ಬೆಂಗಳೂರು ಲಾಕ್ ಡೌನ್; ಮಾರ್ಗಸೂಚಿ ಪ್ರಕಟ
ಬೆಂಗಳೂರು, ಜುಲೈ 13 : ಕರ್ನಾಟಕ ಸರ್ಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಒಂದು ವಾರದ ಲಾಕ್ ಡೌನ್ ಘೋಷಣೆ ಮಾಡಿದೆ. ಲಾಕ್ ಡೌನ್ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.
Recommended Video
ಸೋಮವಾರ ಕರ್ನಾಟಕ ಸರ್ಕಾರ ಎರಡು ಜಿಲ್ಲೆಗಳಿಗೆ ಲಾಕ್ ಡೌನ್ ಮಾರ್ಗಸೂಚಿ ಪ್ರಕಟಿಸಿದೆ. ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಎರಡೂ ಜಿಲ್ಲೆಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಒಂದು ವಾರದ ಬಳಿಕ ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಚಿತ್ರಗಳು; ಬೆಂಗಳೂರಲ್ಲಿ ಲಾಕ್ ಡೌನ್, ನಗರ ಬಿಟ್ಟು ಹೊರಟ ಜನ
ಜುಲೈ 14ರ ಮಂಗಳವಾರ ರಾತ್ರಿ 8 ಗಂಟೆಯಿಂದ ಜುಲೈ 22ರ ಸಂಜೆ 5 ಗಂಟೆ ತನಕ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಸರ್ಕಾರದ ಎಲ್ಲಾ ಕಚೇರಿಗಳು ಸಹ ಈ ಅವಧಿಯಲ್ಲಿ ಬಾಗಿಲು ಮುಚ್ಚಿರಲಿವೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಬೆಂಗಳೂರು ಲಾಕ್ ಡೌನ್; ಯಡಿಯೂರಪ್ಪ ಮಹತ್ವದ ಟ್ವೀಟ್
ಲಾಕ್ ಡೌನ್ನಿಂದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ, ತುರ್ತು ಸೇವೆಗಳು, ಬಿಬಿಎಂಪಿ ಮತ್ತು ಕಾರಾಗೃಹ ಇಲಾಖೆಗೆ ವಿನಾಯಿತಿ ನೀಡಲಾಗಿದೆ. ಬಿಬಿಎಂಪಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳಿಗೆ ವಿನಾಯಿತಿ ಇದೆ.
ಟಾಮ್ ಟಾಮ್ ಸುದ್ದಿ: ಬೆಂಗಳೂರು ಬಿಟ್ಟು ಹೊರಟವರಿಗೆ 800 ಬಸ್!
ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ
* ಲಾಕ್ ಡೌನ್ ಅವಧಿಯಲ್ಲಿ ವಿಧಾನಸೌಧ, ವಿಕಾಸಸೌಧ, ಬಹುಹಡಿ ಕಟ್ಟಡಗಳಲ್ಲಿರುವ ಕಚೇರಿಗಳು ಶೇ 50ರಷ್ಟು ಸಿಬ್ಬಂದಿ ಜೊತೆಗೆ ಕೆಲಸ ಮಾಡಬೇಕು.
* ನ್ಯಾಯಾಲಯ ಮತ್ತು ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಚೇರಿಗಳು ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಣೆ ಮಾಡಬೇಕು.
* ಬಿಬಿಎಂಪಿ, ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಕೋವಿಡ್ - 19 ಸಂಬಂಧಿಸಿದ ಕಾರ್ಯಗಳಿಗೆ ನಿಯೋಜಿಸಿದ ಸರ್ಕಾರೇತರ ಸಂಸ್ಥೆಗಳ ಕಚೇರಿಗಳು ಹಾಗೂ ಸ್ವಯಂ ಸೇವಕರು ಇತರೆ ಎಲ್ಲಾ ಕಚೇರಿಗಳು ತಮ್ಮ ಸಿಬ್ಬಂದಿಯನ್ನು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಪ್ರೋತ್ಸಾಹಿಸುವುದು.
ಕೃಷಿ ಚಟುವಟಿಕೆಗಳಿಗೆ ವಿನಾಯಿತಿ
* ಎಲ್ಲಾ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡಬಹುದು. ರೈತರು ಮತ್ತು ಕೃಷಿ ಕಾರ್ಮಿಕರು ತಮ್ಮ ಜಮೀನಿನಲ್ಲಿ ಕೆಲಸ ಮಾಡಬಹುದು.
* ಎಲ್ಲಾ ಮಂಡಿಗಳು, ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಗಳು, ಇ-ಮಾರುಕಟ್ಟೆ, ರೈತರಿಂದ ನೇರವಾಗಿ ಖರೀದಿ ಮಾಡುವ ಉದ್ಯಮಗಳಿಗೆ ವಿನಾಯಿತಿ ಇದೆ.
