ಕಮೀಷನರ್ ಅವರಿಂದ ಪೊಲೀಸರಿಗೆ ಮಹತ್ವದ ವಾಕಿ-ಟಾಕಿ ಸಂದೇಶ
ಬೆಂಗಳೂರು, ಡಿಸೆಂಬರ್ 03: ನಗರ ಪೊಲೀಸ್ ಆಯುಕ್ತರು ವಾಕಿ-ಟಾಕಿ ಮೂಲಕ ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳೊಂದಿಗೆ ಏಕಕಾಲಕ್ಕೆ ಮಾತನಾಡಿ, ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ.
ವಾಕಿ-ಟಾಕಿ ಮೂಲಕ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪೊಲೀಸರನ್ನುದ್ದೇಶಿಸಿ ಆಡಿರುವ ಮಾತುಗಳ ಆಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳಾ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಯುಕ್ತರು ಮಹತ್ವದ ಸೂಚನೆಗಳನ್ನು ವೈರ್ಲೆಸ್ ಮೂಲಕ ನೀಡಿದ್ದಾರೆ.
ರಾಜ್ಯದಲ್ಲಿ ಐಪಿಎಸ್ ವರ್ಗಾವಣೆ ದಂಧೆ: ಆಡಿಯೋ ಬಿಚ್ಚಿಟ್ಟ ಕರಾಳ ಅಧ್ಯಾಯ
ಹೈದರಾಬಾದ್ ನಲ್ಲಿ ನಡೆದ ಘಟನೆ ನಮ್ಮಲ್ಲಿ ನಡೆಯದಂತೆ ನಾವು ಎಚ್ಚರಿಕೆ ವಹಿಸಬೇಕು. ಮಹಿಳೆಯರ ಸುರಕ್ಷತೆಗೆ ನಾವುಗಳು ಹೆಚ್ಚಿನ ಗಮನ ವಹಿಸಬೇಕು. ವೈರ್ಲೆಸ್ ಗೆ, ಕಂಟ್ರೋಲ್ ರೂಂ ಗೆ, ಪೊಲೀಸ್ ಠಾಣೆ ಗೆ ಬಂದ ಯಾವುದೇ ಕರೆಗಳನ್ನು ನಿರ್ಲಕ್ಷ್ಯ ಮಾಡಬಾರದು, ಸುಳ್ಳು ಕರೆಯಾದರೂ ಸಹ ಅದನ್ನು ಗಂಭೀರವಾಗಿಯೇ ತೆಗೆದುಕೊಳ್ಳಬೇಕು ಎಂದು ಭಾಸ್ಕರ್ ರಾವ್ ಪೊಲೀಸ್ ಸಿಬ್ಬಂದಿಗೆ ಹೇಳಿದ್ದಾರೆ.
ಹೇಗೆ ಬಾಂಬ್ ಕರೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗುತ್ತೇವೆಯೋ ಹಾಗೆಯೇ ಯಾವುದೇ ಕರೆಗಳು ಬಂದೂ ಸಹ ಗಂಭೀರವಾಗಿ ತೆಗೆದುಕೊಂಡು ಶೀಘ್ರವಾಗಿ ಸ್ಥಳಕ್ಕೆ ಹಾಜರಾಗಬೇಕು. ಚೀತಾ, ಹೊಯ್ಸಳ, ವಾಕಿ, ಚಾರ್ಲಿ, ಮರ್ಕ್ಯುರಿ ಎಲ್ಲ ತಂಡಗಳು ಸದಾ ಜಾಗೃತೆಯಿಂದ ಇದ್ದು, ಮಹಿಳೆಯರ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎಂದು ಹೇಳಿದ್ದಾರೆ.
ಪೊಲೀಸ್ ಠಾಣಾ ವ್ಯಾಪ್ತಿಯ ಬಗ್ಗೆ ಚಿಂತೆ ಮಾಡದೆ, ಯಾವುದೇ ದೂರು ಬಂದರು ಮೊದಲು ದೂರು ದಾಖಲಿಸಿಕೊಳ್ಳಬೇಕು. ದೂರು ಕೊಡಲು ಬಂದಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ವಾಪಸ್ ಕಳುಹಿಸಿದ್ದಾದರೆ ಆ ಬಗ್ಗೆ ತೀವ್ರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ರಾವ್ ವಾಕಿ-ಟಾಕಿ ಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಮಹಿಳಾ ಪಿಜಿ, ಗಾರ್ಮೆಂಟ್ ನೌಕರರು ಮನೆಗಳಿಗೆ ಹೋಗುವ ಸ್ಥಳಗಳು, ಶಾಲಾ-ಕಾಲೇಜುಗಳು, ಮಾಲ್ ಗಳು, ಪಬ್ಬುಗಳು , ಐಟಿ ಸಂಸ್ಥೆಗಳು ಎಲ್ಲೆಡೆ ಸತತವಾಗಿ ಗಸ್ತು ತಿರುಗಬೇಕು ಎಂದು ಭಾಸ್ಕರ್ ರಾವ್ ಪೊಲೀಸರಿಗೆ ಸೂಚನೆ ನೀಡಿದ್ದಾರೆ.