ಬೆಂಗಳೂರಿನ ಏಳು ದಿನಗಳ ಪುಸ್ತಕ ಹಬ್ಬದಲ್ಲಿ ಭಾಗವಹಿಸಿ
ಬೆಂಗಳೂರು, ಅ, 19 : ರಾಜ್ಯದ ಅತಿ ದೊಡ್ಡ 'ಬೆಂಗಳೂರು ಪುಸ್ತಕೋತ್ಸವ' ಅಕ್ಟೋಬರ್ 19ರ ಸೋಮವಾರದಿಂದ ಅ. 25ರವರೆಗೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಸತತ ಏಳು ದಿನಗಳ ಕಾಲ ನಡೆಯಲಿದ್ದು, ಈಗಾಗಲೇ ಪುಸ್ತಕ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಂಗಳೂರು ಪುಸ್ತಕೋತ್ಸವವನ್ನು ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ, ಇಂಡಿಯಾ ಕಾಮಿಕ್ಸ್ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಸಂಜೆ 5 ಗಂಟೆಗೆ ಪುಸ್ತಕೋತ್ಸವ ಉದ್ಘಾಟಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರ ಅಧ್ಯಕ್ಷತೆ ವಹಿಸಲಿದ್ದಾರೆ.[ನಿಮ್ಮ ಇಷ್ಟದ ಪುಸ್ತಕ ಓದಲ್ಲೊಂದು ವೆಬ್ ತಾಣ]
ಪುಸ್ತಕೋತ್ಸವದಲ್ಲಿ ಕನ್ನಡ, ಹಿಂದಿ, ಉರ್ದು, ಮಲಯಾಳಂ, ತೆಲುಗು, ತಮಿಳು, ಇಂಗ್ಲಿಷ್ ಹಲವು ಭಾಷೆಯ ಪುಸ್ತಕಗಳು ದೊರೆಯಲಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಅವರ ಆಸಕ್ತಿಗನುಗುಣವಾಗಿ ಪುಸ್ತಕಗಳು ಲಭಿಸಲಿದೆ. ಪ್ರವೇಶ ದರವನ್ನು 20 ರೂ ಎಂದು ನಿಗದಿಪಡಿಸಲಾಗಿದೆ.
ಪುಸ್ತಕೋತ್ಸವದಲ್ಲಿ ಒಟ್ಟು 300ಕ್ಕೂ ಹೆಚ್ಚು ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ. ಕನ್ನಡಕ್ಕಾಗಿಯೇ 100ಕ್ಕೂ ಹೆಚ್ಚು ಮಳಿಗೆಗಳನ್ನು ಮೀಸಲಿರಿಸಲಾಗಿದೆ ಎಂದು ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ ಕಾರ್ಯದರ್ಶಿ ದೇವರು ಭಟ್ ಹೇಳಿದ್ದಾರೆ.[ಡಿವಿಜಿ ಮಂಕುತಿಮ್ಮನ ಕಗ್ಗಕ್ಕೆ ಸರಳ ಕನ್ನಡದ ಸ್ಪರ್ಶ]
'ಉತ್ಸವದ ಜೊತೆಗೆ ಪ್ರತಿನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪುಸ್ತಕ ಪ್ರೇಮಿಗಳಿಗೆ ಜ್ಞಾನದ ಜೊತೆಯಲ್ಲಿ ಮನರಂಜನೆಯೂ ದೊರೆಯುತ್ತದೆ. ಕಳೆದ ಬಾರಿ 10 ದಿನ ಪುಸ್ತಕೋತ್ಸವ ನಡೆಸಲಾಗಿತ್ತು. ಆದರೆ ಈ ಬಾರಿ 7 ದಿನ ಮಾತ್ರ ನಡೆಸಲು ರಾಜ್ಯಸರ್ಕಾರ ಅನುಮತಿ ನೀಡಿದೆ' ಎಂದು ಉತ್ಸವದ ನಿರ್ದೇಶಕ ಬಿ.ಎಸ್ ರಘುರಾಮ್ ತಿಳಿಸಿದ್ದಾರೆ .