ಬೆಂಗಳೂರಿನಲ್ಲಿ 2000 ರು ನಕಲಿ ನೋಟು, 4 ಬಂಧನ
ಅಪನಗದೀಕರಣದ ರಂಗೋಲಿ ಹಾಕಿ ಹಣಗಳ್ಳರನ್ನು ಹಿಡಿಯಲು ನರೇಂದ್ರ ಮೋದಿ ಯತ್ನಿಸುತ್ತಿದ್ದರೆ, ಅದೇ ರಂಗೋಲಿ ಕೆಳಗೆ ತೂರಲು ಯತ್ನಿಸುವವರಿಗೇನೂ ಕಮ್ಮಿಯಿಲ್ಲ. ಬೆಂಗಳೂರಿನಲ್ಲಿ ನಕಲಿ ನೋಟು ತಯಾರಿಸಿ ಮದ್ಯ ಕೊಳ್ಳಲು ಯತ್ನಿಸಿದವರು ಸರಳ ಹಿಂದಿದ್ದಾರೆ.
ಬೆಂಗಳೂರು, ಡಿಸೆಂಬರ್ 21 : ಹೊಸ ಎರಡು ಸಾವಿರ ರುಪಾಯಿ ಮೌಲ್ಯದ ನಕಲಿ ನೋಟುಗಳನ್ನು ಬಳಸಿ ವಹಿವಾಟು ಮಾಡಲು ಯತ್ನಿಸಿದ ನಾಲ್ವರನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹೊಸ ನೋಟಿನಂತೆಯೇ ಕಾಣುತ್ತಿದ್ದ 2000 ರುಪಾಯಿ ನೋಟಿನ ಕಲರ್ ಝೆರಾಕ್ಸ್ ಮಾಡಿಸಿ, ಅದನ್ನೇ ಬಳಸಿ ಗುಂಡು ಕೊಳ್ಳಲೆತ್ನಿಸಿದ ನಾಲ್ವರನ್ನು ಪೊಲಿಸರು ಬಂಧಿಸಿದ್ದಾರೆ. ಅವರಲ್ಲಿ ಓರ್ವನ ವಯಸ್ಸು 19 ವರ್ಷ.
ಜ್ಞಾನಭಾರತಿ ಪೊಲೀಸ್ ಸ್ಟೇಷನ್ ಮಿತಿಯಲ್ಲಿರುವ ವೈನ್ ಅಂಗಡಿಗೆ ಬಂದ ನಾಲ್ವರು ನಕಲಿ ನೋಟು ನೀಡಿ ಮದ್ಯ ಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆ ನೋಟು ನಕಲಿ ಎಂದು ತಿಳಿಯುತ್ತಿದ್ದಂತೆ ವೈನ್ ಶಾಪ್ ಮಾಲಿಕ ತಕರಾರು ಎತ್ತಿದ್ದಾರೆ. [ಪ್ಲಾಸ್ಟಿಕ್ ನೋಟಿನ ಸಾಧಕ-ಬಾಧಕಗಳೇನು?]
ಕೆಲಸ ಕೆಟ್ಟಿತೆಂದು ನಾಲ್ವರು ಓಡಲು ಯತ್ನಿಸಿದಾಗ ಅವರನ್ನು ಬೆನ್ನತ್ತಿ ಮದ್ಯದಂಗಡಿ ಮಾಲಿಕ ಓರ್ವನನ್ನು ಬಂಧಿಸಿ ಪೊಲೀಸರಿಗೆ ತಿಳಿಸಿದ್ದಾರೆ. ವಿಚಾರಿಸಿದಾಗ ಬನ್ನೇರುಘಟ್ಟ ರಸ್ತೆಯಲ್ಲಿರುವ ತಮ್ಮ ಸ್ನೇಹಿತನ ಅಂಗಡಿಯಲ್ಲಿ ಕಲರ್ ಝೆರಾಕ್ಸ್ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
22 ವರ್ಷದ ಶಶಾಂಕ್ ಮತ್ತು 19 ವರ್ಷದ ಮಧುಕುಮಾರ್ ಅವರನ್ನು ನಕಲಿ ನೋಟು ಛಾಪಿಸಿದ್ದಕ್ಕಾಗಿ, ಮತ್ತು 27 ವರ್ಷದ ನಟರಾಜ್ ಹಾಗಿ 21 ವರ್ಷದ ಕಿರಣ್ ಕುಮಾರ್ ನನ್ನು ಆ ನಕಲಿ ನೋಟು ಬಳಸಿ ಕೊಳ್ಳಲು ಯತ್ನಿಸಿದ್ದಕ್ಕಾಗಿ ಬಂಧಿಸಲಾಗಿದೆ. ಅವರಿಂದ ಛಾಪಿಸಿದ 25 ನೋಟುಗಳಲ್ಲಿ 8ನ್ನು ಮಾತ್ರ ವಶಪಡಿಸಿಕೊಳ್ಳಲಾಗಿದೆ. [ಸರ್ಜಿಕಲ್ ಸ್ಟ್ರೈಕ್ ಅಂದ್ರೆ... ಹಿಂಗಿರಬೇಕು! ಸೂಪರ್!]