ಮಾರತ್ಹಳ್ಳಿ ಟು ವೈಟ್ಫೀಲ್ಡ್ = 7 ಕಿಮೀ = 2 ಗಂಟೆ!?
ಬೆಂಗಳೂರು, ನವೆಂಬರ್, 30: 'ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡುತ್ತೇವೆ, ದಿನದ 24 ಗಂಟೆಗಳಲ್ಲಿ 4 ಗಂಟೆ ರಸ್ತೆಯಲ್ಲೆ ವ್ಯಯವಾಗುತ್ತಿದೆ. ಧೂಳು, ಕಸದ ವಾಸನೆ ಸಹಿಸಿಕೊಂಡು ಕಚೇರಿಗೆ, ಅಲ್ಲಿಂದ ಮತ್ತೆ ಅದೇ ಪರಿಸ್ಥಿತಿಯಲ್ಲಿ ಮನೆ ಸೇರುವವರೆಗೆ ಜೀವನವೇ ಹೈರಾಣವಾಗುತ್ತಿದೆ'.
'ನೀವೇ ಲೆಕ್ಕ ಹಾಕಿ ದಿನದಲ್ಲಿ ಇರುವುದು 24 ಗಂಟೆ, ಅದರಲ್ಲಿ 8 ಗಂಟೆ ಕಚೇರಿ 4-5 ಗಂಟೆ ರಸ್ತೆಯಲ್ಲಿ ಕಳೆಯಬೇಕು. ತಲೆನೋವು, ಕೆಮ್ಮು ಇದರ ಕೊಡುಗೆ. ಇಂಥ ಐಟಿ ಸಿಟಿ ಎಂದು ಕರೆಸಿಕೊಳ್ಳುವ ನಮಗೆ ಇಂಥ ರಸ್ತೆಗಳು ಬೇಕೆ?'[ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಬಂತು ಅಪ್ಲಿಕೇಶನ್]
ಇದು 'ಸೇವ್ ವೈಟ್ ಫೀಲ್ಡ್' ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ನೋವು ಭರಿತ ಆಕ್ರೋಶದ ಮಾತು. ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತ ವೈಟ್ ಫೀಲ್ಡ್ ನಿವಾಸಿಗಳು ಸೋಮವಾರ ಬೆಳಗ್ಗೆ 10 ಗಂಟೆಗೆ ಮಾರತ್ ಹಳ್ಳಿ ಸೇತುವೆ ಮೇಲಿಂದ ಪ್ರತಿಭಟನೆ ಆರಂಭಿಸಿದ್ದರು. ಅಲ್ಲಿಂದ ಐಟಿಪಿಎಲ್ ವರೆಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಬೇಡಿಕೆಗಳನ್ನು ಶಾಂತಿಯುತವಾಗಿ ಸರ್ಕಾರದ ಮುಂದೆ ಇಟ್ಟರು.
ಮಾರತ್ ಹಳ್ಳಿ ಟು ವೈಟ್ ಫೀಲ್ಡ್= 2 ಗಂಟೆ
ಮಾರತ್ ಹಳ್ಳಿಯಿಂದ ವೈಟ್ ಫೀಲ್ಡ್ ಗೆ 7 ಕಿಮೀ. ಆದರೆ ಇದನ್ನು ದಾಟಲು ಬರೋಬ್ಬರಿ 2 ಗಂಟೆ ಸಾಕಾಗಲ್ಲ. ಇದು ಪ್ರತಿದಿನದ ಅವಸ್ಥೆ ಮೊದಲು ಗುಂಡಿನ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಬೇಕಿದೆ ಎಂದು ಕಳೆದ 15 ವರ್ಷಗಳಿಂದ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿರುವ ಇಂಜಿನಿಯರ್ ಶ್ರೀನಿವಾಸ್ ರಾಜು ಹೇಳುತ್ತಾರೆ.
