ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟ ಬೆಂಗಳೂರು ಮೇಯರ್ ಮಾಡಿದ 'ಶಪಥ'
ಬೆಂಗಳೂರು, ನ 5: ಬೆಂಗಳೂರು ನಗರದಲ್ಲಿ ಮಳೆಯ ಆವಾಂತರ, ರಸ್ತೆಗಳ ನಿರ್ವಹಣೆ, ಗುಂಡಿಯೊಳಗಿನ ರಸ್ತೆಗಳು, ಟಾರ್ ಹಾಕಿದ ಒಂದೇ ದಿನಕ್ಕೆ ಡಾಂಬರು ಕಿತ್ತು ಬರುವುದು.. ಹೀಗೆ.. ಈ ಬಗ್ಗೆ ಬರೆದಷ್ಟು ಕಮ್ಮಿನೇ..
ಬೆಂಗಳೂರು ನಗರದ ಮೇಯರ್ ಗಿರಿ ಪಟ್ಟವನ್ನು ಬಿಜೆಪಿ ನಿರಾಯಾಸವಾಗಿ ಈ ಬಾರಿ ತನ್ನದಾಗಿಸಿಕೊಂಡಿತ್ತು. ಆದರೆ, ಜೋಗುಪಾಳ್ಯ ವಾರ್ಡಿನ ಗೌತಂ ಕುಮಾರ್ ಅವರು ಮೇಯರ್ ಆಗಿ ಆಯ್ಕೆಯಾಗುತ್ತಾರೆ ಎನ್ನುವುದನ್ನು ಕೆಲವೇ ಕೆಲವರಷ್ಟೇ ಅರಿತಿದ್ದರು.
ಸುಮನಹಳ್ಳಿ ಆಯ್ತು ಈಗ ಮತ್ತೊಂದು ಮೇಲ್ಸೇತುವೆಯಲ್ಲಿ ದೊಡ್ಡ ಗುಂಡಿ
ಮೇಯರ್ ಹುದ್ದೆ ದಕ್ಕಿರುವ ಹುಮ್ಮಸ್ಸಿನಲ್ಲಿರುವ ಗೌತಂ ಕುಮಾರ್ ಚುರುಕಿನಿಂದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ನಂತರ, ಎಂದಿನಂತೆ ಭಾರೀ ಮಳೆಯಿಂದಾದ ತೊಂದರೆಯನ್ನು ಮೇಯರ್ ಎದುರಿಸಬೇಕಾಯಿತು.
ಬೆಂಗಳೂರು ರಸ್ತೆಯಲ್ಲಿ ಗುಂಡಿ; ಮುಖ್ಯ ಕಾರ್ಯದರ್ಶಿಗೆ ಪತ್ರ
ಈಗ, ಬೆಂಗಳುರು ರಸ್ತೆಯ ಗುಂಡಿ ಮುಚ್ಚುವ ವಿಚಾರದಲ್ಲಿ ಮೇಯರ್ ಶಪಥವೊಂದನ್ನು ಮಾಡಿದ್ದರು. ಅದರಂತೆಯೇ, ಅತ್ಯಂತ ವೇಗವಾಗಿ ಅಧಿಕಾರಿಗಳು ಕೂಡಾ ಇದಕ್ಕೆ ಸ್ಪಂದಿಸುತ್ತಿದ್ದಾರೆ ಕೂಡಾ. ಏನಿದು ಶಪಥ?
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಟ್ಟುನಿಟ್ಟಿನ ಫರ್ಮಾನು
ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆ ನಿರ್ವಹಣೆಯ ವಿಚಾರದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಬಂಧಪಟ್ಟ ಎಲ್ಲಾ ಬಿಬಿಎಂಪಿ ಅಧಿಕಾರಿಗಳಿಗೆ, ವಿಕಾಸಸೌಧದಲ್ಲಿ ಸೋಮವಾರ (ನ 4) ಒಂದು ರೌಂಡ್ ಕ್ಲಾಸ್ ತೆಗೆದುಕೊಂಡಿದ್ದರು. ಜೊತೆಗೆ, ನವೆಂಬರ್ ಮೂವತ್ತರ ಒಳಗೆ, ಎಲ್ಲಾ ರಸ್ತೆಗಳು ಗುಂಡಿಮುಕ್ತವಾಗಿರಬೇಕೆನ್ನುವ ಫರ್ಮಾನನ್ನು ಹೊರಡಿಸಿದ್ದಾರೆ. "ನವೆಂಬರ್ ಅಂತ್ಯದೊಳಗೆ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿಯನ್ನು ಪೂರ್ಣಗೊಳಿಸಿ, ಇಲ್ಲವಾದರೆ ಕಡ್ಡಾಯ ರಜೆಯ ಮೇಲೆ ತೆರಳುವಂತೆ " ಡಿಸಿಎಂ ಸೂಚಿಸಿದ್ದಾರೆ. ಆದರೆ, ಇದಕ್ಕಿಂತ ಮುಂಚೆನೇ, ಮೇಯರ್ ಗೌತಂ ಕುಮಾರ್ ಶಪಥವನ್ನು ಮಾಡಿದ್ದರು.
