ಹೋಗಿ ಬನ್ನಿ 'ವಿಜಿ' ಸರ್... ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ
ಸರ್.. ನಿಮ್ದೊಂದು ಸಂದರ್ಶನ ಬೇಕಿತ್ತು. ಅದಕ್ಕೇನಂತೆ, 11.30-12ಗಂಟೆ ಹೊತ್ತಿಗೆ ಜಯನಗರ ನಾಲ್ಕನೇ ಬ್ಲಾಕ್ ಸರೌಂಡಿಂಗ್ ನಲ್ಲಿ ಪಾದಯಾತ್ರೆಯಲ್ಲಿ ಇರುತ್ತೇನೆ, ಅಲ್ಲಿಗೇ ಬನ್ನಿ ಎಂದು ಜಯನಗರ ಶಾಸಕ ವಿಜಯ್ ಕುಮಾರ್ ನಿನ್ನೆ ಹೇಳಿದ್ದರು. ಆದರೆ ನಿನ್ನೆ (ಮೇ 3) ನನಗೆ ಸಮಯಾವಾಕಾಶ ಆಗದೇ ಇದ್ದಿದ್ದರಿಂದ, ಸಂದರ್ಶನ ತೆಗೆದುಕೊಳ್ಳಲಾಗಲಿಲ್ಲ. ಈಗ ಸಮಯಾವಕಾಶ ಇದ್ದರೂ, ಅವರಿಲ್ಲ.
ವಿಜಯ್ ಕುಮಾರ್ ಅವರ ನಿಧನದಿಂದ ಅವರ ಅಸಂಖ್ಯಾತ ಅಭಿಮಾನಿಗಳು ಎಷ್ಟು ನೋವಿನಲ್ಲಿದ್ದರೂ, ವೈಯಕ್ತಿಕವಾಗಿ ನನಗೂ ಆತ್ಮೀಯರಾಗಿದ್ದ ಅವರ ನಿಧನ ಶಾಕ್ ತಂದಿದೆ. ಸಾಯುವಂತಹ ವಯಸ್ಸು ಅವರದ್ದಲ್ಲ ಎಂದು ನಾವೆಷ್ಟು ಮಾತನಾಡಿಕೊಂಡರೂ ವಿಧಿಯಾಟ ಬೇರೇನೇ ಇರುತ್ತೆ ಎನ್ನುವುದಕ್ಕೆ ಈ ರೀತಿಯ ಉದಾಹಾರಣೆಗಳು ಸಿಗುತ್ತಲೇ ಇರುತ್ತದೆ.
ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್(60) ವಿಧಿವಶ
ನಮ್ಮ ಒನ್ ಇಂಡಿಯಾ ಕಚೇರಿಗೆ ಆರೇಳು ಬಾರಿ ಭೇಟಿ ನೀಡಿದ್ದ ವಿಜಯ್ ಕುಮಾರ್, ಕ್ಷೇತ್ರಕ್ಕೆ ಸಂಬಂಧಪಟ್ಟ ಅಭಿವೃದ್ದಿ ಕೆಲಸಗಳ ಬಗ್ಗೆ ಮಾತ್ರ ಮಾತಿಗೆ ಕೂರುತ್ತಿದ್ದರೇ ಹೊರತು, ವಿರೋಧ ಪಕ್ಷಗಳ ಮುಖಂಡರ ಬಗ್ಗೆ ಹೆಚ್ಚಾಗಿ ಟೀಕಿಸಲು ಹೋಗುವ ವ್ಯಕ್ತಿತ್ವದವರಾಗಿರಲಿಲ್ಲ.
ಜಯನಗರ ಕ್ಷೇತ್ರದಲ್ಲಿ ಪೀಪಲ್ ಫ್ರೆಂಡ್ಲಿ ಎಂಎಲ್ಎ ಎಂದೇ ಹೆಸರಾಗಿದ್ದ ವಿಜಯ್ ಕುಮಾರ್, ತಮ್ಮ ಕ್ಷೇತ್ರದ ಆಗುಹೋಗುಗಳ ಮೇಳೆ ಎಷ್ಟು ಹಿಡಿತ ಹೊಂದಿದ್ದರು ಎಂದರೆ, ಜಯನಗರ ವ್ಯಾಪ್ತಿಯಲ್ಲಿ ಎಷ್ಟು ಟ್ರಾನ್ಸಫಾರ್ಮರ್ ಇದೆ ಎನ್ನುವ ಲೆಕ್ಕವನ್ನು ನೀಡುವಷ್ಟು ಕಂಟ್ರೋಲ್ ಹೊಂದಿದ್ದರು.
ಜಯನಗರದ ಜನಾನುರಾಗಿ ಶಾಸಕ ಬಿಎನ್ ವಿಜಯ್ ಕುಮಾರ್
ಮೂರು ವರ್ಷಗಳ ಹಿಂದೆ ಜೂನ್ ಐದರಂದು ಆಚರಿಸಲ್ಪಡುವ ವಿಶ್ವಪರಿಸರ ದಿನದಂದು ನಮ್ಮ ಕಚೇರಿ ವಾಕಥಾನ್ ಆಯೋಜಿಸಿತ್ತು. ನಮ್ಮ ಕಚೇರಿಯಿಂದ ಜಯನಗರ ಐದನೇ ಬ್ಲಾಕ್ ನಲ್ಲಿರುವ ಪಾರ್ಕ್ ವರೆಗಿನ ಒಂದೂವರೆ ಕಿ.ಮೀ ದೂರದ ಪಾದಯಾತ್ರೆಯ ಖುದ್ದು ಮುಂದಾಳತ್ವ ವಹಿಸಿಕೊಂಡಿದ್ದ ವಿಜಯ್ ಕುಮಾರ್, ಇಡೀ ಈ ಕಾರ್ಯಕ್ರಮವನ್ನು ಮುತುವರ್ಜಿಯಿಂದ ವಹಿಸಿಕೊಂಡಿದ್ದು ಕಣ್ಣ ಮುಂದೆ ಬರುತ್ತದೆ.
