ತೇಜಸ್ ಯುದ್ಧ ವಿಮಾನದಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರಯಾಣ,ಮೋದಿ ಸರ್ಕಾರಕ್ಕೆ ಕೃತಜ್ಞತೆ
ಬೆಂಗಳೂರು, ಫೆಬ್ರವರಿ 04: 'ಏರೋ ಇಂಡಿಯಾ 2021' ಪ್ರಯುಕ್ತ ಆಯೋಜನೆಗೊಂಡಿರುವ ಏರ್ ಶೋ ನ ಭಾಗವಾಗಿ 2ನೇ ದಿನವಾದ ಇಂದು ಲಘು ಯುದ್ಧ ವಿಮಾನ ತೇಜಸ್ ನಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಪಯಣಿಸುವ ಮೂಲಕ ನೂತನ ಕಾರ್ಯವೊಂದಕ್ಕೆ ಸಾಕ್ಷಿಯಾಗಿದ್ದು ವಿಶೇಷ. ಬಾನಂಗಳದಲ್ಲಿ 30 ನಿಮಿಷಗಳ ಮಟ್ಟಿಗೆ ಬೆಂಗಳೂರು ದಕ್ಷಿಣ ಸಂಸದರನ್ನೊಳಗೊಂಡ ಈ ವಿಶೇಷ ಹಾರಾಟವು, ಬೆಂಗಳೂರಿನ ಹೆಚ್.ಎ. ಎಲ್ ಗೆ, 48,000 ಕೋಟಿ ರೂ,ಗಳ ಗುತ್ತಿಗೆಯನ್ನು ನೀಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಲು ಎಂಬುದು ವಿಶೇಷ.
ವಿಶೇಷ ಪ್ರಯಾಣದ ನಂತರ ಮಾತನಾಡಿದ ಸಂಸದ ತೇಜಸ್ವಿಸೂರ್ಯ ರವರು, ಕೇಂದ್ರ ಸರ್ಕಾರವು ರಕ್ಷಣಾ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ 'ಮೇಕ್ ಇನ್ ಇಂಡಿಯಾ' ಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಅದರ ಭಾಗವಾಗಿ 83 ಎಲ್.ಸಿ.ಎ ತೇಜಸ್ ಉತ್ಪಾದನಾ ಕಾಮಗಾರಿಯನ್ನು ಬೆಂಗಳೂರಿನ ಪ್ರತಿಷ್ಠಿತ ಹೆಚ್.ಎ. ಎಲ್ ಗೆ ಒದಗಿಸಿದೆ. ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ವಿದೇಶಿ ಅವಲಂಬನೆಯನ್ನು ತಪ್ಪಿಸಲು ಹಾಗೂ ಸ್ವದೇಶಿ ತಂತ್ರಜ್ಞರನ್ನು ಹುರಿದುಂಬಿಸಲು ಇದರಿಂದ ಸಾಧ್ಯವಾಗಲಿದೆ.
'ತೇಜಸ್' ಉತ್ಪಾದನೆಯಿಂದ ಬೆಂಗಳೂರು ನಗರದಲ್ಲಿ ಔದ್ಯೋಗಿಕ ಅವಕಾಶಗಳು ಹೆಚ್ಚಲಿದ್ದು, ತೇಜಸ್ ಅನ್ನು ಜಾಗತಿಕ ಮಟ್ಟದ ಬ್ರಾಂಡ್ ಆಗಿ ಪರಿವರ್ತನೆಗೊಳಿಸಲು ಪೂರಕ ವಾತಾವರಣ ಸೃಷ್ಟಿಯಾಗಲಿದೆ" ಎಂದು ಸಂಸದ ಶ್ರೀ ತೇಜಸ್ವೀ ಸೂರ್ಯ ತಿಳಿಸಿದರು.
ಭದ್ರತೆ ಮೇಲಿನ ಕ್ಯಾಬಿನೆಟ್ ಕಮಿಟಿಯು 48,000 ಕೋಟಿ ರೂ, ಗಳ 73 ಮಾರ್ಕ್ 1 ಎ ವರ್ಷನ್ ಮತ್ತು 10 ಮಾರ್ಕ್ 2 ಟ್ರೆನರ್ ತೇಜಸ್ ಯುದ್ಧ ವಿಮಾನಗಳ ಗುತ್ತಿಗೆಯನ್ನು ಜನವರಿ 13 2021 ರಂದು ಹೆಚ್.ಎ. ಎಲ್ ಗೆ ವಹಿಸಿದ್ದು, ವಿದ್ಯುಕ್ತವಾಗಿ ಹೆಚ್.ಎ. ಎಲ್ ಚೇರ್ಮನ್& ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಆರ್ ಮಾಧವನ್ ರಿಗೆ ಡೈರೆಕ್ಟರ್ ಜನರಲ್ (ರಕ್ಷಣಾ ಇಲಾಖೆ, ಸ್ವಾಧೀನ ವಿಭಾಗ) ಶ್ರೀ ವಿ ಎಲ್ ಕಾಂತರಾವ್ ರವರು ಬುಧವಾರದಂದು ಏರೋ ಇಂಡಿಯಾ ಶೋ ನಲ್ಲಿ ಹಸ್ತಾಂತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
'ತೇಜಸ್' ಲಘು ಯುದ್ಧ ವಿಮಾನದ ಸೇರ್ಪಡೆಯಿಂದ ಭಾರತದ ರಕ್ಷಣಾ ಕ್ಷೇತ್ರದಲ್ಲಿ 'ಆತ್ಮ ನಿರ್ಭರತೆ' ಹೆಚ್ಚುವುದಲ್ಲದೇ ಇತರ ದೇಶಗಳಿಗೆ ರಪ್ತು ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವು ರಕ್ಷಣಾ ಕ್ಷೇತ್ರದಲ್ಲಿ ಸೂಪರ್ ಪವರ್ ಆಗಿ ಹೊರಹೊಮ್ಮಲಿದೆ. ಪ್ರಪಂಚದ ಕೆಲವೇ ನಗರಗಳು ಜಾಗತಿಕ ಮಟ್ಟದ ಯುದ್ಧವಿಮಾನಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದ್ದು 'ತೇಜಸ್' ಲಘು ಯುದ್ಧ ವಿಮಾನದ ಉತ್ಪಾದನೆ, ನಮ್ಮ ಬೆಂಗಳೂರಿನ ಹೆಮ್ಮೆ ಎಂದು ಹೇಳಲು ಅತ್ಯಂತ ಸಂತೋಷವಾಗುತ್ತದೆ" ಎಂದು ಸಂಸದರು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Recommended Video