ಮುಚ್ಚಿದ್ದ ಹುಕ್ಕಾ ಬಾರ್ ಗೆ ಮತ್ತೆ ಲೈಸನ್ಸ್, ಲಂಚಮುಕ್ತ ವೇದಿಕೆ ಆಕ್ರೋಶ
ಬೆಂಗಳೂರು, ಜನವರಿ 02: ಜೆಪಿ ನಗರ 2ನೇ ಹಂತದಲ್ಲಿ ಕಾನೂನು ಬಾಹಿರವಾಗಿ ಡಿ ವ್ಯೂ ಕೆಫೆ ಹೆಸರಿನಲ್ಲಿ ನಡೆಯುತ್ತಿದ್ದ ಹುಕ್ಕಾ ಬಾರನ್ನು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ದೂರಿನ ಅನ್ವಯ ಬಿಬಿಎಂಪಿ ಅಧಿಕಾರಿಗಳು 30/12/2019 ರಂದು ಮುಚ್ಚಿಸಿರುತ್ತಾರೆ. ಈ ಬಗ್ಗೆ ಈ ಹಿಂದೆಯೂ ಡಿ ವ್ಯೂ ಕೆಫೆಯ ನೆರೆಹೊರೆಯವರು ಜೆಪಿ ನಗರ ಪೊಲೀಸರಿಗೆ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಅನೇಕ ಬಾರಿ ಮಾಹಿತಿ ಹಾಗು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಈ ವಿಚಾರವನ್ನು ಅವರುಗಳು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಗಮನಕ್ಕೆ ತಂದಾಗ ವೇದಿಕೆಯು ಬಿಬಿಎಂಪಿಯ ದಕ್ಷಿಣ ವಲಯದ ಜಂಟಿ ಆಯುಕ್ತರಿಗೆ ಅದನ್ನು ತಕ್ಷಣದಲ್ಲಿ ಮುಚ್ಚಿಸಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ವಹಿಸಬೇಕೆಂದು ದೂರು ನೀಡಿ ನಿರಂತರವಾಗಿ ಬೆನ್ನು ಹತ್ತಿದ್ದರ ಫಲವಾಗಿ ಡಿ ವ್ಯೂ ಕೆಫೆಯನ್ನು ಮುಚ್ಚುವಂತಾಯಿತು. ಹುಕ್ಕಾ ಬಾರ್ ನಿಂದ ನೆರೆಹೊರೆಯವರು ನಿರಂತರವಾಗಿ ಯಾತನೆ ಅನುಭವಿಸುತ್ತಿದ್ದರು ಮತ್ತು ಅವರುಗಳು ನೀಡಿದ ದೂರಿಗೆ ಯಾವುದೇ ಬೆಲೆ ನೀಡದೆ ಇರುವುದು, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿರುವುದು ಖೇದನೀಯವಾಗಿದೆ.
ಕುಡಿದು ವಾಹನ ಏರಿದವರಿಗೆ ದಂಡ ಹಾಕಿ ಮತ್ತಿಳಿಸಿದ ಬೆಂಗಳೂರು ಪೊಲೀಸರು
ಪ್ರಸ್ತುತ ಮುಚ್ಚಲಾಗಿರುವ ಡಿ ವ್ಯೂ ಕೆಫೆ 3ನೇ ಮಹಡಿಯಲ್ಲಿ ಕೆಫೆ ಮತ್ತು ಹೋಟೆಲ್ ನಡೆಸುತ್ತೇವೆ ಎಂದು ಉದ್ದಿಮೆ ಪರವಾನಿಗೆಯನ್ನು ಬಿಬಿಎಂಪಿಯಿಂದ ಪಡೆದಿರುತ್ತಾರೆ. ಆದರೆ ಆರಂಭದಿಂದಲೂ ಇದು ಅನಧಿಕೃತವಾಗಿ ಕಟ್ಟಿರುವ ಆ ಕಟ್ಟಡದ 6ನೇ ಮಹಡಿಯಲ್ಲಿ ನಡೆಯುತ್ತಿದ್ದು ಸುಳ್ಳು ಮಾಹಿತಿ ನೀಡಿ ಪರವಾನಿಗೆಯನ್ನು ಪಡೆದಿರುತ್ತಾರೆ.
