ಅಭಿಮಾನಿಗಳ ದುಂಡಾವರ್ತನೆ; ರಸ್ತೆಗಳಲ್ಲಿ ಸ್ಟಾರ್ಗಳ ಬರ್ತಡೆ ಬ್ಯಾನ್?
ಬೆಂಗಳೂರು, ಫೆಬ್ರವರಿ 19; ಚಾಲೇಂಜಿಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ವೇಳೆ ಅವರ ಅಭಿಮಾನಿಗಳು ಗೂಂಡಾಗಿರಿ ಮೆರೆದಿರುವ ಘಟನೆ ಬಗ್ಗೆ ಬೆಂಗಳೂರು ಪೊಲೀಸ್ರು ಗರಂ ಆಗಿದ್ದಾರೆ.
ಈ ಕುರಿತು ಅಖಿಲ ಕರ್ನಾಟಕ ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗೋವಿಂದರಾಜ ಎನ್ನುವರಿಗೆ ಪಶ್ಚಿಮ ವಲಯ ಡಿಸಿಪಿ ರಮೇಶ್ ಬಿ ಅವರು ನೋಟಿಸ್ ನೀಡಿದ್ದಾರೆ. ಕಳೆದ ಶನಿವಾರ 16 ರಂದು ರಾಜರಾಜೇಶ್ವರಿ ನಗರದ ದರ್ಶನ್ ನಿವಾಸದ ಎದುರು ದಶನ್ ಜನ್ಮದಿನಾಚರಣೆ ನಡೆಸಲು ಪೊಲೀಸರಿಂದ ಗೋವಿಂದರಾಜ ಅನುಮತಿ ಪಡೆದಿದ್ದರು.
ನಟ ದರ್ಶನ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಎದುರು ಮನೆಯವರು
ಇನ್ಮುಂದೆ ಬೆಂಗಳೂರಿನ ರಸ್ತೆಗಳಲ್ಲಿ ಸ್ಟಾರ್ಗಳ ಜನ್ಮದಿನಾಚರಣೆಗೆ ಬ್ರೇಕ್ ಹಾಕುವುದಾಗಿ ಪೊಲೀಸ್ ಆಯುಕ್ತಾಲಯದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಮಾತುಕತೆಯಾಗಿದೆ ಎಂದು ತಿಳಿದು ಬಂದಿದೆ.
ಇನ್ಮುಂದೆ ರಸ್ತೆಗಳಲ್ಲಿ ಬರ್ತಡೇ ಮಾಡುವಂತಿಲ್ಲ
ಈ ಕುರಿತು ಸುದ್ದಿಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಸಿಪಿ ರಮೇಶ್ ಅವರು, ಘಟನೆ ಬಗ್ಗೆ ವರದಿ ತರಿಸಿಕೊಂಡಿದ್ದೇವೆ. ಗೋವಿಂದರಾಜ ಎನ್ನುವರಿಗೆ ನೋಟಿಸ್ ನೀಡಿದ್ದು, ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಲಾಗುತ್ತದೆ. ಇನ್ಮುಂದೆ ರಸ್ತೆಗಳಲ್ಲಿ ಸ್ಟಾರ್ಗಳ ಜನ್ಮದಿನ ಆಚರಣೆಗೆ ನಿಯಂತ್ರಣ ಹೇರಲಾಗುತ್ತದೆ ಎಂದು ತಿಳಿಸಿದ್ದಾರೆ.
ಹುಟ್ಟುಹಬ್ಬದ ವೇಳೆ ನಡೆದಿದ್ದೇನು?
ದರ್ಶನ್ ಹುಟ್ಟುಹಬ್ಬದ ವೇಳೆ ಕಳೆದ ಶನಿವಾರ ರಾತ್ರಿ ಜ್ಞಾನ ಭಾರತಿ ಠಾಣೆಯ ಕಾನ್ಸ್ಟೆಬಲ್ ಡಿ.ಆರ್.ದೇವರಾಜ್ ಎಂಬುವವರ ಮೇಲೆ ದರ್ಶನ್ ಅಭಿಮಾನಿಗಳು ಎನ್ನಲಾದ ಕೆಲವರು ತೀವ್ರ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದರ್ಶನ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಜ್ಞಾನ ಭಾರತಿ ಠಾಣೆಯ ಕಾನ್ಸ್ಟೆಬಲ್ ದೇವರಾಜ್ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕ್ರಮ ಕೈಗೊಳ್ಳಲು ಒತ್ತಾಯ
ಹುಟ್ಟುಹಬ್ಬ ಆಯೋಜಿಸಿದ್ದ ವ್ಯವಸ್ಥಾಪಕರು ಹಾಗೂ ಕೆಲ ಅಭಿಮಾನಿಗಳೇ ಈ ಹಲ್ಲೆಗೆ ಕಾರಣ. ಅವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಪೇದೆ ದೇವರಾಜ್ ಒತ್ತಾಯಿಸಿದ್ದರು. ಅಪರಾಧ ಸಂಚು (ಐಪಿಸಿ 34) ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ (ಐಪಿಸಿ 353) ಆರೋಪದಡಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಎದುರು ಮನೆಯ ಮೇಲೆನೂ ಆಟಾಟೋಪ
ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರು ಮನೆಯಲ್ಲಿ ಫೆ 16 ರಂದು ದರ್ಶನ್ ಅವರು ಹಟ್ಟುಹಬ್ಬ ಆಚರಣೆಗೆ ಅವರ ಅಭಿಮಾನಿಗಳು ಬಂದಿದ್ದರು. ಈ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ನಮ್ಮ ಮನೆ ಹಾಗೂ ಮನೆ ಮುಂದೆ ನಿಲ್ಲಿಸಿದ್ದ ಕಾರ್ಗೆ ಹಾನಿಯಾಗಿದೆ ಎಂದು ರಾಮಪ್ರಸಾದ್ ಎಂ ಎಸ್ ಎನ್ನುವರು ಕೂಡ ದೂರು ದಾಖಲಿಸಿದ್ದರು. ಇದರಿಂದ ನಮಗೆ 40 ಸಾವಿರ ರುಪಾಯಿ ಹಾನಿಯಾಗಿದೆ. ಜನ್ಮದಿನ ಆಯೋಜನೆ ಮಾಡಿದ್ದವರ ಮೇಲೆ ಕ್ರಮ ಕೈಗೊಂಡು, ಉಂಟಾದ ಹಾನಿಯನ್ನು ಕೊಡಿಸಬೇಕು ಎಂದು ರಾಮಪ್ರಸಾದ್ ನೀಡಿದ್ದ ಎನ್ಸಿಆರ್ ನಲ್ಲಿ ಒತ್ತಾಯಿಸಿದ್ದರು.