ಚಿಕಿತ್ಸೆಗೆಂದು ವೃದ್ಧಾಶ್ರಮ ಸೇರಿದ್ದ ವೃದ್ಧ ಮಹಿಳೆ ನಿಗೂಢ ಸಾವು
ಬೆಂಗಳೂರು, ಆ. 16: ವೃದ್ಧರನ್ನು ಪೋಷಣೆ ಮಾಡುವ ಹೆಸರಿನಲ್ಲಿ ದುಡ್ಡಿಗಾಗಿ ಹುಟ್ಟಿಕೊಂಡಿರುವ ಅನಾಥಾಶ್ರಮಗಳಲ್ಲಿ ಮಹಾ ದುರಂತಗಳಲ್ಲಿ ನಡೆಯುತ್ತಿವೆ. ವೃದ್ಧರನ್ನು ಪೋಷಣೆ ಮಾಡುವ ಹೆಸರಿನಲ್ಲಿ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ಆರೋಪಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದವು. ಇದೀಗ ವೃದ್ಧ ಮಹಿಳೆಯೊಬ್ಬಳು ಅನಾಥಾಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
ರಾಮಚಂದ್ರ ಎಂಬುವರ ತಾಯಿ ಕಮಲಮ್ಮ ಮರೆವು ಕಾಯಿಲೆಯಿಂದ ಬಳಲುತ್ತಿದ್ದರು. ದಿನವೂ ಆಕೆಯನ್ನು ಹಾರೈಕೆ ಮಾಡಲಾಗದ ಕಾರಣದಿಂದ ಅವರು ನಾಗರಭಾವಿಯಲ್ಲಿರುವ ಉಸುರು ಫೌಂಡೇಷನ್ ವೃದ್ಧರ ಹಾರೈಕೆ ಕೇಂದ್ರಕ್ಕೆ ಬಿಟ್ಟಿದ್ದರು. ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಂಗಳಿಗೆ ಹತ್ತು ಸಾವಿರ ರೂ. ಶುಲ್ಕವನ್ನು ಕೂಡ ಅವರು ಪಾವತಿ ಮಾಡುತ್ತಿದ್ದರು.
ನಾಗರಭಾವಿಯಲ್ಲಿರುವ ಉಸುರು ಫೌಂಡೇಷನ್ನಲ್ಲಿಕಳೆದ ಮಾರ್ಚ್ ನಿಂದ ಕಮಲಮ್ಮ ಚಿಕಿತ್ಸೆ ಪಡೆದು ಅಲ್ಲಿಯೇ ವಾಸವಾಗಿದ್ದರು.
ಆ. 07 ರಂದು ನಿಮ್ಮ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸುತ್ತಿದ್ದೇವೆ ಎಂದು ಉಸುರು ಫೌಂಡೇಷನ್ ವತಿಯಿಂದ ಕರೆ ಮಾಡಿ ರಾಮಚಂದ್ರ ಅವರಿಗೆ ತಿಳಿಸಿದ್ದಾರೆ. ಗಾಬರಿಯಿಂದ ತಾಯಿಯನ್ನು ನೋಡಲು ನಾಗರಭಾವಿಗೆ ಹೋದಾಗ ಅಲ್ಲಿ ಕಮಲಮ್ಮ ಇರಲಿಲ್ಲ. ಅವರು ನೀಡಿದ ಮಾಹಿತಿ ಮೇರೆಗೆ ಕಂಠೀರವ ಸ್ಟುಡಿಯೋ ಬಳಿ ಇರುವ ಉಸುರು ಫೌಂಡೇಷನ್ ಬಳಿ ಬಂದು ವಿಚಾರಿಸಿದ್ದಾರೆ.
