ಮಾಗಡಿ ರಸ್ತೆ-ಮೈಸೂರು ರಸ್ತೆ ಮಾರ್ಗದ ವಿಶೇಷತೆಗಳೇನು?
ಬೆಂಗಳೂರು, ನವೆಂಬರ್, 16: ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವಿನ ಮೆಟ್ರೋ ರೈಲು ಸಂಚಾರ ನವೆಂಬರ್ 18 ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಹಿಂದೆ ಕೇಳಿಬಂದ ಮೂಲ ಸೌಕರ್ಯ ಕೊರತೆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಮೆಟ್ರೋ ಹೊಸ ನಿಲ್ದಾಣಗಳಲ್ಲಿ ಶೌಚಾಲಯ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ.
6.4 ಕಿ ಮೀ ದೂರದ ಮೆಟ್ರೋ ಸಂಚಾರಕ್ಕೆ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಸೋಮವಾರ ಸಂಜೆ ಚಾಲನೆ ನೀಡಿದ್ದರು. ಅಲ್ಲದೇ ಮೆಟ್ರೋ ರೈಲಿನಲ್ಲಿಯೇ ಮಾಗಡಿ ರಸ್ತೆಯಿಂದ ನಾಯಂಡಹಳ್ಳಿವರೆಗೆ ಸಂಚಾರ ಮಾಡಿದರು. ಹಾಗಾದರೆ ರೀಚ್ 2 ನ ಹೊಸ ಮಾರ್ಗದ ಮತ್ತು ನಿಲ್ದಾಣಗಳ ವಿಶೇಷತೆ ನೋಡಿಕೊಂಡು ಬರೋಣ.[ನಮ್ಮ ಮೆಟ್ರೋ ಇನ್ನು ಮುಂದೆ ಕೆಂಪೇಗೌಡ ಮೆಟ್ರೋ?]
ಜಾಹೀರಾತಿಗೆ ಅವಕಾಶ
ಇದೇ ಮೊದಲ ಬಾರಿಗೆ ಮೆಟ್ರೋ ರೈಲಿನಲ್ಲೂ ಜಾಹೀರಾತು ಪ್ರದರ್ಶಿಸಲಾಗುತ್ತಿದೆ. ಕೆಫೆ ಕಾಫಿ ಡೇ ಜಾಹೀರಾತನ್ನು ಮೆಟ್ರೋ ಬೋಗಿಯ ಒಳಭಾಗದಲ್ಲಿ ಅಳವಡಿಸಲಾಗಿದೆ. ಅದರೊಂದಿಗೆ ಮಾರ್ಗ ಸೂಚಕ ಎಲ್ಇಡಿ ಫಲಕದಲ್ಲಿ ರಾಜ್ಯದ ಪ್ರವಾಸಿ ತಾಣಗಳ ವಿವರವನ್ನು ನೀಡಲಾಗುತ್ತಿದೆ.
ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ
ಹೊಸಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಆದಿಚುಂಚನಗಿರಿ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಹೆಸರನ್ನಿಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂಬ ಮಾತು ಸಭೆಯಲ್ಲಿ ಕೇಳಿ ಬಂತು. ಇದಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ನೀಡಿದ್ದು ಹೊಸಹಳ್ಳಿ ನಿಲ್ದಾಣ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣವಾಗಿ ಬದಲಾಗಲಿದೆ.
ಎಷ್ಟು ನಿಲ್ದಾಣಗಳು?
ಉದ್ಘಾಟನೆಯಾದ ಮೆಟ್ರೋ ರೀಚ್ ಒಟ್ಟು ಆರು ನಿಲ್ದಾಣಗಳನ್ನು ಒಳಗೊಂಡಿದೆ. ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿನಗರ, ಮತ್ತು ನಾಯಂಡಹಳ್ಳಿಯಲ್ಲಿ ನಿಲುಗಡೆ ಕಲ್ಪಿಸಲಾಗುತ್ತಿದೆ.
ಲಿಫ್ಟ್ ಕೆಟ್ಟರೆ ಕತೆ ಮುಗೀತು
ವಿದ್ಯುತ್ ಸಮಸ್ಯೆ ಅಥವಾ ತಾಂತ್ರಿಕ ದೋಷದಿಂದ ಲಿಫ್ಟ್ ಕೈ ಕೊಟ್ಟರೆ ನಾಯಂಡಳ್ಳಿ ನಿಲ್ದಾಣದಲ್ಲಿ ವಯೋವೃದ್ಧರು ಸಮಸ್ಯೆ ಎದುರಿಸಬೇಕಾಗುತ್ತದೆ. ಪಕ್ಕದಲ್ಲಿಯೇ ಪ್ಲೈ ಓವರ್ ಹಾದು ಹೋಗಿರುವುದರಿಂದ ಮೆಟ್ರೋ ನಿಲ್ದಾಣ ಅತಿ ಎತ್ತರದಲ್ಲಿದೆ. ನೆಲದಿಂದ ಒಟ್ಟು 5 ಮೆಟ್ಟಿಲುಗಳ ಸಾಲು ಏರಿ ನಿಲ್ದಾಣ ತಲುಪಬೇಕಾಗುತ್ತದೆ.