ಲ್ಯಾಂಡ್ ಸ್ಕೇಪ್ ಫೋಟೋಗ್ರಾಫಿ ಹಬ್ಬಕ್ಕೆ ಎಲ್ಲರೂ ಬನ್ನಿ
ಬೆಂಗಳೂರು, ಮಾರ್ಚ್. 29: ಛಾಯಾಗ್ರಹಣ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಪ್ರಾಣಿ ಮತ್ತು ನಿಸರ್ಗದ ಚಿತ್ರ ಸೆರೆಹಿಡಿಯುವ ಫೋಟೋಗ್ರಾಫಿ. ಇದನ್ನು ಮೀರಿದ ಪ್ರಯತ್ನಗಳು ಅದೆಷ್ಟು ನಡೆದರೂ ಜನರ ತಲೆಯಲ್ಲಿ ಪ್ರಾಣಿ ಜೀವನ ಸೆರೆಹಿಡಿಯುವುದೇ ಫೋಟೋಗ್ರಾಫಿ ಎಂಬಂತೆ ಕೂತುಬಿಟ್ಟಿದೆ.
ಛಾಯಾಗ್ರಹಣ ರಂಗದಲ್ಲಿ ಭಾರತದಲ್ಲಿ ವಿವಿಧ ಪ್ರಯೋಗಗಳು ನಡೆದಿದ್ದರೂ ಭೂದೃಶ್ಯಾವಳಿಯನ್ನು ಮನಮೋಹಕವಾಗಿ ಕಟ್ಟಿಕೊಡುವ ಲ್ಯಾಂಡ್ ಸ್ಕೇಪ್ ಫೋಟೋಗ್ರಫಿಯಲ್ಲಿ ಇರುವ ಸಾಕಷ್ಟು ಸಾಧ್ಯತೆಗಳು ಇನ್ನೂ ಅಷ್ಟಾಗಿ ತೆರೆದುಕೊಂಡಿಲ್ಲ. ಆ ನಿಟ್ಟಿನಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಸ್ಥೆ ಬೆಂಗಳೂರಿನ ಲ್ಯಾಂಡ್ ಸ್ಕೇಪ್ ವಿಝರ್ಡ್ಸ್.[ವಿಕಿಪೀಡಿಯ ವಿರುದ್ಧ 'ಗೊರಿಲ್ಲ' ವಾರ್]
ಭಾರತದ ಬೇರೆ ಬೇರೆ ಭಾಗಗಳಲ್ಲಿನ ವಿಶಿಷ್ಟ ಭೂದೃಶ್ಯಾವಳಿಗಳನ್ನು ತನ್ನ ವಿಶೇಷ ಪರಿಣಿತಿ ಮತ್ತು ತಂತ್ರಜ್ಞಾನದಿಂದ ಸೆರೆಹಿಡಿಯುತ್ತಿರುವ ಲ್ಯಾಂಡ್ ಸ್ಕೇಪ್ ವಿಝರ್ಡ್ಸ್ ಈ ಬಾರಿ ಎರಡನೇ ಛಾಯಾಗ್ರಹಣ ಹಬ್ಬ - ದಿ ಕನ್ ಫ಼್ಲುಯೆನ್ಸ್ ನ ಸಂಭ್ರಮದಲ್ಲಿದೆ.
