ಹರಕೆಯ ಕುರಿಯಾಗಲು ನಾನು ಸಿದ್ಧನಿಲ್ಲ : ವಿಕ್ರಂ ಸಂಪತ್
ಬೆಂಗಳೂರು, ನವೆಂಬರ್, 30: ಅಂತರಾಷ್ಟ್ರೀಯ ಮಟ್ಟದ ಹೆಗ್ಗಳಿಕೆ ಪಡೆದ ಬೆಂಗಳೂರು ಸಾಹಿತ್ಯ ಉತ್ಸವ ಸಂಸ್ಥಾಪಕ ವಿಕ್ರಂ ಸಂಪತ್ ಅವರು ಪ್ರಶಸ್ತಿ ವಾಪಸ್ ಬಗ್ಗೆ ನೀಡಿದ ಹೇಳಿಕೆಯನ್ನು ಕೆಲವು ಸಾಹಿತಿಗಳು ವಿರೋಧಿಸಿದ್ದು, ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ಹಿಂದಡಿ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿಕ್ರಂ ಸಂಪತ್ ಉತ್ಸವದ ಸಂಘಟನೆಯಿಂದ ಹಿಂದೆ ಸರಿದಿದ್ದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.
ಸಾಹಿತ್ಯ ಉತ್ಸವ ಸಂಸ್ಥಾಪಕ ವಿಕ್ರಂ ಸಂಪತ್ ಅವರು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಹಾಗೂ ಟಿಪ್ಪು ಜಯಂತಿ ವಿವಾದ ಹಾಗೂ ಪ್ರಶಸ್ತಿ ವಾಪಾಸ್ ಕುರಿತು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದರಿಂದ ವಿರೋಧಾಬಾಸಗಳು ತಲೆದೋರಿದ ಕಾರಣ ಸಾಹಿತ್ಯೋತ್ಸದ ಆಯೋಜನೆಗೆ ಅಡ್ಡಿಯಾಗಬಾರದೆಂದು ಸಂಘಟನೆಯಿಂದ ಹಿಂದೆ ಸರಿದಿದ್ದಾರೆ.[ಬೆಂಗಳೂರು ಸಾಹಿತ್ಯ ಉತ್ಸವದಿಂದ ಹೊರನಡೆದ ವಿಕ್ರಂ ಸಂಪತ್]
ಸಾಹಿತ್ಯ ಉತ್ಸವ ಸಂಸ್ಥಾಪಕ ವಿಕ್ರಂ ಸಂಪತ್ ಹೇಳಿರುವುದೇನು?
ವಿಕ್ರಂ ಸಂಪತ್ ಅವರು ಅಕ್ಟೋಬರ್ ತಿಂಗಳಲ್ಲಿ ಪ್ರಶಸ್ತಿ ವಾಪಸ್ ಕುರಿತು ಬರೆದ ಲೇಖನಕ್ಕೆ ನಾಡಿನ ಸಾಹಿತಿ, ಲೇಖಕರಿಂದ ವಿರೋಧಗಳಿಗೆ ಪ್ರತಿಕ್ರಿಯಿಸಿದ ಅವರು ಉತ್ಸವದ ಹರಕೆಯ ಕುರಿಯಾಗಲು ನಾನು ಸಿದ್ಧನಿಲ್ಲ ಎಂದು ತಮ್ಮ ಗಟ್ಟಿ ನಿರ್ಧಾರ ತಿಳಿಸಿದ್ದಾರೆ.
ಪ್ರಶಸ್ತಿಯನ್ನು ಯಾವುದೇ ರಾಜಕೀಯ ಪಕ್ಷವಾಗಲೀ, ಸರ್ಕಾರವಾಗಲೀ ನೀಡುವುದಿಲ್ಲ. ಪ್ರಶಸ್ತಿಯನ್ನು ನಮ್ಮ ವೈಯಕ್ತಿಕ ಕಾರ್ಯ ಸಾಧನೆ ಗುರುತಿಸಿ ಮಹಾನ್ ವಿದ್ವಾಂಸರ ನಿರ್ಧಾರದ ಮೇಲೆ ಕೊಡಲಾಗುತ್ತದೆ. ಜಗತ್ತಿನ ಪ್ರತಿಯೊಂದು ವಿಚಾರ, ಪದ್ಧತಿಗಳನ್ನು ವಾಸ್ತವದ ನೆಲೆಗಟ್ಟಿನ ಜೊತೆಯಲ್ಲಿ ತಾತ್ವಿಕ, ಸೈದ್ಧಾಂತಿಕ ಹೀಗೆ ನಾನಾ ದಿಕ್ಕುಗಳಲ್ಲಿ ವಸ್ತು ನಿಷ್ಠವಾಗಿ ಅಭಿವ್ಯಕ್ತಿಸಿದಾಗಲೇ ನಮ್ಮ ಆಲೋಚನೆ, ಮಾತು ಮತ್ತು ಅಭಿವ್ಯಕ್ತತೆಯಲ್ಲಿ ಸ್ವಾತಂತ್ರ್ಯತೆಯನ್ನು ಎತ್ತಿ ಹಿಡಿಯಲು ಸಾಧ್ಯವಾಗುತ್ತದೆ.[ಪ್ರಶಸ್ತಿ ಹಿಂದಿರುಗಿಸುತ್ತಿರುವ ನಾಡಿನ ಸಾಹಿತಿಗಳಿಗೆ 6 ಪ್ರಶ್ನೆಗಳು]
ಇತಿಹಾಸಕಾರರು, ಪುರಾತತ್ವ ಶಾಸ್ತ್ರಜ್ಞರು ಹಾಗೂ ಕಲಾವಿದರು ಸೇರಿ ಟಿಪ್ಪುಸುಲ್ತಾನ ವಿವಾದವನ್ನು ಭಾರತದ ಇತಿಹಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ನಾನಾ ದೃಷ್ಟಿಕೋನದ ಅಡಿಯಲ್ಲಿ ಚರ್ಚೆ ಮಾಡುವ ಸಲುವಾಗಿ ಈಗಾಗಲೇ ನಾನು ಸಮ್ಮತಿ ಸೂಚಿಸಿ ಮನವಿಗೆ ಸಹಿ ಮಾಡಿದ್ದೇನೆ.