ನಾಲ್ಕೈದು ತಿಂಗಳ ಹಿಂದೆ ವಿಜಯ್ ಕುಮಾರ್ ಅವರ ಸಂದರ್ಶನ ನಡೆಸಿದಾಗ, 'ನನ್ನ ಅನುಭವದಲ್ಲಿ ಇದೇ ಮೊದಲು. ಆರು ತಿಂಗಳು ತಿಂಗಳ ಮೊದಲೇ ಚುನಾವಣಾ ತಯಾರಿ ಆರಂಭವಾಗಿರುವುದು. ನಾನು, ಯಾವುದೇ ಜಾತಿ, ಧರ್ಮವನ್ನು ಇಟ್ಟುಕೊಂಡು ರಾಜಕೀಯ ಮಾಡಿದವನಲ್ಲ. ನನಗೆ ಒಂದು ಸಮುದಾಯದಿಂದ ವೋಟ್ ಬರುವುದಿಲ್ಲ ಎಂದು ಗೊತ್ತಿದ್ದರೂ, ಅಂತವರ ಜೊತೆ ರಾಜಕೀಯ ಮಾಡುವುದಿಲ್ಲ' ಎನ್ನುವ ವಿಜಯ್ ಕುಮಾರ್ ನಿಲುವು ಅಪರೂಪದ್ದು.
ಚಿತ್ರಗಳಲ್ಲಿ: ಸಜ್ಜನ ರಾಜಕಾರಣಿ ವಿಜಯಕುಮಾರ್ ಗೆ ಅಂತಿಮ ನಮನ
ಈ ಬಾರಿ ಗೆದ್ದರೆ ಹ್ಯಾಟ್ರಿಕ್ ಸಾಧಿಸುತ್ತೀರಾ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನದ ಆಕಾಂಕ್ಷಿನಾ ಎಂದು ಕೇಳಿದಾಗ, ಖಂಡಿತವಾಗಿಯೂ ಯಾವ ಸಚಿವ ಸ್ಥಾನದ ಆಕಾಂಕ್ಷಿಯೂ ನಾನಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಂದೆ, ಯಾವುದೇ ಆಪೇಕ್ಷೆಯನ್ನು ಇಟ್ಟುಕೊಂಡಿಲ್ಲ. ನಾನಾಯಿತು ನನ್ನ ಕ್ಷೇತ್ರವಾಯಿತು ಎನ್ನುವ ವಿಜಯ್ ಕುಮಾರ್ ನಿಲುವು, ಬಹುಷ: ಸದ್ಯದ ರಾಜಕೀಯದಲ್ಲಿ ಕಾಣಸಿಗುವುದು ಕಮ್ಮಿ.
ವಿಜಯ್ ಕುಮಾರ್ಗೆ ರಾಜಕೀಯ ನಾಯಕರು, ಅಭಿಮಾನಿಗಳ ಸಂತಾಪ
ಮೂಲತ: ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದ ವಿಜಯ್ ಕುಮಾರ್, ಈ ಬಾರಿಯ ಚುನಾವಣೆಯಲ್ಲಿ ಸಿಕ್ಕಾಪಟ್ಟೆ ಟೆನ್ಸನ್ ಮಾಡಿಕೊಂಡಿದ್ದರು ಎನ್ನುವ ಸುದ್ದಿಯಿತ್ತು. ಸ್ವಪಕ್ಷೀಯರಾಗಲಿ, ವಿರೋಧಿಗಳಾಗಲಿ ಎಲ್ಲರ ಜೊತೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದ ವಿಜಯ್ ಕುಮಾರ್, ಜಯನಗರ ಶಾಪ್ಪಿಂಗ್ ಕಾಂಪ್ಲೆಕ್ಸ್ ಕೆಲಸ ಮುಗಿಸಲು ಆಗಲಿಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ ಎಂದು ಆವಾಗಾವಗ ಹೇಳುತ್ತಿದ್ದರು.
ಬ್ರಹ್ಮಚಾರಿ, ಜನಾನುರಾಗಿಯಾಗಿರುವ, ಆತ್ಮೀಯವಾಗಿ 'ವಿಜಿ' ಎಂದು ಕರೆಯಲ್ಪಡುವ ವಿಜಯ್ ಕುಮಾರ್ ಒಂದು ಲೆಕ್ಕದಲ್ಲಿ ರಾಜಕಾರಣವನ್ನು ಅರಿಯದ ರಾಜಕಾರಣಿ. ಅವರ ಈ ಅಕಾಲಿಕ ನಿಧನ, ಬಿಜೆಪಿಗೆ ಎಷ್ಟು ನಷ್ಟನೋ, ಅದಕ್ಕಿಂತ ಹೆಚ್ಚು ನಷ್ಟ ಜಯನಗರದ ಜನತೆಗೆ. ಹೋಗಿ ಬನ್ನಿ ಸರ್... ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.