ಏಪ್ರಿಲ್ 2 ರಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯ ಸತೀಶ್ ಧವನ್ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಈ ಹಬ್ಬದ ಪ್ರಮುಖ ಉದ್ದೇಶ ಪರಿಸರ ಪ್ರೇಮಿಗಳನ್ನು ಹಾಗೂ ಪ್ರಕೃತಿ ಛಾಯಾಗ್ರಾಹಕರನ್ನು ಒಂದೇ ಸೂರಿನಲ್ಲಿ ಕಲೆಹಾಕಿ ಲ್ಯಾಂಡ್ ಸ್ಕೇಪ್ ಫೋಟೋಗ್ರಾಫಿಯ ಕುರಿತಂತೆ ಚಿಂತನ-ಮಂಥನ ನಡೆಸುವುದು ಎಂದು ಕನ್ಫ್ಲುಯನ್ಸ್ ನಿರ್ದೇಶಕರಲ್ಲಿ ಒಬ್ಬರಾದ ಶಿವಕುಮಾರ್ ಎಲ್. ನಾರಾಯಣ ಅವರ ಆಶಯ.[ಆಸ್ಟ್ರೋ ಮೋಹನ್ ಚಿತ್ರಗಳಿಗೆ ಅಂತಾರಾಷ್ಟ್ರೀಯ ಮನ್ನಣೆ]
ಈ ಕಾರ್ಯಕ್ರಮದಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಯಂಗ್ ಎಕ್ಸ್ ಪ್ಲೋರರ್ ಎನಿಸಿಕೊಂಡಿರುವ ಪ್ರಸಂಜೀತ್ ಯಾದವ್, ಛಾಯಾಗ್ರಾಹಕರಾದ ದಿನೇಶ್ ಹೆಗಡೆ ಮಾನೀರ್, ಪ್ರವೀಣ್ ಪಿ. ಮೋಹನದಾಸ್, ವಿವೇಕ್ ಕಾಳೆ ಮತ್ತಿತರರು ಭಾಗವಹಿಸಲಿದ್ದು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಲ್ಯಾಂಡ್ ಸ್ಕೇಪ್ ವಿಝರ್ಡ್ಸ್ ನ ಅಶ್ವಿನಿ ಕುಮಾರ್ ಭಟ್ ತಿಳಿಸಿದ್ದಾರೆ.
'ಅಗ್ನಿ ಭೂದೃಶ್ಯಾವಳಿಯ ಬೆನ್ನು ಹತ್ತಿ' ಎಂಬ ಕಥೆಯನ್ನು ತೆರೆದಿಡುವ 'ಫಯರಿ ಲ್ಯಾಂಡ್ ಸ್ಕೇಪ್' ನ ವೀಡಿಯೋ ಪ್ರದರ್ಶನವನ್ನು ಸಹ ಕನ್ಫ್ಲುಯನ್ಸ್ ಒಳಗೊಂಡಿದೆ. ಗುಜರಾತ್ ನ ಬನ್ನಿ ಹುಲ್ಲುಗಾವಲಿನಲ್ಲಿ ನಡೆಯುವ ಅತಿ ಅಪರೂಪದ ಮತ್ತು ನಿಗೂಢ ಬೆಳಕನ್ನು ಚಿತ್ರೀಕರಿಸುವ ಪ್ರಯತ್ನದ ವೀಡಿಯೋ ಡಾಕ್ಯುಮೆಂಟರಿ ಇದಾಗಿದೆ ಎನ್ನುತ್ತಾರೆ ಫಯರಿ ಲ್ಯಾಂಡ್ ಸ್ಕೇಪ್ ನ ನಿರ್ದೇಶಕ ಹಾಗೂ ಲ್ಯಾಂಡ್ ಸ್ಕೇಪ್ ವಿಝರ್ಡ್ಸ್ ನ ಶ್ರೀಹರ್ಷ ಗಂಜಂ.
ನೆನಪಿರಲಿ ಈ ಹಬ್ಬದ ಎಲ್ಲಾ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತ. ನಿಸರ್ಗದ ಹಲವಾರು ಕೋನಗಳನ್ನು ಕಟ್ಟಿಕೊಡುವ ಹಬ್ಬಕ್ಕೆ ನೀವು ಒಂದು ಹಾಜರಿ ಹಾಕುತ್ತೀರಾ ತಾನೆ? ಹೆಚ್ಚಿನ ಮಾಹಿತಿಗೆ ಕೆಳಗಿನ ತಾಣಗಳಿಗೆ ಧಾರಾಳವಾಗಿ ಭೇಟಿ ನೀಡಬಹುದು.
* ತಂಡದ ವಿವರ
* ಕಾರ್ಯಕ್ರಮದ ಆಮಂತ್ರಣ