ಬೆಂಗಳೂರಿಗೆ 2020ರವರೆಗೆ ಕುಡಿವ ನೀರಿನ ಸಮಸ್ಯೆ ಇಲ್ಲ: ಪರಮೇಶ್ವರ್
ಬೆಂಗಳೂರು, ಆಗಸ್ಟ್ 14: ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗೆ ಶೀಘ್ರದಲ್ಲೇ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಬೆಂಗಳೂರಿಗೆ 2020ರವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದರು.
ಕಳೆದ ವರ್ಷ ಹಾಗೂ ಈ ವರ್ಷ ನಗರದಲ್ಲಿ ಉತ್ತಮ ಮಳೆಯಾಗಿದೆ ಜತೆಗೆ ಕಾವೇರಿ ಕಣಿವೆ ಪ್ರದೇಶದಲ್ಲೂ ಉತ್ತಮ ಮಳೆಯಾಗಿರುವುದರಿಂದ ಕಾವೇರಿ ನೀರಿಗೆ ಯಾವುದೇ ತೊಂದರೆಯಿರುವುದಿಲ್ಲ, ಕಾವೇರಿ ಐದನೇ ಹಂತದ ಯೋಜನೆಯಡಿ ಬಿಬಿಎಂಪಿಗೆ ಈಗ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗೂ ಶೀಘ್ರ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದರು.
ಬಿಬಿಎಂಪಿಯ 110 ಹಳ್ಳಿ ವ್ಯಾಪ್ತಿಯ ಕಟ್ಟಡಗಳಿಗೆ ಜಲಮಂಡಳಿಯಿಂದ ಎನ್ಒಸಿ
ಈ ಹಳ್ಳಿಗಳಿಗೆ ಶುದ್ಧ ನೀರು ಒದಗಿಸುವ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದರು, ಬಿಎಂಪಿ ವ್ಯಾಪ್ತಿಯ 110ಹಳ್ಳಿಗಳಿಗೆ ನೀರು ಪೂರೈಸುವ ಖಾತರಿ ಇರುವುದರಿಂದ ಜಲಮಂಡಳಿಯು ಈ ಪ್ರದೇಶಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ನಿರಾಪೇಕ್ಷಣಾ ಪತ್ರ ಈಗಾಗಲೇ ನೀಡಿದೆ.ಎಲ್ಲ ಕಟ್ಟಡಗಳಿಗೆ ಎನ್ಒಸಿ ಅಗತ್ಯವಿಲ್ಲ. 110 ಹಳ್ಳಿಗಳ ವ್ಯಾಪ್ತಿಯ ಬೃಹತ್ ಅಪಾರ್ಟ್ ಮೆಂಟ್ ಗಳು, ವಾಣಿಜ್ಯ ಕಟ್ಟಡಗಳು, ಲೇಔಟ್ ಗಳಿಗೆ ಮಾತ್ರ ಇದು ಅನ್ವಯವಾಗಲಿದೆ.
ಈ ಹಳ್ಳಿಗಳಲ್ಲಿ ಕುಡಿಯುವ ನೀಡು ಪೂರೈಸುವ ಜತೆಗೆ ಒಳಚರಂಡಿ ಕಾಮಗಾರಿಯನ್ನೂ ಆರಂಭಿಸಲಾಗಿದೆ. ಒಳಚರಂಡಿ ಸಂಪರ್ಕವನ್ನು ಎಲ್ಲ ಕಟ್ಟಡಗಳು ಪಡೆಯಲೇಬೇಕಾಗಿರುವುದರಿಂದ ಎನ್ಒಸಿ ಕಡ್ಡಾಯವಾಗಿದೆ.ಪ್ರಸ್ತುತ ಬೆಂಗಳೂರಿಗೆ ವಾರ್ಷಿಕ 19 ಟಿಎಂಸಿ ನೀರನ್ನು ಕಾವೇರಿಯಿಂದ ಪೂರೈಕೆ ಮಾಡಲಾಗುತ್ತಿದೆ.
ಕಾವೇರಿ ಐದನೇ ಹಂತದ ಯೋಜನೆ ಅನುಷ್ಠಾನದಿಂದ ಹೊಸ 110 ಹಳ್ಳಿಗಳಿಗೆ ನೀರು ಪೂರೈಕೆ ಹಾಗೂ ಬೇಡಿಕೆ ನೀಗಿಸಲು ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಚರ್ಚಿಸಲಾಯಿತು.
ನೀರು ಸೋರಿಕೆ ತಡೆಗಟ್ಟುವಿಕೆ ಹಾಗೂ ಹೊಸ ಯೋಜನೆ ಅನುಷ್ಠಾನಗೊಂಡರೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ನೀಗಲಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೂತನ ಯೋಜನೆಗಳನ್ನು ಆದಷ್ಟು ಶೀಘ್ರವೇ ಅನುಷ್ಠಾನಕ್ಕೂ ಅಧಿಕಾರಿಗಳಿಗೆ ನಿರ್ದೇಶಿಸಿದರು. ಸಭೆಯಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಇದ್ದರು.
ಮಾರ್ಚ್ನಲ್ಲಿ ಬಿಬಿಎಂಪಿ ವ್ಯಾಪ್ತಿಯ7 ಹಳ್ಳಿಗಳಿಗೆ ಕಾವೇರಿ ನೀರು!
ಸಭೆಯಲ್ಲಿ ನಗರಾಭಿವೃದ್ಧಿ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಕೇಶ್ ಸಿಂಗ್ ಹಾಜರಿದ್ದರು.