ಒಟಿಟಿ ಬಳಿಕ ಎಲ್ಲಾ ಕಲೆಗಳು ನಶಿಸುತ್ತಿವೆ : ಅಲೋಕ್ ಕುಮಾರ್
ಬೆಂಗಳೂರು, ಫೆ. 21 : ಸರ್ಕಾರವೇ ಎಲ್ಲವನ್ನೂ ಮಾಡುತ್ತೆ ಅಂತ ಕಾಯಬೇಡಿ. ನಿಮ್ಮ ಪ್ರಯತ್ನ ನೀವು ಮಾಡಬೇಕು. ಫಿಡಿಲಿಟಸ್ ಗ್ಯಾಲರಿನಂತಹ ಸರ್ಕಾರೇತರ ಸಂಸ್ಥೆಗಳೂ ಕಲಾವಿದರನ್ನು ಪ್ರೋತ್ಸಾಹ ಮಾಡ್ತಿರೋದು ಶ್ಲಾಘನೀಯ. ಇತ್ತೀಚೆಗೆ ಒಟಿಟಿ ಪ್ಲಾಟ್ ಫಾರಂ ನಿಂದ ಎಲ್ಲ ಕಲೆಗಳೂ ನಶಿಸ್ತಾ ಇದೆ. ಇಂತಹ ಸಮಯದಲ್ಲಿ ಇಂತಹ ಕಲಾ ಪ್ರದರ್ಶನಗಳು ಕಲಾವಿದರಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಬನಶಂಕರಿಯಲ್ಲಿರುವ ಫಿಡಿಲಿಟಸ್ ಗ್ಯಾಲರಿಯಲ್ಲಿ ಜರುಗಿದ "CONSORTIUM-Art Preceptors of Bengaluru Art Institutions" ವಿಶೇಷ ಕಲಾ ಪ್ರದರ್ಶನ ಕಾರ್ಯಕ್ರಮ ಹಾಗೂ ವರ್ಚುಯಲ್ ಗ್ಯಾಲರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಹರಿ ಸಂಸ್ಥೆಯ ಎಂಡಿ ಲಹರಿ ವೇಲು, ಖ್ಯಾತ ಕಲಾ ಇತಿಹಾಸಗಾರ್ತಿ ಡಾ. ಪ್ರಮೀಳಾ ಲೋಚನ್ ಹಾಗೂ ಫಿಡಿಲಿಟಸ್ ಕಾರ್ಪ್ ಎಂಡಿ ಅಚ್ಯುತ್ ಗೌಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಲಹರಿ ವೇಲು ಮಾತನಾಡಿ, 'ಬ್ಯುಸಿನೆಸ್ ಜೊತೆ ಆರ್ಟ್ಗೆ ಬೆಂಬಲ ನೀಡ್ತಿರೋದು ತುಂಬಾ ಒಳ್ಳೆಯ ಕೆಲಸ. ಸಂಗೀತ ಕ್ಷೇತ್ರದಲ್ಲಿ ನಿಮ್ಮ ಲಹರಿ ಸಂಸ್ಥೆ ಬೆಳೆದ ರೀತಿಯಲ್ಲಿ ಫಿಡಿಲಿಟಸ್ ಗ್ಯಾಲರಿಯೂ ಬೆಳೆಯಲಿ ಎಂದು ಹಾರೈಸುತ್ತೇನೆ. ಕಲಾವಿದರಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ನಿಮ್ಮ ಜೊತೆ ಎಂದಿಗೂ ನಾವಿರ್ತೀವಿ ಎಂದು ಕಲಾವಿದರಿಗೆ ಕಿವಿಮಾತು ಹೇಳಿದರು.
ಇತಿಹಾಸಗಾರ್ತಿ ಡಾ. ಪ್ರಮೀಳಾ ಲೋಚನ್ ಮಾತನಾಡಿ, ಅಚ್ಚುತ್ ಗೌಡ ಅವರು ಕಲಾವಿದರಿಗೆ ಕೊಡುತ್ತಿರುವ ಬೆಂಬಲಕ್ಕೆ ಎಷ್ಟು ಹೊಗಳಿದರೂ ಸಾಲದು. ಕಲಾವಿದರ ಕಲಾಕೃತಿಗಳಿಗೆ ತುಂಬಾ ಗೌರವ ನೀಡಬೇಕಿದೆ. ಅದು ಈ ಸುಂದರ ಸಂಜೆ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಜರುಗುತ್ತಿದೆ ಎಂದು ಫಿಡಿಲಿಟಸ್ ಗ್ಯಾಲರಿಯನ್ನು ಪ್ರಶಂಶೆ ಮಾಡಿದರು.
Recommended Video
ಪ್ರತಿಷ್ಠಿತ ಕಲಾ ಕಾಲೇಜುಗಳ 10 ಮಂದಿ ಹಿರಿಯ ಬೋಧಕರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ 9 ದಿನಗಳ ಕಾಲ ಅಂದರೆ ಫೆಬ್ರವರಿ 27ರ ವರೆಗೆ ನಡೆಯಲಿದೆ. ಪ್ರದರ್ಶನದಲ್ಲಿ ಮಾರಾಟವಾದ ಕಲಾಕೃತಿಗಳ ಮೌಲ್ಯದ 25% ರಷ್ಟನ್ನು ಶಿಲ್ಪಾ ಫೌಂಡೇಷನ್ಗೆ ನೀಡಲಾಗುವುದು. ಫಿಡಿಲಿಟಸ್ ಕಾರ್ಪ್ನ ಅಂಗ ಸಂಸ್ಥೆಯಾದ ಶಿಲ್ಪಾ ಫೌಂಡೇಷನ್ ಶಿಕ್ಷಣ, ಪರಿಸರ ಮತ್ತು ಆರೋಗ್ಯ ಸಂಬಂಧಿತ ಕ್ಷೇತ್ರಗಳಲ್ಲಿ ಕರ್ನಾಟಕದಾದ್ಯಂತ ಕೆಲಸ ಮಾಡುತ್ತಿದ್ದು, ಕಲಾಕೃತಿ ಮಾರಾಟದಲ್ಲಿ ಬಂದ ಹಣವನ್ನು ಈ ಮೂಲಕ ಸದ್ವಿನಿಯೋಗ ಮಾಡಲಾಗುತ್ತಿದೆ.