ಮೈಸೂರು ಇತಿಹಾಸದ ಬಗ್ಗೆ ಹಲವಾರು ವಿದ್ವಾಂಸರ ಜೊತೆ ಸೇರಿ ಸುಮಾರು 15 ವರ್ಷ ಅಧ್ಯಯನ ಮಾಡಿದ್ದೇನೆ. ಆದರೂ ಇತಿಹಾಸದ ಕುರಿತಾಗಿ ಮಾತನಾಡಲು ಹಾಗೂ ಈ ದೇಶಕ್ಕಾಗಿ ಹೋರಾಡಿ ಮಡಿದ ಶ್ರೇಷ್ಠ ರಾಷ್ಟ್ರನಾಯಕರ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಲು ನನಗೆ ಇನ್ನಷ್ಟು ಜ್ಞಾನದ ಅವಶ್ಯಕತೆ ಇದೆ ಎಂದು ನಾನು ಭಾವಿಸಿದ್ದೇನೆ. ಯಾವುದೇ ವಿಚಾರವಾಗಿ ನಾವು ಪೂರ್ವಗ್ರಹ ಪೀಡಿತರಾಗಿಬಾರದು. ಇದಕ್ಕಾಗಿ ಸಮಗ್ರ ಅಧ್ಯಯನದ ಅವಶ್ಯಕತೆ ಇದೆ.[ಕಿರಿಯ ಗೆಳೆಯ ವಿಕ್ರಮ್ ಬರೆದ ಬೃಹತ್ ಗ್ರಂಥ]
'ನನ್ನ ವೈಯಕ್ತಿಕ ಅಭಿಪ್ರಾಯದಿಂದ ಬೃಹತ್ ಕಾರ್ಯಕ್ರಮಕ್ಕೆ ತೊಂದರೆಯಾಗುವುದು ಬೇಡ. ನನ್ನ ಜತೆಗೆ ಕಾರ್ಯನಿರ್ವಹಿಸುತ್ತಿರುವ ಪ್ರಬಲ ತಂಡ ಈ ವರ್ಷದ ಉತ್ಸವವನ್ನು ಮುನ್ನಡೆಸಲಿದೆ. ಉತ್ಸವದ ಎಲ್ಲ ಹೊಣೆಯಿಂದ ಹೊರ ನಡೆಯುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ'
ನನ್ನ ಅಭಿವ್ಯಕ್ತತೆಯಿಂದ ಹಲವಾರು ಸಾಹಿತಿಗಳು, ಲೇಖಕರು ಸಾಹಿತ್ಯ ಉತ್ಸವದಿಂದ ಹಿಂಜರಿಯುವ ಅಭಿಮತ ವ್ಯಕ್ತಪಡಿಸಿದ್ದಾರೆ. 2012 ಹಾಗೂ 2013ರಲ್ಲಿ ಸುಮಾರು 200ಕ್ಕೂ ಹೆಚ್ಚು ಲೇಖಕರನ್ನು ಆಕರ್ಷಿಸಿದ್ದ ಅಂತರಾಷ್ಟ್ರೀಯ ಮಟ್ಟದ ಸಾಹಿತ್ಯ ಉತ್ಸವ ರದ್ದು ಪಡಿಸುವ ಇಂಗಿತ ನನಗಿಲ್ಲ. ನನ್ನ ನಿಲುವು ಸ್ಪಷ್ಟ ಇದೆ ಎಂದು ವಿಕ್ರಂ ಸಂಪತ್ ಹೇಳಿದ್ದಾರೆ.
ವಿಕ್ರಂ ಸಂಪತ್ ಯಾಕೆ ವಿವಾದಕ್ಕೆ ಈಡಾಗಿದ್ದಾರೆ?
ವಿಕ್ರಂ ಸಂಪತ್ ಅವರು ಪ್ರಶಸ್ತಿ ವಾಪಾಸ್ ಕುರಿತು ಅಕ್ಟೋಬರ್ ತಿಂಗಳಲ್ಲಿ ಒಂದು ಲೇಖನ ಬರೆದಿದ್ದರು. ಅದರಲ್ಲಿ ಟಿಪ್ಪು ಸುಲ್ತಾನ್ ಕುರಿತಾಗಿ ಇನ್ನಷ್ಟು ಅಧ್ಯಯನ ನಡೆಯಬೇಕು ಎಂದಿರುವುದೇ ಹಲವಾರು ಲೇಖಕರು, ವಿದ್ವಾಂಸರಿಗೆ ಮುನಿಸಿಗೆ ಕಾರಣವಾಗಿದೆ.[ಪ್ರಶಸ್ತಿ ವಾಪಸ್ ನೀಡಲಿದ್ದಾರೆ ದೇವನೂರು ಮಹಾದೇವ]
ಬೆಂಗಳೂರು ಸಾಹಿತ್ಯ ಉತ್ಸವ ಯಾವಾಗ ಜರುಗಲಿದೆ?
2015ನೇ ವರ್ಷದ ಸಾಹಿತ್ಯ ಉತ್ಸವವು ಡಿಸೆಂಬರ್ 5 ರ ಶನಿವಾರ ಮತ್ತು 6 ರ ಭಾನುವಾರದಂದು ನಡೆಯಲಿದೆ