ಬೆಂಗಳೂರಿನ ಆಸ್ಪತ್ರೆಯಲ್ಲಿ ಪಾಕ್ ಪುಟಾಣಿಗೆ ಮರುಜನ್ಮ
ಅನ್ಯದೇಶದ ಪುಟಾಣಿಗಳು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬರುವುದರಲ್ಲಿ ವಿಶೇಷವೇನೂ ಇಲ್ಲ. ಹಲವಾರು ಮಕ್ಕಳಿಗೆ ಇಲ್ಲಿನ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆತಿದೆ. ಆದರೆ, ಈ ಕಥೆ ವಿಶಿಷ್ಟದಲ್ಲಿ ವಿಶಿಷ್ಟವಾದುದು.
ಬೆಂಗಳೂರು, ಡಿಸೆಂಬರ್ 16 : ಈ ಹೃದಯತಟ್ಟುವ ಸ್ಟೋರಿ ಓದುತ್ತಿದ್ದರೆ 'ಅವಳ ಹೆಜ್ಜೆ' ಚಿತ್ರದ 'ದೇವರ ಆಟ ಬಲ್ಲವರಾರು, ಆತನ ಎದಿರು ನಿಲ್ಲುವರಾರು...' ಹಾಡು ಮನಃಪಟಲದಲ್ಲಿ ಹಾದು ಹೋದರೆ ಅಚ್ಚರಿಯಿಲ್ಲ. ಎಲ್ಲಿಯ ಪಾಕಿಸ್ತಾನ, ಎಲ್ಲಿಯ ಬೆಂಗಳೂರು? ಮಾನವೀಯತೆಗೆ ದೇಶ, ಭಾಷೆ, ಕಡೆಗೆ ವಯಸ್ಸಿನ ಹಂಗೂ ಇಲ್ಲ!
ಅನ್ಯದೇಶದ ಪುಟಾಣಿಗಳು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಬರುವುದರಲ್ಲಿ ವಿಶೇಷವೇನೂ ಇಲ್ಲ. ಹಲವಾರು ಮಕ್ಕಳಿಗೆ ಇಲ್ಲಿನ ನುರಿತ ತಜ್ಞ ವೈದ್ಯರಿಂದ ಚಿಕಿತ್ಸೆ ದೊರೆತಿದೆ. ಮರುಜೀವ ಪಡೆದ ಸಾವಿರಾರು ರೋಗಿಗಳು ತಮ್ಮ ದೇಶಕ್ಕೆ ಮರಳಿದ್ದಾರೆ. ಆದರೆ, ಈ ಕಥೆ ವಿಶಿಷ್ಟದಲ್ಲಿ ವಿಶಿಷ್ಟವಾದುದು.
ಬೋನ್ ಮ್ಯಾರೊ ರೋಗದಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಪುಟಾಣಿಗೆ ಸ್ಟೆಮ್ ಸೆಲ್ಸ್ ಗಳನ್ನು ನೀಡಿದ್ದು ಮತ್ತಾರೂ ಅಲ್ಲ, ಝೀನಿಯಾಳ ತಮ್ಮ, ಎಂಟು ತಿಂಗಳ ಪುಟ್ಟಪುಟಾಣಿ ಕಂದಮ್ಮ ರಯನ್. ಈ ಜಗತ್ತು ಏನೆಂದು ಅರಿಯದ ಎಂಟು ತಿಂಗಳ ಹಸುಳೆ ತನ್ನ ಅಕ್ಕನಿಗೆ ಜೀವದಾನ ಮಾಡಿದ್ದಾನೆ. ಇವರಿಬ್ಬರೂ ಪಾಕಿಸ್ತಾನದವರು.
Hemophagocytic Lymphohistiocytosis(HLH) ಎಂಬ ಜೀವಕ್ಕೆ ಮಾರಕವಾದ ರೋಗದಿಂದ ಬಳಲುತ್ತಿದ್ದ ತನ್ನ ಅಕ್ಕನಿಗೆ ಜೀವದಾನ ಮಾಡುವ ಮೂಲಕ ಭಾರತದಲ್ಲಿ ಬೋನ್ ಮ್ಯಾರೊ ದಾನ ಮಾಡಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಝೀನಿಯಾಳಿಗೆ ಇಂಥ ರೋಗವಿದೆ ಎಂದು ಅರಿವಿಗೆ ಬಂದಿದ್ದು ಝೀನಿಯಾ 11 ತಿಂಗಳ ಕೂಸಿದ್ದಾಗ.
ಬೋನ್ ಮ್ಯಾರೋ ದಾನಿಯ ಹುಡುಕಾಟದಲ್ಲಿದ್ದ ಪಾಲಕರಿಗೆ ಆಕೆಯ ತಮ್ಮನೇ ಅತ್ಯುತ್ತಮ ದಾನಿ ಎಂದು ತಿಳಿದುಬಂದಿದೆ. ಆತ ಕೇವಲ 8 ತಿಂಗಳ ಕೂಸು ಇದ್ದಿದ್ದರಿಂದ ವೈದ್ಯರಿಗೂ ಇದು ಭಾರೀ ಸವಾಲಿನದಾಗಿತ್ತು. ಆದರೆ, ಕೆಲವು ವಾರಗಳ ಚಿಕಿತ್ಸೆ ಫಲಕಾರಿಯಾಗಿದೆ ಎಂದು ನಾರಾಯಣ ಹೆಲ್ತ್ ಸಿಟಿಯ ವೈದ್ಯ ಡಾ. ಸುನೀಲ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
"ಭಾರತಕ್ಕೆ ಬಂದಿಳಿದಾಗ ನನಗೆ ಆತಂಕವಿತ್ತು. ಆದರೆ, ಇಲ್ಲಿಯ ಜನರು ಎಷ್ಟು ಒಳ್ಳೆಯವರು ಮತ್ತು ಹೃದಯವಂತರು ಎಂಬುದು ಬೇಗನೆ ಅರಿವಾಯಿತು. ಇಲ್ಲಿ ಬಂದಾಗಿನಿಂದ ಇಲ್ಲಿಯವರೆಗೆ ಎಲ್ಲ ಜನರೂ ನಮ್ಮನ್ನು ಅತ್ಯಾದರದಿಂದ ನೋಡಿಕೊಂಡಿದ್ದಾರೆ. ನಾನು ನನ್ನ ದೇಶದಲ್ಲಿಯೇ ಇರುವಂತೆ ಪ್ರೀತಿ ನೀಡಿದ್ದಾರೆ. ನನ್ನ ಮಗಳು ಸಂಪೂರ್ಣ ಗುಣವಾಗಿದ್ದು ತುಂಬಾ ಖುಷಿಯಾಗಿದೆ" ಎಂದು ಝೀನಿಯಾಳ ತಂದೆ ಝಿಯಾ ಉಲ್ಲಾ ಭಾರತೀಯರನ್ನು ಕೊಂಡಾಡಿದ್ದಾರೆ.
ಪಾಕಿಸ್ತಾನಕ್ಕೆ ಮರಳಿದ ಮೇಲೆ ಈ ರೋಗ ಮತ್ತು ಅದಕ್ಕೆ ಇರುವ ಚಿಕಿತ್ಸೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ವೆಬ್ ಸೈಟ್ ತೆರೆಯುವ ಉದ್ದೇಶವನ್ನು ಝೀನಿಯಾಳ ಪಾಲಕರು ಹೊಂದಿದ್ದಾರೆ.