ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಹೆಲಿಪ್ಯಾಡ್ ವ್ಯವಸ್ಥೆ: ಪ್ರತಾಪ ಸಿಂಹ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ ಸಿಂಹ, "ಹೆಲಿಪ್ಯಾಡ್ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವುದಲ್ಲದೆ, ವಿಐಪಿ ಸಂಚಾರಕ್ಕೂ ಅನುವು ಮಾಡುಕೊಡುತ್ತದೆ. ಅಲ್ಲದೆ ಹೆದ್ದಾರಿಯ ಎರಡು ಬದಿಯಲ್ಲೂ ಎರಡು ತಂಗುದಾಣಗಳನ್ನು ಅಭಿವೃದ್ದಿ ಪಡಿಸಲಾಗುತ್ತದೆ. ಪ್ರತಿ ತಂಗುದಾಣವನ್ನು 25 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿದ್ದು, ಭೂಸ್ವಾಧೀನಕ್ಕಾಗಿ 464.34 ಕೋಟಿ ರೂ ಮೀಸಲಿಟ್ಟಿದ್ದರೆ, ಸಿವಿಲ್ ಕಾಮಗಾರಿಗೆ 726 ಕೋಟಿ ರೂ ಮೀಸಲಿರಿಸಲಾಗಿದೆ," ಎಂದರು.
ಇನ್ನು ಈ ತಂಗುದಾಣದಲ್ಲಿ ಪೆಟ್ರೋಲ್ ಬಂಕ್, ಶೌಚಾಲಯ ಸೇರಿದಂತೆ ಜನರಿಗೆ ಸಹಾಯವಾಗುವ ಹಾಗೆ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ. ಈಗ ಹೆಚ್ಚುವರಿಯಾಗಿ ಜಮೀನು ಸ್ವಾಧೀನಕ್ಕೆ ಎರಡು ವಾರಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ. ಇನ್ನು ಹೆದ್ದಾರಿಯು 16 ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಹೊಂದಿರಲಿದೆ ಮತ್ತು 96 ಬಸ್ ನಿಲ್ದಾಣಗಳು ಸಹ ಇರಲಿದೆ ಅಂತ ತಿಳಿಸಿದ್ದಾರೆ.
"ದಸರಾ ವೇಳೆಗೆ 118 ಕಿ.ಮೀ ಹೆದ್ದಾರಿ ವಾಹನ ಸಂಚಾರಕ್ಕೆ ಸಿದ್ದವಾಗಿದ್ದರೂ, ಹೊಸದಾಗಿ ಸೇರ್ಪಡೆಗೊಂಡ ಯೋಜನೆಗಳ ಕಾಮಗಾರಿಗಳು ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದರು. ಅಲ್ಲದೆ ಈಗಾಗಲೇ ಕೇಂದ್ರೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಯ ಕುರಿತಾಗಿ ಮಾತನಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಕೆಂಗೇರಿ ಮತ್ತು ಮೈಸೂರು ನಡುವಿನ ಪ್ರಯಾಣದ ಸಮಯವನ್ನು 75 ನಿಮಿಷಗಳಿಗೆ ಇಳಿಸಲಾಗುತ್ತದೆ ಅಂತ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ," ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ.
ಜೂನ್ ವೇಳೆಗೆ ಕೆಂಗೇರಿ ನಿಡಘಟ್ಟ ರಸ್ತೆ ಸಾರ್ವಜನಿಕ ಬಳಕೆಗೆ ಸಿದ್ದವಾಗಲಿದ್ದು, ನಿಡಘಟ್ಟ ಮೈಸೂರು ನಡುವಿನ ಕಾಮಗಾರಿ ದಸರಾ ವೇಳೆಗೆ ಪೂರ್ಣಗೊಳ್ಳಲಿದೆ ಅಂತ ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ ಸಿಂಹ ಹೇಳಿದರು.
Recommended Video