ಸಿಲ್ಕ ಬೋರ್ಡ್-ಮಾರತ್ ಹಳ್ಳಿ
ಸಿಲ್ಕ ಬೋರ್ಡ್-ಮಾರತ್ ಹಳ್ಳಿ ಹೆಸರು ಕೇಳಿದರೆ ಬೆಚ್ಚಿ ಬೀಳುವಂಥ ಸ್ಥಿತಿ ನಮ್ಮದಾಗಿದೆ. ಯಾವುದೇ ವ್ಯಕ್ತಿ ಆರೇಳು ಕಿಮೀ ಕ್ರಮಿಸಲು ಎರಡು ಗಂಟೆ ವ್ಯಯಿಸಬೇಕಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು
ಬೆಳಗ್ಗೆ ಸಂಜೆ ನರಕಯಾತನೆ
ಪ್ರತಿದಿನ ಬೆಳಗ್ಗೆ ಕಚೇರಿ ತಲುಪುವವರು ಮತ್ತು ಸಂಜೆ ಮನೆಗೆ ಹಿಂದಿರುಗುವರಿಗೆ ಟ್ರಾಫಿಕ್ ಎಂಬ ನರಕಯಾತನೆ ಪ್ರತಿದಿನದ ಅನುಭವ. ಇದಕ್ಕೆಲ್ಲ ಮುಕ್ತಿ ಯಾವ ಕಾಲಕ್ಕೆ ಎಂದು ಮಾರತ್ ಹಳ್ಳಿ ನಿವಾಸಿ ಅಜಿತ್ ಪ್ರಶ್ನೆ ಮಾಡುತ್ತಾರೆ.
ಮಕ್ಕಳಾಟವಲ್ಲ!
ಸೇವ್ ವೈಟ್ ಫೀಲ್ಡ್ ಪ್ರತಿಭಟನೆಯಲ್ಲಿ ಮಕ್ಕಳು ಪಾಲ್ಗೊಂಡಿದ್ದು ವಿಶೇಷ. ಶಾಲೆಯಲ್ಲಿ ಕಳೆಯುವಷ್ಟೇ ಸಮಯವನ್ನು ರಸ್ತೆಯಲ್ಲಿ ಕಳೆಯಬೇಕಾಗಿದೆ ಎಂದು ಬಾಲಕಿ ಸಂಚಿತಾ ನೊಂದು ನುಡಿಯುತ್ತಾಳೆ.
ಪರಿಹಾರ ಇಲ್ಲವೇ?
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಐಟಿ ಉದ್ಯೋಗಿಗಳು ಹೇಳುವುದು ಒಂದೇ ಮಾತು. ಸಾರ್ವಜನಿಕ ಸಾರಿಗೆಗೆ ನಾಗರಿಕರೆಲ್ಲರೂ ಒತ್ತು ನೀಡಬೇಕು, ಅಂಥ ಸೌಲಭ್ಯವನ್ನು ಸರ್ಕಾರವೇ ಕಲ್ಪಿಸಬೇಕು. ಮೃತ್ಯುಕೂಪಗಳಾಗಿರುವ ರಸ್ತೆಯನ್ನು ಮೊದಲು ಸರಿಮಾಡಬೇಕು ಎಂದು ಐಟಿ ಕಚೇರಿಗಳಿಗೆ ಸಂಬಂಧಿಸಿ ಆಹಾರ ಪರಿಶೀಲನೆ ಕೆಲಸ ಮಾಡುತ್ತಿರುವ ಅನಿತಾ ಝಾ ಆಗ್ರಹಿಸಿದರು.
ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್
ಸೇವ್ ವೈಟ್ ಫೀಲ್ಡ್ ಪ್ರತಿಭಟನೆ ಸೋಮವಾರ ಬೆಳಗ್ಗೆ ಟಡ್ವಿಟ್ಟರ್ ನಲ್ಲಿ ಟ್ರೆಂಟಿಂಗ್ ಆಗಿತ್ತು. ನಾಗರಿಕರು ತಮ್ಮ ಬೆಂಬಲ ಕೋರಿ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದರು.
ಘೋಷಣೆಗಳು ನಿರಂತರ
ಕಪ್ಪು ಟೀ ಶರ್ಟ್ ಅದರ ಮೇಲೆ ವೈಟ್ ಫೀಲ್ಡ್ ಎಂಬ ಸ್ಲೊಗನ್ ಬರೆದುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡವರ ಉತ್ಸಾಹ ಮೆಚ್ಚುವಂಥದ್ದೆ. ಆದರೆ ನಿರೀಕ್ಷೆ ಮಾಡಿದಷ್ಟು ಐಟಿ ಉದ್ಯೋಗಿಗಳು ಬೀದಿಗೆ ಇಳಿಯಲಿಲ್ಲ.
ಶಾಂತಿಯುತ ಬೇಡಿಕೆ
ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಉಳಿದವರಂತೆ ರಸ್ತೆ ತಡೆ ನಡೆಸಿ ಸಮಸ್ಯೆ ಉಂಟುಮಾಡದರೇ ರಸ್ತೆ ಪಕ್ಕದಲ್ಲಿ ಸಾಲು ಗಟ್ಟಿ ಸಂಚರಿಸಿ ತಮ್ಮ ಬೇಡಿಕೆಗಳ ಭಿತ್ತಿ ಪತ್ರ ಹಿಡಿದು ನಡೆದರು.
