ಕನ್ನಡ ಸಾಹಿತ್ಯ ಪರಿಷತ್ತು: ವಿವಿಧ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ
ಬೆಂಗಳೂರು, ಆಗಸ್ಟ್, 05 : ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಪರಿಷತ್ತು 2014ನೇ ಸಾಲಿನಲ್ಲಿ ಪ್ರಶಸ್ತಿ ಪಡೆದ ವಿವಿಧ ಕೃತಿಗಳು ಹಾಗೂ ಕೃತಿಕಾರರ ಆಯ್ಕೆಪಟ್ಟಿ ಪ್ರಕಟಿಸಿದೆ.
ಸ್ವಸ್ತಿ ಶ್ರೀ ದೇವೇಂದ್ರ ಕೀರ್ತಿ ದತ್ತಿಯ 6,000ರೂ ನಗದು ಪ್ರಶಸ್ತಿಗೆ 'ಡಾ. ಹೊ.ಶ್ರೀ ಮದನಕೇಸರಿ' ಅವರ 'ಜೈನಧರ್ಮಾಧ್ಯಯನ', ಭಾರತೀಸುತ ಸ್ಮಾರಕ ದತ್ತಿಯ ನಗದು ಪ್ರಶಸ್ತಿ 5,000ರೂ ಪ್ರಕಟಿಸಿದ್ದು, 'ವಿಶ್ವನಾಥ ಕಾರ್ನಾಡ್' ಅವರ 'ಹಿಂದಿರುಗಿ ಬಂದವನು' ಎಂಬ ಕೃತಿಗೆ ದೊರೆತಿದೆ.[ಮುಮ್ಮಡಿ ಶ್ರೀಕೃಷ್ಣರಾಜರ ಕಾಲದ ಕಾದಂಬರಿಗೆ 100]
ಶ್ರೀಮತಿ ಲಕ್ಷ್ಮೀದೇವಿ ಶಾಂತರಸ ಹೆಂಬೇರಾಳು ದತ್ತಿ ವತಿಯಿಂದ 5,000 ನಗದು ಬಹುಮಾನ 'ಸುದಾ ಚಿದಾನಂದ ಗೌಡ' ಅವರ 'ಬಯಲ ಧ್ಯಾನ' ಕೃತಿಗೆ ದೊರೆತಿದೆ. ಕನ್ನಡ ಸಾಹಿತ್ಯ ಪರಿಷತ್ತು ಬೀಳಗಿ ಘಟಕ ದತ್ತಿ ನಗದು ಪ್ರಶಸ್ತಿ 2,000ರೂ 'ತಿರುಪತಿ ಭಾಗ' ಅವರ ಕಥಾ ಸಂಕಲನ 'ಜಾತಿ ಕುಲುಮ್ಯಾಗ ಅರಳಿದ ಪ್ರೀತಿ', ಶಿವಾನಂದ ಪೂಜಾರಿ ಅವರ 'ನೆನೆಯಿಟ್ಟ ನೆನಪು', 'ಸಿದ್ದು ದಿವಾಣ' ಅವರ 'ಹಂತಿ ನೀ ಎಲ್ಹೋಗಿ ಕುಂತಿ' ಎಂಬ ಜಾನಪದ ಕೃತಿಗೆ ಲಭಿಸಿದೆ.
ಅಮೃತ ಮಹೋತ್ಸವ ಸವಿ ನೆನಪಿನ ದತ್ತಿಯ 5,000 ನಗದು ಪ್ರಶಸ್ತಿಯು ಚೇತನ ಸೋಲಗಿಯವರ 'ಸಾಫ್ಟ್ ಜಗತ್ತಿನಲ್ಲಿ' ಎಂಬ ಕೃತಿಗೆ ಲಭಿಸಿದೆ. ನಿಡುಸಾಲೆ ಪುಟ್ಟಸಾಮಯ್ಯ ಸಾಹಿತ್ಯ ದತ್ತಿಯ 5,000ರೂ ನಗದು ಬಹುಮಾನವನ್ನು ವಸಂತ ಕುಷ್ಟಗಿ ಅವರ 'ಹೈದರಾಬಾದ್ ಕರ್ನಾಟಕ ಕಣಜದಿಂದ' ಎಂಬ ಕೃತಿ ಪಡೆದುಕೊಂಡಿದೆ.
ಶ್ರೀಮತಿ ಗೌರಮ್ಮ ಗಂಗಾಧರಯ್ಯ ಮತ್ತು ಮಕ್ಕಳ ಸಾಹಿತ್ಯ ದತ್ತಿಯ ನಗದು ಪ್ರಶಸ್ತಿಯೂ 10,000ರೂ ಒಳಗೊಂಡಿದ್ದು, ಪ್ರೊ. ಜಿ. ಅಬ್ದುಲ್ ಬಷೀರ್ ಅವರ 'ವಚನ ವಾಙ್ಮಯ ವಿಹಾರ' ಕೃತಿ ಗಳಿಸಿಕೊಂಡಿದೆ. ಗುಬ್ಬಿ ಸೊಲೂರು ಮರುಗಾರಾಧ್ಯ ದತ್ತಿಯ ನಗದು ಪ್ರಶಸ್ತಿ 5,000ರೂ ಇದ್ದು, 'ಶ್ರೀಮತಿ ಎಸ್.ಪಿ. ವಿಜಯಲಕ್ಷ್ಮಿ' ಅವರ 'ಪ್ರೇಮ ತಪಸ್ವಿನಿ ಚಿತ್ರಾಂಗದೆ' ಕೃತಿಗೆ ದೊರೆತಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಸಿ.ಕೆ. ರಾಮೇಗೌಡ ತಿಳಿಸಿದ್ದಾರೆ.