ಪ್ರೇಮಿಸುವ ಮನಸುಗಳಿಗಾಗಿ ಬೆಂಗಳೂರಿನಲ್ಲಿ ವಿಶಿಷ್ಟ ಕಾರ್ಯಕ್ರಮ
ಬೆಂಗಳೂರು, ಫೆಬ್ರವರಿ, 13: ವ್ಯಾಲಂಟೈನ್ಸ್ ಡೇ ಹಿನ್ನಲೆಯಲ್ಲಿ 'ಲವ್ ಇಸ್ ಇಂಡಿಯಾ' ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಂಜೆ 4 ಗಂಟೆಯಿಂದ 'ಪ್ರೀತೀನೇ ನಮ್ ಜಾತಿ, ಪ್ರೇಮಾನೇ ನಮ್ಮ ದೇಶ - ಧರ್ಮ' ಘೋಷವಾಕ್ಯದಡಿ ಕಾರ್ಯಕ್ರಮ ಆರಂಭವಾಗಲಿದೆ.
ಪ್ರೇಮ ವಿವಾಹಿತ ಜೋಡಿಗಳು, ಅಂತರ್ಜಾತೀಯ - ಅಂತರ್ ಧರ್ಮೀಯ ದಂಪತಿಗಳು, ಯುವ ಪ್ರೇಮಿಗಳು ಹಾಗೂ ಸಿನೆಮಾ, ಸಾಹಿತ್ಯ, ಕಲೆ, ಕ್ರೀಡೆ, ರಾಜಕೀಯ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.[ಪ್ರೇಮಕೆ ಹುಟ್ಟೂ ಇಲ್ಲ, ಹೇಳಿಕೊಡಲು ಗುರುವೂ ಬೇಕಾಗಿಲ್ಲ!]
ಸಮಾನಾಸಕ್ತ ಗೆಳೆಯರ 'ಲವ್ ಇಸ್ ಇಂಡಿಯಾ' ತಂಡವು ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಆಯೋಜಿಸಿದೆ. ಪ್ರೇಮಗೀತೆಗಳ ಗಾಯನ, ನೃತ್ಯ ರೂಪಕ, ಪ್ರೇಮಿಗಳ ಮಾನವ ಸರಪಳಿ ಮೊದಲಾದ ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.
ಅನಿಸಿಕೆ ಹಂಚಲಿದ್ದಾರೆ
ಪ್ರೇಮ ವಿವಾಹಿತ ಜೋಡಿಗಳು, ಅಂತರ್ಜಾತೀಯ - ಅಂತರ್ ಧರ್ಮೀಯ ದಂಪತಿಗಳು, ಯುವ ಪ್ರೇಮಿಗಳು ಹಾಗೂ ಕುಟುಂಬ ಮತ್ತು ಹಿತೈಷಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಭಾಗವಹಿಸುವ ಪ್ರಮುಖರು
ನಟರಾಜ್ ಹುಳಿಯಾರ್, ವಸುಂಧರಾ ಭೂಪತಿ, ಮಾವಳ್ಳಿ ಶಂಕರ್, ಲೀಲಾ ಸಂಪಿಗೆ, ಶಶಿಧರ್ ಭಟ್, ಉಷಾ ಕಟ್ಟೇಮನೆ, ಎಚ್.ಎಲ್ ಪುಷ್ಪಾ, ಆರ್ ಜಿ ಹಳ್ಳಿ ನಾಗರಾಜ್, ಆರ್.ಪೂರ್ಣಿಮಾ, ಅಕ್ಕೈ ಪದ್ಮಶಾಲಿ, ಚಿತ್ರನಟರಾದ ಚೇತನ್ ಮತ್ತು ಅಚ್ಯುತ್ ಕುಮಾರ್ ಭಾಗವಹಿಸಲಿರುವ ಪ್ರಮುಖರು.
ಯಾಕಾಗಿ ಕಾರ್ಯಕ್ರಮ?
ಪ್ರೇಮಿಸುವ ಮನಸ್ಸುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ವಿಶಿಷ್ಟಪ್ರಯತ್ನವನ್ನು ಯಶಸ್ವಿಯಾಗಿಸಲು 'ಲವ್ ಇಸ್ ಇಂಡಿಯಾ' ತಂಡ ಸಾರ್ವಜನಿಕರಿಗೆ ಆಹ್ವಾನನ ನೀಡುತ್ತಿದೆ.
ಸಾಮಾಜಿಕ ಚಿಂತನೆ
ಪ್ರೀತಿ ಪ್ರೇಮದ ಪರಿಭಾಷೆಯಲ್ಲಿ ಸಾಮಾಜಿಕ ಚಿಂತನೆಯ ಹೊಸ ನೋಟವನ್ನು ಹಂಚಲಿದ್ದು ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಜೆ ಕಾರ್ಯಕ್ರಮಕ್ಕೆ ಒಂದು ಭೇಟಿ ನೀಡಬಹುದು.