ನಮ್ಮ ಮೆಟ್ರೋಕ್ಕೆ ಯಾವ ಹೆಸರಿಡಬೇಕು? ನೀವೇ ಹೇಳಿ
ಬೆಂಗಳೂರು, ನವೆಂಬರ್, 17: ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವಿನ ಮೆಟ್ರೋ ರೈಲು ಸಂಚಾರ ಉದ್ಘಾಟನೆ ಕಾರ್ಯಕ್ರಮ ರಾಜಕಾರಣಿಗಳ ಮಾತಿನ ಮಂಟಪಕ್ಕೆ ಸಾಕ್ಷಿಯಾಗಿದ್ದು ಮಾತ್ರ ವಿಪರ್ಯಾಸ. ಇಲ್ಲಿಯೂ ಸಹ 'ಹೆಸರಿಡುವ ರಾಜಕಾರಣ' ಒಳನುಸುಳಿತ್ತು.
ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತ ಕುಮಾರ್, ವೆಂಕಯ್ಯ ನಾಯ್ಡು, ಶಾಸಕ ಕೃಷ್ಣಪ್ಪ ಎಲ್ಲರ ಬಾಯಲ್ಲೂ ಹೆಸರು ಬದಲಾವಣೆ, ಮರು ನಾಮಕರಣದ ಮಾತೇ. ಬೆಂಗಳೂರು ಸಂಸ್ಥಾಪಕ ಕೆಂಪೇಗೌಡ, ಬಾಲಗಂಗಾಧರ ನಾಥ ಸ್ವಾಮೀಜಿ, ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡುವ ಬಗ್ಗೆಯೂ ವೇದಿಕೆ ಸಾಕ್ಷಿಯಾಯಿತು. ಗಿರೀಶ್ ಕಾರ್ನಾಡ್ ಅವರ ಟಿಪ್ಪು ಸುಲ್ತಾನ್ ಹೇಳಿಕೆ ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದೂ ಆಯಿತು.[ಮಾಗಡಿ ರಸ್ತೆ-ಮೈಸೂರು ರಸ್ತೆ ಮಾರ್ಗದ ವಿಶೇಷತೆಗಳೇನು?]
ಮೆಟ್ರೋ ರೀಚ್ 2 ಉದ್ಘಾಟನೆಯಲ್ಲಿ ಕಂಡಿದ್ದು ಮತ್ತು ಕೇಳಿದ್ದು..... ಹಾ ನಿಮ್ಮ ಪ್ರಕಾರ ಮೆಟ್ರೋಗೆ ಯಾವ ಹೆಸರು ಇಡಬೇಕು? ಓಟ್ ಮಾಡಿ
ಕೇಂದ್ರ ಸರ್ಕಾರದ ಮೇಲೆ ಆರೋಪ
ಮೆಟ್ರೋ ಪರಿಕಲ್ಪನೆಯನ್ನು ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಾಕಿದರೂ ನಂತರ ಅದಕ್ಕೆ ಸಾಕಷ್ಟು ಅನುದಾನ ನೀಡಿದ್ದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ಇದನ್ನು ಯಾರೂ ಎಲ್ಲಿಯೂ ಹೇಳುತ್ತಿಲ್ಲ. ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದ ಮೇಲೆ ನರ್ಮ್ ಯೋಜನೆ ಅಡಿಯಲ್ಲಿ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿದೆ. ಇದು ಯಾಕೆ ಎಂದು ಕೇಂದ್ರ ಸರ್ಕಾರದ ಮಂತ್ರಿಗಳೇ ಹೇಳಬೇಕು ಎಂದು ಕೃಷ್ಣಪ್ಪ ಹೇಳಿದರು.
ಪರಮೇಶ್ವರ ಹೆಸರು ಬಿಟ್ಟ ಕೃಷ್ಣಪ್ಪ
ಸಭೆಯಲ್ಲಿ ಮಾತನಾಡಲು ಆರಂಭಿಸಿದ ಶಾಸಕ ಕೃಷ್ಣಪ್ಪ ಕೇಂದ್ರ ಸಚಿವರು, ಮುಖ್ಯಮಂತ್ರಿ ಆದಿಯಾಗಿ ಎಲ್ಲರ ಹೆಸರನ್ನು ಹೇಳಿಕೊಂಡು ಬಂದರು. ಆದರೆ ಕೇಂದ್ರ ಸಚಿವ ಅನಂತ್ ಕುಮಾರ್ ಪಕ್ಕದಲ್ಲಿಯೇ ಕುಳಿತಿದ್ದ ಕೆಪಿಸಿಸಿ ಅಧ್ಯಕ್ಷ, ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಹೆಸರನ್ನು ಬಿಟ್ಟಿದ್ದರು. ನಂತ ಹಿಂದಿದ್ದ ಯಾರೋ ಬಂದು ನೆನಪು ಮಾಡಿಕೊಟ್ಟ ಮೇಲೆ ಕಣ್ಮಿಣಿ, ನಾಯಕರು ಎಂದು ಪರಮೇಶ್ವರ ಹೆಸರು ಹೇಳಿದರು.
