ಪಾಕ ಪ್ರಾವೀಣ್ಯವನ್ನು ಒರೆಗೆ ಹಚ್ಚಿದ ಕಲಿನರಿ ಎಕ್ಸ್ಪೋ
ಬೆಂಗಳೂರು, ಫೆಬ್ರವರಿ, 11 : ಬೆಂಗಳೂರು ತನ್ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಅಡುಗೆ ಸಂಬಂಧಿತ ದಿ ಕಲಿನರಿ ಎಕ್ಸ್ಪೊ-2017' ಆಯೋಜಿಸಿತ್ತು. ಭಾರತ ಮತ್ತು ವಿದೇಶಗಳ ಖ್ಯಾತ ಬಾಣಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮದ ವೃತ್ತಿಪರರು ತಮ್ಮ ವಿಶಿಷ್ಟ ತಿನಿಸುಗಳನ್ನು ತಯಾರಿಸಿ, ಪ್ರದರ್ಶಿಸಿ, ಭೇಷ್ ಅನ್ನಿಸಿಕೊಂಡರು.
ಏಮ್ಸ್ ಸ್ಕೂಲ್ ಆಫ್ ಹಾಸ್ಪಿಟಾಲಿಟಿ ಅಂಡ್ ಟೂರಿಸಂ(ಏಮ್ಸ್ ಇನ್ಸ್ಟಿಟ್ಯೂಟ್ಸ್) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ದೇಶದ ಮುಂಚೂಣಿಯ ಹೋಟೆಲ್ ಸ್ಕೂಲ್ ಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ, ಆತಿಥ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ವೃತ್ತಿಪರರು, ಆಹಾರಪ್ರೇಮಿಗಳು, ಫುಡ್ ಬ್ಲಾಗರ್ಗಳು ಮತ್ತು ಆಹಾರ ಸಂಬಂಧಿತ ವಿಮರ್ಶಕರು ಭಾಗವಹಿಸಿದ್ದರು. [ಬೆಂಗಳೂರಿನಲ್ಲಿ ಬೊಂಬಾಟ್ ಬಂಗಾರಪೇಟೆ ಪಾನಿಪುರಿ ಟೇಸ್ಟ್ ಮಾಡಿ]
ವಸತಿ ನಿರ್ವಹಣೆ, ಆಹಾರ ಮತ್ತು ಪಾನೀಯ ನಿರ್ವಹಣೆ, ಆಹಾರ ಕಲೆಗಳಲ್ಲಿ ಆಧುನಿಕ ನಳಮಹಾರಾಜರು ತಮ್ಮ ಕೌಶಲ್ಯ ಪ್ರದರ್ಶಿಸಿದರು. ನೆರೆದವರ ಜಿಹ್ವಾ ಚಾಪಲ್ಯವನ್ನು ತಣಿಸಿದರು.
ಮಾಸ್ಟರ್ ಶೆಫ್ ಖ್ಯಾತಿಯ ಬಾಣಸಿಗ ಇತಿಹಾದ್ ಏರ್ವೇಸ್ನ ಶೆಫ್ ಸಂಜಯ್ ಠಾಕೂರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೌರವ ಅತಿಥಿಯಾಗಿ ಲಿ ಮೆರಿಡಿಯನ್ನ ಎಕ್ಸಿಕ್ಯೂಟಿವ್ ಶೆಫ್ ವಿಜಯ್ ಭಾಸ್ಕರ್ ಮತ್ತು ಹೊವಾರ್ಡ್ ಜಾನ್ಸನ್ನ ಎಕ್ಸಿಕ್ಯೂಟಿವ್ ಶೆಫ್ ದೇವ್ ಬೋಸ್ ಭಾಗವಹಿಸಿದ್ದರು. [ವಿಶೇಷ ಲೇಖನ: ಬಾಯಲ್ಲಿ ನೀರೂರಿಸುವ ಭರ್ಜರಿ ಖಾದ್ಯ 'ಈಸುಳ್ಳಿ'!]
ಕಾರ್ಯಕ್ರಮವನ್ನು ಏಮ್ಸ್ ಇನ್ಸ್ಟಿಟ್ಯೂಟ್ನ ರಿಜಿಸ್ಟ್ರಾರ್ ಡಾ.ಶೆರಿ ಕುರಿಯನ್ ಮತ್ತು ಆತಿಥ್ಯ ಹಾಗೂ ಪ್ರವಾಸೋದ್ಯಮ ವಿಭಾಗದ ನಿರ್ದೇಶಕ ಪ್ರೊ.ಅಚಿಂತ್ಯ ಡೇ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಡುಗೆ ಕ್ವಿಜ್ ಸ್ಪರ್ಧೆ ಮತ್ತು ಅಡುಗೆ ಸ್ಪರ್ಧೆ ಆಯೋಜಿಸಲಾಗಿತ್ತು. ಅಡುಗೆ ಸ್ಪರ್ಧೆಗೆ ಬಾಣಸಿಗರಾದ ಕಾಶಿ ವಿಶ್ವನಾಥ್, ಆಸಿಶ್ ಸನ್ಯಾಲ್, ಸಂಜಯ್ ಠಾಕೂರ್ ಮತ್ತು ನಬೊಜಿತ್ ಘೋಷ್ ತೀರ್ಪುಗಾರರಾಗಿದ್ದರು.
ಶೆಫ್ ಸಂಜಯ್ ಠಾಕೂರ್, ಮಾಲಿಕ್ಯುಲರ್ ಗ್ಯಾಸ್ಟ್ರೊನಮಿಯ ಕೌಶಲ್ಯಗಳನ್ನು ಪ್ರದರ್ಶಿಸಿದರು. ಅವರು ಗ್ಯಾಸ್ಟ್ರೊನಮಿಕ್ ರೀತಿಯಲ್ಲಿ ಎಗ್ ಬುರ್ಜಿ ಸಿದ್ಧಪಡಿಸಿದರು ಮತ್ತು ದಾಳಿಂಬೆಯಿಂದ ಸಿದ್ಧಪಡಿಸುವ ಮದ್ಯಪಾನ ಮತ್ತು ಹುಣಸೆಯ ರಸದ ವಿಸ್ಕಿಯನ್ನು ಸಿದ್ಧಪಡಿಸುವ ವಿಧಾನ ತೋರಿಸಿಕೊಟ್ಟರು.