ಬೆಂಗಳೂರು ಪೊಲೀಸ್ ಇಲಾಖೆಯ ವರ್ಗಾವಣೆ, ಬಿಡ್ದಿಂಗ್ ನಲ್ಲಿ ಸೇಲ್: ಟೈಗರ್ ಅಶೋಕ್ ಕುಮಾರ್
ರಾಜ್ಯದಲ್ಲಿ ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕಾನೂನು, ಸುವ್ಯವಸ್ಥೆ ದಿನದಿಂದ ದಿನಕ್ಕೆ ಹಳಿ ತಪ್ಪುತ್ತಿದೆಯೇ? ಗ್ಯಾಂಗ್ ವಾರ್ ವಿಪರಿಮೀತವಾಗುತ್ತಿದೆಯೇ? ಡ್ರಗ್ಸ್ ಮಾಫಿಯಾ ನಿಯಂತ್ರಣ ತಪ್ಪುತ್ತಿದೆಯೇ?
ಈ ಎಲ್ಲಾ ಮೇಲಿನ ಪ್ರಶ್ನೆಗಳು ಇತ್ತೀಚಿನ ಕ್ರೈಂಗಳನ್ನು ನೋಡಿದಾಗ ಕಾಡುವುದು ಸಹಜ. ಇದಕ್ಕೆಲ್ಲಾ ಕಾರಣ ಏನಿರಬಹುದು? ರಾಜ್ಯ ಸರಕಾರದ ಗೃಹ ಇಲಾಖೆ ಅಸಮರ್ಥವಾಗಿರುವುದಾ, ಪೊಲೀಸ್ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿರುವುದಕ್ಕಾ?
ಅಕ್ರಮ ವಿದೇಶಿ ವಾಸಿಗಳ ಮನೆಗಳ ಮೇಲೆ ಸಿಸಿಬಿ ಪೋಲೀಸರ ದಾಳಿ!
ಈ ಎಲ್ಲಾ ಪ್ರಶ್ನೆಗಳಿಗೆ ಸಾರ್ವಜನಿಕ ವಲಯದಲ್ಲಿ ಟೈಗರ್ ಅಶೋಕ್ ಕುಮಾರ್ ಎಂದೇ ಕರೆಯಲ್ಪಡುವ ಬಿ.ಬಿ.ಅಶೋಕ್ ಕುಮಾರ್ ಉತ್ತರವನ್ನು ನೀಡಿದ್ದಾರೆ. ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ್ದ ಅಶೋಕ್ ಕುಮಾರ್ ಈ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.
'ಒನ್ ಇಂಡಿಯಾ ಕನ್ನಡದ' ಜೊತೆಗಿನ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅಶೋಕ್ ಕುಮಾರ್ ಅವರ ಒಟ್ಟಾರೆ ಅಭಿಪ್ರಾಯ ಏನಂದರೆ, ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರ. ಅಶೋಕ್ ಕುಮಾರ್ ಜೊತೆಗಿನ ಸಂದರ್ಶನದ ಆಯ್ದ ಭಾಗ ಇಂತಿದೆ:
ಮನೆ ಕಳ್ಳತನ ಕಮ್ಮಿಯಾಗಿದೆ, ಆದರೆ ದರೋಡೆ ಹೆಚ್ಚಾಗುತ್ತಿದೆ
ಪ್ರ: ಕೊರೊನಾ ಬಹಳಷ್ಟು ಜನ ಕೆಲಸ ಕಳೆದುಕೊಂಡಿದ್ದಾರೆ. ಇದು ಕ್ರೈಂ ರೇಟ್ ಜಾಸ್ತಿಯಾಗಲು ಕಾರಣವೇ?
ಅಶೋಕ್ ಕುಮಾರ್: ಕ್ರೈಂ ರೇಟ್ ಜಾಸ್ತಿಯಾಗುತ್ತೆ ಎನ್ನುವುದನ್ನು ನಾವು ಮೊದಲೇ ಊಹಿಸಿದ್ದೆವು. ಈ ರೀತಿಯ ಮೆಡಿಕಲ್ ಎಮರ್ಜೆನ್ಸಿ ನಮಗೆ ಇದೇ ಮೊದಲು, ದರೋಡೆ ಪ್ರಕರಣ ಹೆಚ್ಚಾಗುತ್ತದೆ ಎನ್ನುವುದನ್ನು ನಾವೆಲ್ಲಾ ಹಿರಿಯ ಅಧಿಕಾರಿಗಳು ಚರ್ಚಿಸಿದ್ದೆವು. ಮನೆ ಕಳ್ಳತನ ಕಮ್ಮಿಯಾಗಿದೆ, ಆದರೆ ದರೋಡೆ ಹೆಚ್ಚಾಗುತ್ತಿದೆ, ಇದಕ್ಕೆ ಕಾರಣ ವರ್ಕ್ ಫ್ರಂ ಹೋಂ. ಆರ್ಥಿಕ ಒತ್ತಡ ಇರುವುದರಿಂದ ಈ ರೀತಿಯ ಘಟನೆಗಳು ಜಾಸ್ತಿಯಾಗುತ್ತಿದೆ.
ಟೈಗರ್ ಅಶೋಕ್ ಕುಮಾರ್ ಜೊತೆಗೆ ಒನ್ ಇಂಡಿಯಾ ಕನ್ನಡ ಸಂದರ್ಶನ
ಪ್ರ: ಅಪರಾಧ ಲೋಕದಲ್ಲಿ 18-25 ವಯಸ್ಸಿನ ಹುಡುಗರು ಯಾಕೆ ಹೆಚ್ಚಾಗಿದ್ದಾರೆ?
