ಸಂಕ್ರಾಂತಿಗೆ ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ಮಾರ್ಗ ಗಿಫ್ಟ್
ಬೆಂಗಳೂರು, ಜನವರಿ 7: ಬಹು ನಿರೀಕ್ಷಿತ ಯಲಚೇನಹಳ್ಳಿ ಹಾಗೂ ಅಂಜನಾಪುರ ನಡುವಿನ ನಮ್ಮ ಮೆಟ್ರೋ ಸಂಚಾರ ಮಕರ ಸಂಕ್ರಾಂತಿ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿ ಹೇಳಿದ್ದಾರೆ.
ಜನವರಿ 14ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೋಣನಕುಂಟೆ ಕ್ರಾಸ್ ನಮ್ಮ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಎರಡನೇ ಹಂತದ ಈ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ (ಬಿಎಂಆರ್ ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.
ಡಿಸೆಂಬರ್ನಲ್ಲಿ ಯಲಚೇನಹಳ್ಳಿ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚಾರ
ಕೇಂದ್ರ ವಸತಿ ಹಾಗೂ ನಗರ ವ್ಯವಹಾರ ಸಚಿವ ಹರ್ದೀಪ್ ಸಿಂಗ್ ಅವರು ಕೂಡಾ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜನವರಿ 15ರಿಂದ ಯಲಚೇನಹಳ್ಳಿ ಹಾಗೂ ಅಂಜನಾಪುರ ಮಾರ್ಗದಲ್ಲಿ ಸಂಚಾರ ಆರಂಭವಾಗಲಿದೆ ಎಂದು ಹೇಳಿದರು.
ಭೈಯಪ್ಪನಹಳ್ಳಿ- ಮೈಸೂರು ರಸ್ತೆ 18.08 ಕಿ.ಮೀ ದೂರದ ನೇರಳೆ ಮಾರ್ಗ ಹಾಗೂ ನಾಗಸಂದ್ರ ಹಾಗೂ ಯಲಚೇನಹಳ್ಳಿ ನಡುವಿನ 24.22 ಕಿ. ಮೀ ದೂರದ ಹಸಿರು ಮಾರ್ಗದ ಜೊತೆಗೆ ಈಗ ವಿಸ್ತರಿಸಿದ ಹಸಿರು ಮಾರ್ಗವಾಗಿ ಯಲಚೇನಹಳ್ಳಿ-ಅಂಜನಾಪುರ ನಡುವೆ ರೀಚ್ 4 ಬಿ ಮಾರ್ಗ 6.52 ಕಿ.ಮೀ ರೈಲು ಸಂಚರಿಸಲಿದೆ. ಈ ಮಾರ್ಗ 5 ನಿಲ್ದಾಣಗಳನ್ನು ಒಳಗೊಂಡಿದೆ. ನಾಗಸಂದ್ರದಿಂದ ಹೊರಡು ಹಸಿರು ಮಾರ್ಗದ ರೈಲು ಕನಕಪುರ ರಸ್ತೆಯ ಅಂಜನಾಪುರ ತನಕ ಸಂಚಾರ ನಡೆಸಲಿದೆ. ಕೋಣನಕುಂಟೆ ಕ್ರಾಸ್, ದೊಡ್ಡ ಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ನಿಲ್ದಾಣಗಳು ಮಾರ್ಗದಲ್ಲಿವೆ.
2016ರಲ್ಲಿ ಎನ್ಸಿಸಿ ಕಂಪನಿಗೆ ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ ರೈಲಿನ ಕಾಮಗಾರಿ ಟೆಂಡರ್ ನೀಡಲಾಯಿತು. 2020ರ ಜೂನ್ನಲ್ಲಿ ರೈಲು ಸಂಚಾರ ಆರಂಭಿಸುವ ಗುರಿ ಇತ್ತು. ಆದರೆ, ಕೋವಿಡ್ ಲಾಕ್ ಡೌನ್ ಕಾರಣ ನವೆಂಬರ್ ತನಕ ಗುಡುವು ವಿಸ್ತರಣೆಯಾಗಿತ್ತು. ಸುರಕ್ಷತೆ, ಪರೀಕ್ಷಾರ್ಥ ಸಂಚಾರ ವಿಳಂಬವಾಗಿದ್ದರಿಂದ ಜನವರಿ 14ಕ್ಕೆ ಹೊಸ ಮುಹೂರ್ತ ನಿಗದಿಯಾಗಿದೆ.