ಮತ್ತೆ ಎಡವಟ್ಟು ಮಾಡಿಕೊಂಡ ಸಿಎಂ
ಮಾತಿನ ಭರದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪುವುದು ಸಾಮಾನ್ಯವಾಗಿಬಿಟ್ಟಿದೆ. ಮೆಟ್ರೋ ಉದ್ಘಾಟನೆ ವೇಳೆಯೂ ಅಂಥದ್ದೇ ಎಡವಟ್ಟು ಮಾಡಿಕೊಂಡರು. ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿ ಎನ್ನುವ ಬದಲು ದಿವಂಗತ ಆದಿಚುಂಚನಗಿರಿ ಸ್ವಾಮೀಜಿ ಎಂದಷ್ಟೇ ಹೇಳಿ ಪ್ರಮಾದ ಮಾಡಿಕೊಂಡರು ನಂತರ ಸಾವರಿಸಿಕೊಂಡು ಮಾತು ಮುಂದುವರಿಸಿದರು.
ಮುಖ್ಯಮಂತ್ರಿ ಏನು ಮಾಡಿದ್ರೂ ಮಾತಾಡ್ತಾರೆ!
ಮೆಟ್ರೋ ನಿಲ್ದಾಣಗಳಲ್ಲಿ ಸಮರ್ಪಕ ಮೂಲ ಸೌಕರ್ಯ ವ್ಯವಸ್ಥೆಯಾಗಲು ಮುಖ್ಯಮಂತ್ರಿ ನಗರ ಪ್ರದಕ್ಷಿಣೆ ಮಾಡಿದ್ದೇ ಕಾರಣ. ಮುಖ್ಯಮಂತ್ರಿ ನಗರ ಸಂಚಾರ ಮಾಡಿದರೆ ಟ್ರಾಫಿಕ್ ಜಾಮ್ ಎನ್ನುತ್ತಾರೆ, ಅದೇ ಎಲ್ಲಿಯೂ ತೆರಳದಿದ್ದರೆ ಬಂದಿಲ್ಲ ಎನ್ನುತ್ತಾರೆ ಎಂದು ಕೃಷ್ಣಪ್ಪ ಹಿಂದೆ ಕೇಳಿ ಬಂದಿದ್ದ ಟೀಕೆಗಳಿಗೆ ಉತ್ತರ ನೀಡಿದರು.
ವಿಮಾನ ನಿಲ್ದಾಣ ಹೆಸರು ಬದಲಾವಣೆಯಿಲ್ಲ
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಟ್ಟಿರುವ ಕೆಂಪೇಗೌಡರ ಹೆಸರು ಬದಲಾವಣೆ ಮಾಡುವ ಪ್ರಮೇಯವೇಇಲ್ಲ. ಕೇಂದ್ರ ಸರ್ಕಾರ ಹೆಸರು ಬದಲಾವಣೆ ಸಂಬಂಧ ಯಾವ ಅರ್ಜಿಗಳನ್ನು ಸ್ವೀಕಾರ ಮಾಡಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಖಡಾಖಂಡಿತವಾಗಿ ಹೇಳಿದರು.
ಕಸ ವಿಲೇವಾರಿಗೆ ಜನ ಬೆಂಬಲ!
ಬೆಂಗಳೂರಿಗೆ ಇದ್ದ ಹೆಸರುಗಳು ಬದಲಾಗುತ್ತಿದೆ. ಗಾರ್ಬೆಜ್ ಸಿಟಿ ಹೆಸರು ಸುತ್ತಿಕೊಳ್ಳುತ್ತಿದ್ದೆ. ಇದನ್ನು ಬದಲಾವಣೆ ಮಾಡುವ ಜವಾಬ್ದಾರಿ ನಮ್ಮ ಎಲ್ಲರ ಮೇಲಿದೆ. ಬಿವಿಎಂಪಿ ನಿರ್ದೇಶನ ನೀಡುವಂತೆ ಒಣ ಕಸ ಮತ್ತು ಹಸಿ ಕಸ ಬೇರೆ ಬೇರೆ ಮಾಡಿ ಇಡುವುದನ್ನು ರೂಢಿ ಮಾಡಿಕೊಳ್ಳಬೇಕು ಎಂದು ನಾಗರಿಕರಲ್ಲಿ ಸಿಎಂ ಮನವಿ ಮಾಡಿಕೊಂಡರು.
ಪ್ರಿಯಾ ಕೃಷ್ಣಗೆ ಜೈ!
ನಾಯಕರು ಮಾತನಾಡಲು ನಿಂತಾಗ ಕೃಷ್ಣಪ್ಪ ಮತ್ತು ಪ್ರಿಯಾ ಕೃಷ್ಣ ಹೆಸರು ಹೇಳುತ್ತಿದ್ದಂತೆ ಸಭಿಕರ ಸಾಲಿನಿಂದ ಜೈ ಕಾರ ಕೇಳಿ ಬರುತ್ತಿತ್ತು. ಅಲ್ಲದೇ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭ ಮಾಡುವ ವೇಳೆ ಘೋಷಣೆ ಕಾರ್ಯಕ್ರಮವೂ ನಡೆಯಿತು.
ನಮ್ಮದೂ ಫೋಟೋ ತೆಗೀರಿ!
ಕಾಂಗ್ರೆಸ್ ಕಾರ್ಯಕರ್ತರು ಸಹ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಗೆ ಪ್ರಯಾಣ ಬೆಳೆಸಿದ್ದರು. ಒಂದು ಬೋಗಿಯಲ್ಲಿ ಮಂತ್ರಿ ಮಹೋದಯರಿದ್ದರೆ ಉಳಿದ ಕಡೆ ಮಾಧ್ಯಮದವರು ಮತ್ತು ಕಾಂಗ್ರೆಸ್ ಕಾರ್ಯಕರ್ತರಿದ್ದರು. ಮಾಧ್ಯಮದವರು ಸಚಿವರ ಫೋಟೋ ತೆಗೆಯಲು ಮುಗಿಬಿದ್ದರೆ ಕೆಲ ಕಾರ್ಯಕರ್ತರು 'ನಮ್ಮದೂ ಫೋಟೋ ತೆಗೀರಿ' ಎಂದು ಗೊಣಗಿಕೊಂಡಿದ್ದು ಕೇಳಿಬಂತು.
ಕೈ ಕೊಟ್ಟ ಮೆಟ್ರೋ!
ಮಾಗಡಿ ರಸ್ತೆಯಿಂದ ಸಂಜೆ 4.45ಕ್ಕೆ ಹೊರಟ ಮೆಟ್ರೋ ಸ್ವಲ್ಪ ದೂರ ಸಂಚರಿಸಿ ನಿಂತಕೊಂಡಿತು. ಒಂದು ಕ್ಷಣ ರೈಲಿನಲ್ಲಿ ಇದ್ದವರು ಗೊಂದಲಕ್ಕೆ ಈಡಾಗಿದ್ದು ಸುಳ್ಳಲ್ಲ. ನಂತರ ತಾಂತ್ರಿಕ ಲೋಪದಿಂದ ಹೀಗೆ ಆಗಿದೆ ಎಂದು ತಿಳಿಸಿದ ಅಧಿಕಾರಿಗಳು ಕ್ಷಣ ಮಾತ್ರದಲ್ಲಿ ಪ್ರಯಾಣ ಮುಂದುವರಿಯಲು ಅವಕಾಶ ಮಾಡಿಕೊಟ್ಟರು.
ಮೊದಲ ದಿನವೇ ಮೋಸ!
ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ಮೆಟ್ರೋ ಸಿಬ್ಬಂದಿ, ಪೊಲೀಸರು, ಮಾಧ್ಯಮದವರು ಎಲ್ಲರನ್ನು ಮಧ್ಯಾಹ್ನ ಸಂಭ್ರಮದಲ್ಲಿ ಮೆಟ್ರೋ ಕರೆದುಕೊಂಡು ಹೋಗಿತ್ತು. ಕೆಲವರು ತಮ್ಮ ವಾಹನಗಳನ್ನು ಮಾಗಡಿ ರಸ್ತೆ ಬಳಿ ನಿಲ್ಲಿಸಿ ರೈಲು ಏರಿದ್ದರು. ಆದರೆ ಸಭಾ ಕಾರ್ಯಕ್ರಮ ಮುಗಿದ ನಂತರ ಸಂಜೆ 7ಕ್ಕೆ ಮೆಟ್ರೋ ರೈಲು ಬಿಡುತ್ತೇನೆ ಎಂದು ಹೇಳಿದ್ದವರು ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದರು.