಕಾರಿಯ ಮನೆ ಇದೆಯಾದರೂ, ಅಧಿಕಾರಿ ಆತನನ್ನು ಮನೆಗೆ ಕಳುಹಿಸಿಲ್ಲ.