ನವೆಂಬರ್ ಹತ್ತರೊಳಗಾಗಿ ಗುಂಡಿ ಮುಚ್ಚಲಾಗುವುದು, ಮೇಯರ್ ಶಪಥ
ಬಿಬಿಎಂಪಿ ಕಮಿಷನರ್ ಅನಿಲ್ ಕುಮಾರ್ ಪ್ರಕಾರ ನಗರದಾದ್ಯಂತ, ಒಟ್ಟು ಎಂಟು ವಲಯಗಳಲ್ಲಿರುವ ಗುಂಡಿಗಳ ಸಂಖ್ಯೆ ಸುಮಾರು ಆರೂವರೆ ಸಾವಿರ. ಅದರಲ್ಲಿ ಸುಮಾರು 2,900 ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ. ಅತಿಹೆಚ್ಚು ಗುಂಡಿಗಳು ಇರುವುದು ಬೆಂಗಳೂರು ಪೂರ್ವ ಮತ್ತು ಮಹದೇವಪುರ ವಲಯದಲ್ಲಿ. "ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆ ಗುಂಡಿಗಳನ್ನು, ನವೆಂಬರ್ ಹತ್ತರೊಳಗಾಗಿ ಮುಚ್ಚಲಾಗುವುದು" ಎನ್ನುವ ಶಪಥವನ್ನು ಮೇಯರ್ ಮಾಡಿದ್ದರು.
ಹಳೆಯ ರಸ್ತೆ ಮತ್ತು ಡಾಂಬರ್ ಹಾಕಿದ ನಂತರ ರಸ್ತೆಯ ಫೋಟೋ
ಅಕ್ಟೋಬರ್ 22ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಮೇಯರ್ ಈ ಶಪಥವನ್ನು ಮಾಡಿದ್ದರು. ಇದನ್ನು ಸವಾಲಾಗಿ ತೆಗೆದುಕೊಂಡಿರುವ ಬಿಬಿಎಂಪಿ ಕಮಿಷನರ್ ಮತ್ತು ಅಧಿಕಾರಿಗಳು, ಶರವೇಗದಲ್ಲಿ ಕೆಲಸವನ್ನು ನಡೆಸುತ್ತಿದ್ದಾರೆ. ಹಳೆಯ ರಸ್ತೆ ಮತ್ತು ಡಾಂಬರ್ ಹಾಕಿದ ನಂತರ ರಸ್ತೆಯ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ , ಕಮಿಷನರ್ ಹಾಕುತ್ತಿದ್ದಾರೆ.
|
ಬಿಬಿಎಂಪಿ ಕಮಿಷನರ್ ಬಿ.ಎಚ್.ಅನಿಲ್ ಕುಮಾರ್
ಬಿಬಿಎಂಪಿ ಕಮಿಷನರ್ ಬಿ.ಎಚ್.ಅನಿಲ್ ಕುಮಾರ್ ರಸ್ತೆಗುಂಡಿ ಮುಚ್ಚುವ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದ್ದಾರೆ. "A glimpse of BBMP working day & night to meet its Nov 10 pothole filling deadline. ನವೆಂಬರ್ 10 ರ ಗಡುವಿನೊಳಗೆ ಗುಂಡಿ ಮುಚ್ಚಲು ಬಿಬಿಎಂಪಿ ಹಗಲಿರುಳು ಶ್ರಮಿಸುತ್ತಿರುವ ದೃಶ್ಯ" ಎನ್ನುವ ಒಕ್ಕಣೆಯನ್ನು ಬರೆದು, ಅದಕ್ಕೆ @BBMPCOMM, @CMofKarnataka, @BBMP_MAYOR, @csogok, @blrcitytraffic, @KarnatakaVarthe ಟ್ಯಾಗ್ ಮಾಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ
ಬಿಬಿಎಂಪಿ ಮೇಯರ್ ಅವರ ಈ ಶಪಥ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮೇಯರ್ ಆದೇಶಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸುತ್ತಿರುವ ರೀತಿಗೆ ಅಲ್ಲಲ್ಲಿ ಪ್ರಶಂಸೆಗೊಳಗಾಗುತ್ತಿದೆ. ಜೊತೆಗೆ, ಕಳಪೆ ಕಾಮಗಾರಿಯ ಬಗ್ಗೆ, ಮತ್ತು ತಮ್ಮತಮ್ಮ ವಾರ್ಡಿನ ರಸ್ತೆಯ ಬಗ್ಗೆ, ಸಾರ್ವಜನಿಕರು ಕಾಮೆಂಟ್ ಮಾಡುತ್ತಿದ್ದಾರೆ.