* ರಸಗೊಬ್ಬರ, ಕೀಟನಾಶಕ ಹಾಗೂ ಬೀಜಗಳ ತಯಾರಿಕೆ, ವಿತರಣೆ ಹಾಗೂ ಚಿಲ್ಲರೆ ಮಾರಾಟಗಾರರು ಲಾಕ್ ಡೌನ್ನಿಂದ ವಿನಾಯಿತಿ.
ರೈಲು ಮತ್ತು ವಿಮಾನ ಸೇವೆ
* ಈಗಾಗಲೇ ನಿಗದಿಯಾಗಿರುವ ವಿಮಾನ ಹಾಗೂ ರೈಲುಗಳು ಲಾಕ್ ಡೌನ್ ಅವಧಿಯಲ್ಲಿ ಸಂಚಾರ ನಡೆಸಬಹುದು. ವಿಮಾನ ಮತ್ತು ರೈಲುಗಳ ಟಿಕೆಟ್ಗಳನ್ನು ಪ್ರಯಾಣಿಕರ ಪಾಸು ಎಂದು ಪರಿಗಣಿಸಲಾಗುತ್ತದೆ. ಟ್ಯಾಕ್ಸಿ ಮತ್ತು ಆಟೋಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಯಾವುದೇ ಹೊಸ ವಿಮಾನ, ರೈಲು ಸಂಚಾರಕ್ಕೆ ಅವಕಾಶವಿಲ್ಲ.
* ತುರ್ತು ಪರಿಸ್ಥಿತಿಗಾಗಿ ಬಾಡಿಗೆಗೆ ತೆಗೆದುಕೊಂಡವುಗಳನ್ನು ಹೊರತುಪಡಿಸಿ ಟ್ಯಾಕ್ಸಿ, ಆಟೋ, ಕ್ಯಾಬ್ಗಳ ಸಂಚಾರವಿಲ್ಲ.
* ಶಾಲೆ, ಕಾಲೇಜು, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಟೇಡಿಯಂ, ಈಜುಕೊಳ, ಆಡಿಟೋರಿಯಂ ಬಾಗಿಲು ತೆರೆಯುವಂತಿಲ್ಲ.
* ಎಲ್ಲಾ ಸಾಮಾಜಿಕ/ರಾಜಕೀಯ/ಕ್ರೀಡಾ/ಮನರಂಜನಾ/ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ ಸಮಾರಂಭ ನಡೆಸುವಂತಿಲ್ಲ.
* ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳನ್ನು ಮುಚ್ಚಬೇಕು. ಧಾರ್ಮಿಕ ಸಭೆಗಳಿಗೆ ನಿಷೇಧವಿದೆ.
ಬಸ್ ಸಂಚಾರವಿಲ್ಲ
* ವಿನಾಯಿತಿ ನೀಡಿರುವ ಸೇವೆ ಹೊರತು ಪಡಿಸಿ ಬಿಎಂಟಿಸಿ, ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳಲ್ಲಿ ಜನರ ಸಂಚಾರ ನಿಷೇಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ರಾಜ್ಯದ ಒಳಗೆ ಮತ್ತು ಹೊರಗೆ ಪ್ರಯಾಣಿಕರ ವಾಹನ ಸಂಚಾರ ನಡೆಸಬಹುದು. ಈ ಚಲನೆಗೆ ಸೇವಾ ಸಿಂಧು ಮೂಲಕ ಅರ್ಹ ಪಾಸು ಪಡೆಯಬೇಕು.
* ತುರ್ತು ಸಂದರ್ಭದಲ್ಲಿ ಮಾತ್ರ ಮತ್ತು ಜಿಲ್ಲೆಯೊಳಗೆ ಪ್ರಯಾಣಿಕ ವಾಹನ, ಬಸ್ಗಳಲ್ಲಿ ಪ್ರಯಾಣಿಸಬಹುದು.
* ತುರ್ತು ಸಂದರ್ಭದಲ್ಲಿ ಮಾತ್ರ ಬೆಂಗಳೂರಿನಿಂದ ನಿರ್ಗಮನ, ಆಗಮನ. ಸಂಚಾರ ನಡೆಸುವಾಗ ಆರೋಗ್ಯ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಪಾಲನೆ ಕಡ್ಡಾಯ.
* ಮಾರ್ಗಸೂಚಿನಲ್ಲಿ ವಿನಾಯಿತಿ ನೀಡಿದ ಚಟುವಟಿಕೆಗಳ ಸಿಬ್ಭಂದಿ ಸಂಚಾರ ನಡೆಸುವಾಗ ಗುರುತಿನ ಚೀಟಿ ತೋರಿಸಬೇಕು. ಪರೀಕ್ಷೆಗೆ ಆಗಮಿಸುವವರು ಪ್ರವೇಶ ಪತ್ರವನ್ನು ಪಾಸುಗಳಾಗಿ ತೋರಿಸಬೇಕು.