ಇನ್ನಾದರೂ ರಸ್ತೆ ಬದಲಾದೀತೆ?
ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಈಗಾಗಲೇ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಖುದ್ದು ಬೆಂಗಳೂರು ಅಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ಗುಂಡಿ ಮುಚ್ಚುವ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾರೆ. ಇನ್ನು ಮುಂದಾದರೂ ಬದಲಾವಣೆ ಕಂಡುಬರುವುದೇ? ಕಾದು ನೋಡಬೇಕು.
ನಾನು ಕುಡಿದಿಲ್ಲ!
ನಾನು ಮದ್ಯಸೇವಿಸಿ ವಾಹನ ಚಲಾವಣೆ ಮಾಡುತ್ತಿಲ್ಲ. ಹಿಂದೆ ಬರುತ್ತಿರುವ ನಿಮಗೆ ನಾನು ಅಡ್ಡಾದಿಡ್ಡಿ ವಾಹನ ಚಲಾಯಿಸಿದಂತೆ ಕಂಡರೆ ಅದು ನನ್ನ ತಪ್ಪಲ್ಲ. ನಾನು ರಸ್ತೆ ಗುಂಡಿಗಳನ್ನು ತಪ್ಪಿಸಲು ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೆ!
ಏಳು ಸ್ಥಳಗಳಲ್ಲಿ ಸೇರಿದ್ದರು
ಬೆಳಿಗ್ಗೆ 10 ಗಂಟೆಯಿಂದ ಮಾರತ್ ಹಳ್ಳಿ ಸೇತುವೆ, ಗ್ರಾಫೈಟ್ ಇಂಡಿಯಾ, ಕೆಟಿಪಿಒ, ಫೋರಂ ವ್ಯಾಲ್ಯೂ ಮಾಲ್, ನೆಲ್ಲೂರು ಹಳ್ಳಿ ಮತ್ತು ಐಟಿಪಿಎಲ್ನ ಏಳು ಸ್ಥಳಗಳಲ್ಲಿ ಜನರು ಸೇರಿ 1 ಗಂಟೆಗೆ ಐಟಿಪಿಎಲ್ ಕಡೆ ಪಾದಯಾತ್ರೆ ಕೈಗೊಂಡರು.
ಗುಂಡಿಗಳ ಲೆಕ್ಕ
ಹೆಸರಿಗೆ ಮಾತ್ರ ಇದು ವೈಟ್ ಫೀಲ್ಡ್ , ಇಲ್ಲಿ ಎಲ್ಲ ಸೌಲಭ್ಯಗಳು ಮರೀಚಿಕೆ. ಕೆಲವು ಕಂಪನಿಗಳು ಮತ್ತು ಅಪಾರ್ಟ್ ಮೆಂಟ್ ಗಳು ಸ್ವಯಂ ವ್ಯವಸ್ಥೆ ಮಾಡಿಕೊಂಡಿವೆ. ಬಿಬಿಎಂಪಿಗೆ ಇಲ್ಲಿಯ ಆಡಳಿತ ಸಂಪೂರ್ಣ ಮರೆತು ಹೋಗಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಗುಣ ಆರೋಪಿಸಿದರು.
ಇದು ಭೂಮಿಯೋ, ಮಂಗಳ ಗ್ರಹವೋ?
ವೈಟ್ ಫೀಲ್ಡ್ ಸುತ್ತ ಮುತ್ತಲಿನ ರಸ್ತೆಗಳು ರಸ್ತೆಗಳಂತೆ ಉಳಿದಿಲ್ಲ. ಇದು ಬೆಂಗಳೂರು ರಸ್ತೆಗಳೋ ಅಥವಾ ಮಂಗಳ ಗ್ರಹದ ಮೇಲ್ಮೈಯೋ ಎಂಬುದನ್ನು ಸರ್ಕಾರಗಳೇ ಹೇಳಬೇಕು ಎಂಬ ಭಿತ್ತಿ ಪತ್ರ.
|
ಸರ್ಕಾರ ನಿದ್ದೆಯಿಂದ ಏಳಲಿ
ಪ್ರತಿಭಟನಾಕಾರರು ಅಂತಿಮವಾಗಿ ಐಟಿಪಿಎಲ್ ಬಳಿ ಸಮಾವೇಶಗೊಂಡರು. ಸರ್ಕಾರ ನಿದ್ದೆಯಿಂದ ಏಳಬೇಕು ಎಂದು ಆಗ್ರಹಿಸಿದರು.