ಈ ಸಂಬಂಧ ದಿನಾಂಕ 20/12/2019 ರಂದು ಬಿಬಿಎಂಪಿ ಅಧಿಕಾರಿಗಳು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ದೂರಿನ ಆಧಾರದ ಮೇಲೆ ದಾಳಿ ನಡೆಸಿದಾಗ ಪರವಾನಗಿಯಲ್ಲಿ ನಮೂದಿಸಿರುವ ನಿಯಮಗಳ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದುದು ಬೆಳಕಿಗೆ ಬಂದಿದೆ. ಈ ಸಂಬಂಧ ಬಿಬಿಎಂಪಿಯು ನೋಟಿಸ್ ಜಾರಿ ಮಾಡಿ, ತದನಂತರ 30/12/2019 ರಂದು ಈ ಕೆಫೆಯನ್ನು ಮುಚ್ಚಿಸಿರುತ್ತಾರೆ ಮತ್ತು ಉದ್ದಿಮೆ ಪರವಾನಿಗೆಯನ್ನು ರದ್ದುಪಡಿಸಿರುತ್ತಾರೆ.
ಈ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ಪೊಲೀಸರು ಸಂಪೂರ್ಣವಾಗಿ ಕಣ್ಣುಮುಚ್ಚಿ ಕುಳಿತಿದ್ದಾರೆ. ಉದ್ದಿಮೆ ಪರವಾನಿಗೆಯಲ್ಲಿ ನಮೂದಿಸಿರುವ ಬಹುತೇಕ ಎಲ್ಲಾ ಶರತ್ತುಗಳನ್ನು ಉಲ್ಲಂಘಿಸಿ ಹುಕ್ಕಾ ಬಾರನ್ನು ನಡೆಸುತ್ತಿದ್ದರೂ ಈ ಬಗ್ಗೆ ಏನೇನು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ಸ್ಥಳೀಯ ಪೊಲೀಸರು ಇದರಲ್ಲಿ ನೇರವಾಗಿ ಭಾಗಿ ಆಗಿರಬಹುದು ಎಂಬ ಗುಮಾನಿ ಹುಟ್ಟಿಸುತ್ತದೆ.
ಬಹುತೇಕ ಎಲ್ಲಾ ಹುಕ್ಕಾ ಬಾರ್ ಗಳು ಮಾದಕ ವ್ಯಸನಗಳಿಗೆ ದಾರಿ ಮಾಡಿಕೊಡುವ ಮೊದಲ ಹಂತವಾಗಿರುತ್ತದೆ ಮತ್ತು ಅಲ್ಲಿ ಮಾದಕ ವಸ್ತುಗಳ ದಂಧೆಯು ನಡೆಯುತ್ತಿರುತ್ತದೆ. ಇವು ಬಹುತೇಕ ಶಾಲಾ-ಕಾಲೇಜುಗಳ ಆಸುಪಾಸಿನಲ್ಲಿ ಮತ್ತು ನಗರದ ಪ್ರಮುಖ ಪ್ರದೇಶಗಳ ಸುತ್ತಮುತ್ತ ಇರುತ್ತವೆ. ಇದರಿಂದ ಇಂದಿನ ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ವ್ಯಾಪಕವಾಗುತ್ತಿದೆ. ಇಂತಹ ಗಂಭೀರ ವಿಚಾರಗಳಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಅವರುಗಳು ಇಂತಹ ಕೃತ್ಯಗಳಿಗೆ ಕಾರಣರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೂಡ ಆರಕ್ಷಕ ಉಪ ಆಯುಕ್ತರಿಗೆ ದೂರು ನೀಡಲಾಗಿದೆ.
ನಗರದ ಇತರೆಡೆಗಳಲ್ಲಿಯೂ ಹಲವಾರು ಹುಕ್ಕಾ ಬಾರ್ ಗಳಿದ್ದು ಈ ಬಗ್ಗೆ ನಿಗಾವಹಿಸಿ ಪೊಲೀಸರು ಮತ್ತು ಬಿಬಿಎಂಪಿಯ ಅಧಿಕಾರಿಗಳು ಕೂಡಲೇ ಇಂತಹ ಅಕ್ರಮಗಳನ್ನು ತಡೆಯಲು ಕ್ರಮ ವಹಿಸಬೇಕೆಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಆಗ್ರಹಿಸುತ್ತದೆ.