ಅಲ್ಲಿ ಕಮಲಮ್ಮ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಫೌಂಡೇಷನ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಕಮಲಮ್ಮ ವಾಸವಿದ್ದ ಕೊಠಡಿಗೆ ಹೋಗಿ ನೋಡಿದಾಗ ಅಲ್ಲಿ ರಕ್ತದ ಕಲೆಗಳು ಆಗಿರುವುದು ಕಂಡು ಬಂದಿದೆ. ಫೌಂಡೇಷನ್ ಸಿಬ್ಬಂದಿಯನ್ನ ಪುನಃ ಪ್ರಶ್ನಿಸಿದಾಗ ಕಮಲಮ್ಮ ಆಂಬ್ಯೂಲೆನ್ಸ್ ನಲ್ಲಿ ಇರುವುದಾಗಿ ತಿಳಿಸಿದ್ದು, ಅಲ್ಲಿ ಹೋಗಿ ನೋಡಿದಾಗ ಆಕೆ ಮೃತಪಟ್ಟಿರುವುದು ಖಚಿತಪಟ್ಟಿದೆ. ಅಲ್ಲದೇ ತಲೆ ಹಾಗೂ ಕಿವಿ ಸೇರಿದಂತೆ ಹಲವು ಕಡೆ ಗಾಯಗಳಾಗಿರುವುದು ಕಂಡು ಬಂದಿದೆ.
ನನ್ನ ತಾಯಿಗೆ ಯಾಕೆ ಗಾಯಗಳಾಗಿವೆ ಎಂದು ರಾಮಚಂದ್ರ ಪ್ರಶ್ನಿಸಿದಾಗ" ನಿಮ್ಮ ತಾಯಿ ವಾಸವಿದ್ದ ಕೊಠಡಿಯಲ್ಲಿದ್ದ ಮಹಿಳೆ ಜತೆ ಜಗಳ ಮಾಡಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಪುನಃ ರಾಮಚಂದ್ರ ತನ್ನ ತಾಯಿ ಇದ್ದ ಕೊಠಡಿಗೆ ಹೋಗಿ ಅಲ್ಲಿ ನೆಲೆಸಿದ್ದ ಮಹಿಳೆಯನ್ನು ನೋಡಿದಾಗ ನಿಃಶಕ್ತಿಯಿಂದ ಮಲಗಿರುವುದು ಕಂಡು ಬಂದಿದೆ. ಅಂತೂ ಕಮಲಮ್ಮ ನಿಗೂಢವಾಗಿ ಸಾವನ್ನಪ್ಪಿದ್ದು ಮೈಮೇಲೆ ಗಾಯಗಳು ಆಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಉಸುರು ಸಿಬ್ಬಂದಿಯಿಂದಲೇ ಕೊಲೆ: ಅನಾಥಾಶ್ರಮಗಳಲ್ಲಿ ರಾತ್ರಿ ವೇಳೆ ನಿದ್ದೆ ಮಾಡದೇ ಕಿರಿಕಿರಿ ಉಂಟು ಮಾಡುವ ವೃದ್ಧರ ಮೇಲೆ ದರ್ಪ ತೋರಿ ಹಲ್ಲೆ ಮಾಡುತ್ತಾರೆ. ಅದೇ ರೀತಿ ಕಮಲಮ್ಮ ಅವರನ್ನು ಸಹ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನನ್ನ ತಾಯಿಯನ್ನು ಉಸುರು ಫೌಂಡೇಷನ್ ಮಾಲೀಕ ಭಾಸ್ಕರ್ ಹಾಗೂ ಸಿಬ್ಬಂದಿ ಕೊಲೆ ಮಾಡಿದ್ದಾರೆ. ಮಾಸಿಕ ಹತ್ತು ಸಾವಿರ ರೂ. ವೇತನ ಕೊಡುತ್ತಿದ್ದೆ. ನಾಗರಭಾವಿಯಲ್ಲಿರುವ ಕೇಂದ್ರಕ್ಕೆ ಬಿಟ್ಟಿದ್ದು, ಅನುಮತಿ ಇಲ್ಲದೇ ಆರ್ಎಂಸಿಯಾರ್ಡ್ ಠಾಣಾ ವ್ಯಾಪ್ತಿಯ ಉಸುರು ಫೌಂಡೇಷನ್ಗೆ ಸ್ಥಳಾಂತರಿಸಿದ್ದಾರೆ. ನನ್ನ ತಾಯಿಯನ್ನು ಕೊಲೆ ಮಾಡಿದ್ದು, ಸಾಕ್ಷ್ಯಾಧಾರಗಳನ್ನು ಮರೆ ಮಾಚುವ ದೃಷ್ಟಿಯಿಂದ ಆಂಬ್ಯೂಲೆನ್ಸ್ ನಲ್ಲಿ ಮೃತದೇಹ ಇಟ್ಟು ಬಚ್ಚಿಟ್ಟಿರುತ್ತಾರೆ. ಇವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಎಂದು ರಾಮಚಂದ್ರ ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರನ್ನಾಧರಿಸಿ ಉಸಿರು ಫೌಂಡೇಷನ್ ಮಾಲೀಕ ಹಾಗೂ ನಿರ್ವಹಣೆ ಮಾಡುತ್ತಿರುವ ಭಾಸ್ಕರ್ ಸೇರಿದಂತೆ ಆರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಕಮಲಮ್ಮ ಅವರಿಗೆ ಗಾಯಗಳಾಗಿರುವುದು ಕಂಡು ಬಂದಿದೆ. ವಿಧಿ ವಿಜ್ಞಾನ ಪರೀಕ್ಷಾಲಯ ವರದಿ ಆಧರಿಸಿ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಉಸುರು
ವೃದ್ಧ ಆಶ್ರಮಗಳಲ್ಲಿ ಚಿತ್ರಹಿಂಸೆ: ಬೆಂಗಳೂರಿನಲ್ಲಿ ವೃದ್ಧ ತಂದೆ ತಾಯಿಯನ್ನು ಮನೆಯಲ್ಲಿ ಪೋಷಣೆ ಮಾಡುವುದಕ್ಕಿಂತಲೂ ಅನಾಥಾಶ್ರಮಗಳ ಬಾಗಿಲಲ್ಲಿ ನಿಲ್ಲಿಸಿ ಕೈತೊಳೆದುಕೊಳ್ಳುತ್ತಾರೆ. ಮಾಸಿಕ ಇಂತಿಷ್ಟು ನಮ್ಮ ಜವಾಬ್ಧಾರಿ ಮುಗಿಯಿತು ಎಂದು ಕೈತೊಳೆದುಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ವೃದ್ಧಾಶ್ರಮ ಹಾರೈಕೆ ಕೇಂದ್ರಗಳಾಗಿ ಉಳಿದಿಲ್ಲ. ಬದಲಿಗೆ ಚಿತ್ರಹಿಂಸೆ ಕೊಡುವ, ಹಣ ಸುಲಿಗೆ ಮಾಡುವ ಕೇಂದ್ರಗಳಾಗಿ ಬದಲಾಗಿವೆ.
Recommended Video
ಈ ಹಿಂದೆ ಹಣ ಕೊಟ್ಟರೆ ವೃದ್ಧ ತಂದೆ ತಾಯಿಯನ್ನು ವಿಷ ಕೊಟ್ಟು ಸಾಯಿಸುವುದಾಗಿ ಅನಾಥಾಶ್ರಮದ ಮಾಲೀಕರು ಹೇಳಿದ್ದನ್ನು ರಹಸ್ಯ ಕಾರ್ಯಾಚರಣೆ ಮೂಲಕ ಖಾಸಗಿ ವಾಹಿನಿ ಹೊರ ಹಾಕಿತ್ತು. ಇದಕ್ಕೆ ಪೂರಕ ವೆಂಬಂತೆ ವೃದ್ಧ ಮಹಿಳೆ ನಿಗೂಢವಾಗಿ ಕೊಲೆಯಾಗಿದ್ದು, ವೃದ್ಧಾಶ್ರಮದ ಬಣ್ಣ ಬಯಲಿಗೆ ಬಂದಿದೆ. ಹೆತ್ತವರನ್ನು ವೃದ್ಧಾಶ್ರಮಗಳಿಗೆ ಹಾಕುವ ಮುನ್ನ ನೂರು ಸಲ ಆಲೋಚಿಸಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.