ಮೆದುಳಿನ ಆಪರೇಷನ್ ವೇಳೆ ಗಿಟಾರ್ ಬಾರಿಸುತ್ತಿದ್ದ ಬೆಂಗಳೂರು ಟೆಕ್ಕಿ!
ತನ್ನ ಮೆದುಳು ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ಬಾರಿಸುತ್ತಿದ್ದ ಬೆಂಗಳೂರು ಟೆಕ್ಕಿ. ಎಡಗೈ ಬೆರಳುಗಳ ಸೆಳೆತ ಸಮಸ್ಯೆ ಎದುರಿಸುತ್ತಿದ್ದ ಟೆಕ್ಕಿಯ ಮೆದುಳಿನಲ್ಲಿರುವ ಆ ಬೆರಳುಗಳ ಮೂಲವನ್ನು ಹುಡುಕಲು ವೈದ್ಯರೇ ಹೇಳಿದ್ದ ಸೂಚನೆ. ಈ ಹಿನ್ನೆಲೆಯಲ್ಲಿ
ಬೆಂಗಳೂರು, ಜುಲೈ 20: ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಅತ್ತ ವೈದ್ಯರು ಆತನ ಮೆದುಳಿಗೇ ಅಕ್ಷರಶಃ ಕೈ ಹಾಕಿದ್ದಾಗ, ಆ ಬೆಂಗಳೂರಿನ ಟೆಕ್ಕಿ ಆಪರೇಷನ್ ಥಿಯೇಟರ್ ನ ಆ ಬೆಡ್ ಮೇಲೆ ಮಲಗಿ ಗಿಟಾರ್ ಬಾರಿಸುತ್ತಿದ್ದ!
ಅಚ್ಚರಿಯೆನಿಸುವ ಇಂಥದ್ದೊಂದು ಶಸ್ತ್ರಚಿಕಿತ್ಸೆ ನಡೆದಿರುವುದು ಬೆಂಗಳೂರಿನಲ್ಲೇ. ವಾರದ ಹಿಂದೆ ನಡೆದಿರುವ ವಿಶೇಷ ಆಪರೇಷನ್ ಈಗಷ್ಟೆ ಬೆಳಕಿಗೆ ಬಂದಿದೆ.
ಆ ಆಪರೇಷನ್ ಗೂ, ಗಿಟಾರ್ ವಾದನಕ್ಕೂ ಒಂದು ವೈಜ್ಞಾನಿಕ ನಂಟೂ ಇದೆ. ವಿಷಯ ಇಷ್ಟೆ. ಉದಯ್ (ಹೆಸರು ಬದಲಿಸಲಾಗಿದೆ) ಎಂಬ ಟೆಕ್ಕಿಯು ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ.
#WATCH: Bengaluru man plays guitar as doctors operate on his brain at a city hospital. pic.twitter.com/F9N2Ifp9lU
— ANI (@ANI_news) July 20, 2017
ಆದರೆ, ಕಳೆದೊಂದು ವರ್ಷದಿಂದ ಆತನ ಎಡಗೈನ ಕೆಲ ಬೆರಳುಗಳು ಸ್ನಾಯು ಸೆಳೆತಕ್ಕೊಳಗಾಗಿದ್ದವು. ಹಲವಾರು ವೈದ್ಯೋಪಚಾರಗಳ ಹೊರತಾಗಿಯೂ ಆ ಬೆರಳುಗಳ ಚಲನ ವಲನದಲ್ಲಿ ಯಾವುದೇ ಸುಧಾರಣೆ ಕಂಡಿರಲಿಲ್ಲ.
ಹಾಗಾಗಿ, ಆತ ನಗರದ ಜೈನ್ ಆಸ್ಪತ್ರೆಗೆ ಭೇಟಿ ನೀಡಿದ್ದ. ಅಲ್ಲಿನ ವೈದ್ಯರು ಈತನ ಸಮಸ್ಯೆನ್ನು ಕೂಲಂಕಷವಾಗಿ ಪರಿಶೀಲಿಸಿ, ಶಸ್ತ್ರಚಿಕಿತ್ಸೆ ಮಾಡುವ ನಿರ್ಧಾರಕ್ಕೆ ಬಂದರು. ಈ ಸಮಸ್ಯೆಯನ್ನು 'ಡಿಸ್ಟೋನಿಯಾ' ಎಂದು ವರ್ಗೀಕರಿಸಿದ ವೈದ್ಯರು, ಈ ಸಮಸ್ಯೆಯ ನಿವಾರಣೆಯ ಭಾರವನ್ನು ಬ್ರಿಟನ್ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿರುವ ಭಾರತೀಯ ತಜ್ಞ ಸಂಜೀವ್ ಸಿಸಿ ಅವರಿಗೆ ಹೊರಿಸಿದ್ದರು.
ಅದರಂತೆ, ಕಳೆದ ವಾರ ಶಸ್ತ್ರಚಿಕಿತ್ಸೆ ನಡೆದಿದೆ. ಆದರೆ, ಆಪರೇಷನ್ ಗೂ ಮುನ್ನ ಡಾ. ಸಂಜೀವ್ ಅವರು, ಆ ಟೆಕ್ಕಿಗೆ ತನ್ನ ಎಡಗೈ ಬೆರಳುಗಳು ಸತತವಾಗಿ ಚಲನೆಯಲ್ಲಿರುವ ಚಟುವಟಿಯೊಂದನ್ನು ಮಾಡಬೇಕೆಂದು ಸೂಚಿಸಿದ್ದಾರೆ. ಹಾಗಾಗಿ, ಆತ ತನ್ನ ಅಚ್ಚುಮೆಚ್ಚಿನ ಹವ್ಯಾಸವಾಗಿರುವ ಗಿಟಾರ್ ವಾದನ ಮಾಡುವುದಾಗಿ ಹೇಳಿದ್ದಾನೆ.
ಟೆಕ್ಕಿಯು ಸಮಸ್ಯೆಗೆ ಒಳಗಾಗಿರುವ ತನ್ನ ಎಡಗೈ ಬೆರಳುಗಳನ್ನು ಸತತವಾಗಿ ಚಲನೆಗೊಳಿಸುತ್ತಿದ್ದರೆ ಮೆದುಳಿನಲ್ಲಿರುವ ಆ ಬೆರಳುಗಳ ನರಗಳ ನಿಖರ ಮೂಲವನ್ನು ಗುರುತಿಸಲು ಸಾಧ್ಯ ಎಂಬ ಆಲೋಚನೆ ವೈದ್ಯರದ್ದು. ಹಾಗಾಗಿ, ಟೆಕ್ಕಿಗೆ ಗಿಟಾರನ್ನೇ ನುಡಿಸುವಂತೆ ಹೇಳಿದ್ದಾರೆ.
ಅದರಂತೆ, ಆಪರೇಷನ್ ಗೆ ಒಳಗಾದ ಟೆಕ್ಕಿಯು ಗಿಟಾರ್ ನುಡಿಸುತ್ತಿದ್ದರೆ, ಅತ್ತ ವೈದ್ಯರ ಕೆಲಸ ಮತ್ತಷ್ಟು ಸುಲಭವಾಗಿ ಆತನ ಸಮಸ್ಯೆಗೆ ಕಾರಣವಾಗಿದ್ದ ನರಗಳ ತೊಂದರೆಯನ್ನು ನಿವಾರಿಸಿದ್ದಾರೆ. ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು ಒಂದು ವಾರದ ವಿಶ್ರಾಂತಿಯ ಬಳಿಕ ಈಗ ಆ ಟೆಕ್ಕಿಯು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.