ನಮ್ಮ ಶಾಸಕರಿಗೆ ಕೊಚ್ಚಿ ಕಂಪನಿಯಿಂದ ನೀರಾಭಾಗ್ಯ!
ಬೆಂಗಳೂರು, ಜು. 11: ನಮ್ಮ ಶಾಸಕರು ಇನ್ನು ಮುಂದೆ ವಿಧಾನಸೌಧದಲ್ಲಿಯೇ ನೀರಾ ಕುಡಿದು ಮಜಾ ಉಡಾಯಿಸಲಿದ್ದಾರೆ. ಮಳೆಗಾಲದ ಅಧಿವೇಶನದಲ್ಲಿ ಶಾಸಕರಿಗೆ ಕೊಚ್ಚಿ ಮೂಲದ ಸಂಸ್ಥೆಯೊಂದು ನೀರಾ ಸರಬರಾಜು ಮಾಡಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೊಚ್ಚಿ ಮೂಲದ ತೆಂಗು ಉತ್ಪನ್ನ ಸಂಸ್ಥೆಯ ಅಧ್ಯಕ್ಷ ಕೆ ಟಿ ಜೋಷ್ ಬೆಂಗಳೂರಿನಲ್ಲಿ ಆರಂಭವಾಗಲಿರುವ ಅಧಿವೇಶನದಲ್ಲಿ ನೀರಾ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.[ಬೀರು ತರುವವರ ಮನೆಗೆ ನೀರಾ ತರುವಾ!]
ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ನೀರಾ ಇಳಿಕೆ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಕರ್ನಾಟಕ ಅಬಕಾರಿ ಇಲಾಖೆ ಎಲ್ಲ ಜಿಲ್ಲೆಗಳಲ್ಲೂ ನೀರಾ ಇಳಿಕೆ ಮಾಡಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಈ ಬಾರಿಯ ಅಧಿವೇಶನದಲ್ಲಿ ನೀರಾ ಬಳಕೆ ಸಂಬಂಧ ಸ್ಪಷ್ಟ ನಿರ್ದೇಶನ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ಇದು ಅಬಕಾರಿ ಇಲಾಖೆಗೆ ಆದಾಯ ತಂದುಕೊಡುವುದಲ್ಲದೇ ರೈತರಿಗೆ ನೆರವಾಗಲಿದೆ ಎಂದು ಹೇಳಿದರು.[ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಂಡ ಶಾಸಕ!]
ತೆಂಗು ಬೆಳೆಗಾರರು ಬೆಳಗಾವಿ ಅಧಿವೇಶನದಲ್ಲಿ ನೀರಾಗೆ ಸಂಬಂಧಿಸಿದ ಕಾನೂನು ತಿದ್ದುಪಡಿ ಬಗ್ಗೆ ಸರ್ಕಾರವನ್ನು ಕೇಳಿಕೊಂಡಿದ್ದರು. ಅಲ್ಲದೇ ಶಾಸಕರಿಗೆ ಪೌಷ್ಟಿಕಾಂಶಯುಕ್ತ ನೀರಾ ನೀಡುತ್ತೇವೆ ಎಂದು ಮನವಿ ಮಾಡಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ಕಾಗೋಡು ತಿಮ್ಮಪ್ಪ ಇದಕ್ಕೆ ಒಪ್ಪಿಗೆ ನೀಡಿದ್ದು ಜುಲೈ 15 ರ ನಂತರದ ಅಧಿವೇಶನದಲ್ಲಿ ಭಾಗವಹಿಸುವವರಿಗೆ ನೀರಾ ಸಿಗಲಿದೆ.