ಅಶೋಕ್ ಕುಮಾರ್: ಇದು ಸಹಜ, ಅವರ ತುಡಿತ ಬೇರೆ ಇರುತ್ತದೆ. ಕೆಲಸ ಮತ್ತು ಪರಿಸರ ಸರಿಯಿಲ್ಲದಿದ್ದಾಗ ಇವರು ಅಪರೋಧ ಲೋಕಕ್ಕೆ ಬರುತ್ತಾರೆ. ಕಾನೂನು ಏನು ಎನ್ನುವ ಅರಿವು ಇವರಿಗೆ ಇರುವುದಿಲ್ಲ. ಒಂದು ಸಲ ಜೈಲಿಗೆ ಇವರುಗಳು ಹೋದಾಗ, ಅಲ್ಲಿ ಅವರಿಗೆ ಮತ್ತಷ್ಟು ರೌಡಿಗಳ ಪರಿಚಯವಾಗುತ್ತದೆ. ಇಂತಹ ಹುಡುಗರನ್ನು ಬಿಡಿಸಿ, ಮತ್ತಷ್ಟು ಕ್ರೈಂ ಮಾಡಲು ಜೈಲಿನಲ್ಲೇ ವ್ಯವಸ್ಥೆ ಆಗಿರುತ್ತದೆ. ಮುಂದೇನು ಎನ್ನುವ ಅರಿವಿಲ್ಲದ ಹುಡುಗರು ತಮಗೂ ಗೊತ್ತಾಗದಂತೆ, ಈ ಲೋಕದಲ್ಲಿ ಸಕ್ರಿಯರಾಗುತ್ತಾರೆ.
ರೇಖಾ ಕದಿರೇಶ್ ಹತ್ಯೆ ಎನ್ನುವುದು ಟೋಟಲ್ ಪೊಲೀಸರ ವೈಫಲ್ಯತೆ
ಪ್ರ: ಕ್ರೈಂ ರೇಟ್, ಗ್ಯಾಂಗ್ ವಾರ್ ಹೆಚ್ಚಾಗುತ್ತಿರುವುದು ಪೊಲೀಸರ ವೈಫಲ್ಯತೆ ಎನ್ನಬಹುದೇ?
ಅಶೋಕ್ ಕುಮಾರ್ : ಬೆಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಅವಲೋಕಿಸಿದಾಗ ಪೊಲೀಸರ ಪಾತ್ರ ಬಹಳ ಪ್ರಮುಖವಾಗಿ ಕಾಣಿಸುತ್ತದೆ. ಸ್ಥಳೀಯ ಠಾಣೆಯ ಗಮನಕ್ಕೆ ಬರದೇ ಯಾವುದೇ ಘಟನೆಗಳು ನಡೆಯುವುದು ಕಮ್ಮಿ ಎನ್ನುವುದು ನನ್ನ ಅಭಿಪ್ರಾಯ. ಬೆಂಗಳೂರಿನಲ್ಲಿ ಕೆಲವೊಂದು ಸೆನ್ಸಿಟೀವ್ ಠಾಣೆಗಳಿವೆ, ಅದರಲ್ಲಿ ಪ್ರಮುಖವಾಗಿ ಜೆ.ಜೆ.ನಗರ, ಕಾಟನಪೇಟೆ, ಶಿವಾಜಿನಗರ, ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಮುಂತಾದವು. ರೇಖಾ ಕದಿರೇಶ್ ಹತ್ಯೆ ಎನ್ನುವುದು ಟೋಟಲ್ ಪೊಲೀಸರ ವೈಫಲ್ಯತೆ.
Recommended Video
ಓಪನ್ ಸೀಕ್ರೆಟ್, ಬಿಡ್ಡಿಂಗ್ ನಲ್ಲಿ ಪೋಸ್ಟಿಂಗ್ ಆಗುತ್ತಿರುವುದು ದುರಂತ
ಪ್ರ: ಪೊಲೀಸ್ ಇಲಾಖೆಯ ವರ್ಗಾವಣೆಗೆ ದುಡ್ಡು ಸುರಿಯಬೇಕಾಗುತ್ತದಾ?
ಅಶೋಕ್ ಕುಮಾರ್ : ದಕ್ಷ ಅಧಿಕಾರಿಗಳನ್ನು ಬೆಂಗಳೂರಿನ ಆಯಕಟ್ಟಿನ ಠಾಣೆಗೆ ಹಾಕಬೇಕು, ಹೊರಗಿನಿಂದ ಅಧಿಕಾರಿಗಳನ್ನು ಬೆಂಗಳೂರಿಗೆ ತರಬಾರದು. ಮನಸ್ಸು ಬಂದಾಗಲೆಲ್ಲಾ ವರ್ಗಾವಣೆ ಮಾಡಬಾರದು. ನನ್ನ ಕಾರ್ಯಕ್ಷಮತೆಯಿಂದ ನಾನು ಕೆಲಸ ನಿರ್ವಹಿಸಿದವನು. ಪೋಸ್ಟಿಂಗಿಗೆ ಒಂದು ರೂಪಾಯಿ ಕೊಟ್ಟವನು ನಾನಲ್ಲ. ಈಗ ಇದು ಓಪನ್ ಸೀಕ್ರೆಟ್, ಬಿಡ್ಡಿಂಗ್ ನಲ್ಲಿ ಪೋಸ್ಟಿಂಗ್ ಆಗುತ್ತಿರುವುದು ದುರಂತ. ಇದು ಪೊಲೀಸರ ನೈತಿಕತೆಯನ್ನೇ ಕುಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಪೋಸ್ಟಿಂಗಿಗೆ ಹಣ ಕೊಟ್ಟವನು ಅದನ್ನು ರಿಕವರಿ ಮಾಡಲು ಮೊದಲು ಪ್ರಯತ್ನಿಸುತ್ತಾನೆ.