ಜಗತ್ತಿನ ಶ್ರೇಷ್ಠ ಹೃದಯ ಚಿಕಿತ್ಸಾ ಕೇಂದ್ರ ಇರುವುದು ನಮ್ಮ ಬೆಂಗಳೂರಲ್ಲಿ!
ಬೆಂಗಳೂರು, ಜನವರಿ 3: ಇತ್ತೀಚೆಗೆ ಜಗತ್ತಿನಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗೇ ಆಸ್ಪತ್ರೆಗಳೂ ಹೆಚ್ಚಾಗಿವೆ. ಹೃದಯ ಚಿಕಿತ್ಸೆಗೆ ಯಾವ ಆಸ್ಪತ್ರೆ ಅತ್ಯುತ್ತಮ? ಎಂಬುದನ್ನು ಕಾಯಿಲೆ ಬಂದವರು ತಡಕಾಡುತ್ತಿರುತ್ತಾರೆ.
ಈ ನಿಟ್ಟಿನಲ್ಲಿ ಸಂತಸದ ವಿಷಯ ಒಂದು ಹೊರ ಬಂದಿದೆ. ಜಗತ್ತಿನಲ್ಲೇ ಹೃದಯ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದರಲ್ಲಿ ಅತ್ಯುತ್ತಮ ಆಸ್ಪತ್ರೆ ಇರುವುದು ನಮ್ಮ ಬೆಂಗಳೂರಿನಲ್ಲಿ. ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹೃದಯ ಚಿಕಿತ್ಸೆಗೆ ಜಗತ್ತಿನಲ್ಲಿ ಅತ್ಯುತ್ತಮವಾದ ಆಸ್ಪತ್ರೆ (ಕಾರ್ಡಿಯಾಕ್ ಸೆಂಟರ್ ಆಫ್ ಎಕ್ಸಲೆನ್ಸ್) ಎಂದು 'ಯುರೋಪಿಯನ್ ಹಾರ್ಟ್ ಜರ್ನಲ್'ನ ಇತ್ತೀಚಿನ ಸಂಚಿಕೆಯಲ್ಲಿ ಹೇಳಲಾಗಿದೆ.
ಅತ್ಯುತ್ತಮ ಹೃದಯ ಚಿಕಿತ್ಸಾ ಕೇಂದ್ರ
ಅತ್ಯಾಧುನಿಕ ಸೌಲಭ್ಯಗಳನ್ನು ರೋಗಿಗಳಿಗೆ ಒದಗಿಸಿ ಅವರು ಬೇಗ ಗುಣಮುಖವಾಗುವಂತೆ ನೋಡಿಕೊಳ್ಳುವುದು ಹಾಗೂ ಹೃದಯ ಸಂಬಂಧಿ ಚಿಕಿತ್ಸೆಯಲ್ಲಿ ನಿರಂತರ ಸಂಶೋಧನೆಯನ್ನು ಆಸ್ಪತ್ರೆ ಕೈಗೊಳ್ಳುತ್ತಾ ಬರುತ್ತಿರುವುದನ್ನು ಪರಿಗಣಿಸಿ ಯುರೋಪ್ ಜರ್ನಲ್ ಈ ವರದಿ ನೀಡಿದೆ. ಇದಕ್ಕೆ ಆಸ್ಪತ್ರೆ ನಿರ್ದೇಶಕ ಹಾಗೂ ಖ್ಯಾತ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ ಸಂತಸ ವ್ಯಕ್ತಪಡಿಸಿದ್ದಾರೆ.
ಮನಸ್ಸಿಗೆ, ಹೃದಯಕ್ಕೆ ನಾವು ಏನೇನ್ ಕಷ್ಟ ಕೊಡ್ತೀವಿ ಗೊತ್ತಾ...
ಜಗತ್ತಿನಾದ್ಯಂತ ಬರುತ್ತಾರೆ
ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ಕೊಡುತ್ತಿದೆ. ಈ ಆಸ್ಪತ್ರೆಗೆ ಕೇವಲ ಕರ್ನಾಟಕವಷ್ಟೇ ಅಲ್ಲದೇ ಭಾರತ ಹಾಗೂ ಜಗತ್ತಿನಾದ್ಯಂತ ಅನೇಕ ಹೃದಯ ರೋಗಿಗಳು ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ.
ರಾಜ್ಯದ ಮೂರು ಕಡೆ
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಕೇವಲ ಬೆಂಗಳೂರಿನಲ್ಲಷ್ಟೇ ಕಾರ್ಯನಿರ್ವಹಿಸುತ್ತಿಲ್ಲ. ಮೈಸೂರು ಹಾಗೂ ಕಲಬುರಗಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರಿನಲ್ಲಿ 700 ಹಾಸಿಗೆ, ಮೈಸೂರಿನಲ್ಲಿ 400 ಹಾಗೂ ಕಲಬುರಗಿಯಲ್ಲಿ 160 ಹಾಸಿಗೆಗಳ ಸೌಲಭ್ಯವನ್ನು ನೀಡಲಾಗಿದೆ. ಸಂಸ್ಥೆಯಲ್ಲಿ ಪ್ರತಿನಿತ್ಯ 1500 ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ನಾಲ್ಕು ದಿನದಲ್ಲಿ 200 ಬಡ ರೋಗಿಗಳ ಜೀವ ಉಳಿಸಿದ ಜಯದೇವ ವೈದ್ಯರು
ದೇಶಕ್ಕೆ ಸಂದ ಗೌರವ
ಜಯದೇವ ಆಸ್ಪತ್ರೆಗೆ ಯುರೋಪಿಯನ್ ಜರ್ನಲ್ನಿಂದ ಮೆಚ್ಚುಗೆಯ ವರದಿ ಬಂದಿರುವುದಕ್ಕೆ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸಂತಸ ವ್ಯಕ್ತಪಡಿಸಿದ್ದು, ಇದು ದೇಶಕ್ಕೆ ಸಂದ ಗೌರವವಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಹಾಗೂ ಮೈಸೂರಲ್ಲೂ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಳ ಮಾಡಲಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.