ಬೆಂಗಳೂರು ಸರ್ಕಾರಿ ಕನ್ನಡ ಶಾಲೆಗೆ 'ವಿಲನ್' ಆದ ಚುನಾವಣೆ
ಬೆಂಗಳೂರು, ಏಪ್ರಿಲ್ 19 : ಹಸಿರು ಮರಗಳು, ಹಕ್ಕಿಗಳ ಚಿತ್ರಗಳಿಂದ ನಳನಳಿಸುತ್ತಿದ್ದ, ಮಕ್ಕಳನ್ನು ಆಕರ್ಷಿಸುತ್ತಿದ್ದ ಬೆಂಗಳೂರಿನ ಸರಕಾರಿ ಶಾಲೆಯ ಗೋಡೆಗಳು ಲೋಕಸಭೆ ಚುನಾವಣೆಯಿಂದಾಗಿ ಕಳಾಹೀನವಾದ ಘಟನೆ ನಡೆದಿದೆ.
ಪರಿಸರ ಪ್ರಜ್ಞೆ ಬೆಳೆಸಿ, ಸರ್ಕಾರಿ ಶಾಲಾ ಆವರಣದ ಅಂದ ಹೆಚ್ಚಿಸುವ ಪ್ರಯತ್ನ ನಡೆದಿತ್ತು. ಶಾಲೆಯ ಗೋಡೆಗಳ ತುಂಬ ಅಂದವಾದ ಚಿತ್ರಗಳನ್ನು ಬಿಡಿಸಿ ಮಕ್ಕಳು ಹಿಗ್ಗುವಂತೆ ಮಾಡಲಾಗಿತ್ತು. ಆದರೆ, ಲೋಕಸಭೆ ಚುನಾವಣೆಯೇ ಶಾಲೆಗೆ ವಿಲನ್ ಆಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಲೋಕಸಭಾ ಚುನಾವಣೆಯ ಮತದಾನಕ್ಕಾಗಿ ಬೆಂಗಳೂರಿನ ವಿಕ್ಟೋರಿಯಾ ಲೇಔಟ್ ನಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಮತಗಟ್ಟೆಯಾಗಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಗೋಡೆ ಮತ್ತು ಆವರಣದ ಕಾಂಪೌಂಡ್ಗೆ ಸುಣ್ಣ ಬಳಿಯಲಾಗಿದೆ.
ಬೆಂಗಳೂರಲ್ಲಿ ಮತದಾನ ಮತ್ತೆ ಅಧಃಪತನ: ಇದಾ ನಿಜವಾದ ಕಾರಣ?
ನಗರ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳು ಅವಸಾನಗೊಳ್ಳುತ್ತಿರುವ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಶಾಲೆ ಮಕ್ಕಳನ್ನು ಆಕರ್ಷಿಸುತ್ತಿತ್ತು. ಅಂದವಾದ ಚಿತ್ರಗಳನ್ನು ನೋಡುತ್ತಲೇ ಆನಂದದಿಂದ ಪಾಠ ಕಲಿಯಲು ಶಾಲೆಗೆ ಬರುತ್ತಿದ್ದರು. ಪರಿಸರದ ಚಿತ್ರಗಳು ಈಗ ಸುಣ್ಣ ಬಳಿಸಿಕೊಂಡು ವಿರೂಪಗೊಂಡಿವೆ.
ಮತಗಟ್ಟೆಯ ಅವಾಂತರಗಳು: ಪೋಲಿಂಗ್ ಆಫೀಸರ್ ಬಿಚ್ಚಿಟ್ಟ ಕಹಿಸತ್ಯ!
ಕಾನ್ವೆಂಟ್ ಶಿಕ್ಷಣದ ಭರಾಟೆಯ ನಡುವೆಯೂ ಅಚ್ಚುಕಟ್ಟುತನ ಕಾಯ್ದುಕೊಂಡು ವರ್ಣಮಯ ಚಿತ್ರಗಳ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಕನ್ನಡ ಶಾಲೆ ಈಗ ಕಳಾಹೀನವಾಗಿದೆ. ಹೊಸ ಶೈಕ್ಷಣಿಕ ವರ್ಷಕ್ಕೆ ಸಜ್ಜಾಗ ಬೇಕಿರುವ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ಈಗ ಮರಳಿ ಶಾಲೆಗೆ ಆಗಮಿಸುವ ಹೊತ್ತಿನಲ್ಲಿ ಶಾಲೆ ವಾತಾವರಣದಿಂದ ಕಳಾಹೀನವಾಗಿರುವುದು ನಿರಾಸೆ ಮೂಡಿಸುವುದು ಖಚಿತವಾಗಿದೆ.
ಎಲ್ಲಿದೆ ಕನ್ನಡ ಶಾಲೆ
ಬೆಂಗಳೂರಿನ ವಿಕ್ಟೋರಿಯಾ ಲೇಔಟ್ನ ಯಲಗೊಂಡಪಾಳ್ಯದ 15ನೇ ಕ್ರಾಸ್ನಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇದೆ. ಏಪ್ರಿಲ್ 18ರಂದು ಲೋಕಸಭಾ ಚುನಾವಣೆ ನಡೆದಾಗ ಈ ಶಾಲೆಯನ್ನು ಮತಗಟ್ಟೆ ಮಾಡಲಾಗಿತ್ತು.
ಎನ್ಜಿಓ ಬಣ್ಣ ಬಳಿಸಿತ್ತು
ಬೆಂಗಳೂರು ನಗರದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಎನ್ ಜಿ ಓ ಸಂಸ್ಥೆಯೊಂದು ಶಾಲೆಗೆ ಆಕರ್ಷಕ ಬಣ್ಣ ಬಳಿಸಿತ್ತು ಹಾಗೂ ಮುದ ನೀಡುವ ಪರಿಸರದ ಚಿತ್ರಗಳನ್ನು ಕಲಾವಿದರಿಂದ ಬರೆಸಿತ್ತು. ಈಗ ಚುನಾವಣೆ ನಿಮಿತ್ತ ಅಂದದ ಕೆಲಸಕ್ಕೆ ಸುಣ್ಣ ಬಳಿಯಲಾಗಿದೆ.
ಪೋಷರ ಆಕ್ರೋಶ
ಕನ್ನಡ ಶಾಲೆಯ ಗೋಡೆಗಳ ಮೇಲೆ ಚಿಟ್ಟೆ, ಪಕ್ಷಿ, ಬಲೂನು, ಹೂವು ಗಿಡ, ಬೆಟ್ಟ, ನೀರು ಮುಂತಾದ ಚಿತ್ರಗಳಿದ್ದವು. ಚುನಾವಣೆಯಲ್ಲಿ ಮರೆ ಮಾಚುವಂತಹ ಯಾವ ಚಿತ್ರಗಳು ಇರಲಿಲ್ಲ. ಆದರೂ ಚುನಾವಣಾಧಿಕಾರಿಗಳು ಕೈಗೊಂಡ ನಿರ್ಧಾರಕ್ಕೆ ಪೋಷರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ತೀರ್ಮಾನವನ್ನು ಕೈಗೊಳ್ಳಬಾರದು
ಮುಂದಿನ ದಿನಗಳಲ್ಲಾದರು ಚುನಾವಣಾಧಿಕಾರಿಗಳು ಮತಗಟ್ಟೆಗಳನ್ನು ವಿರೂಪಗೊಳಿಸುವ ಕ್ರಿಯೆಗೆ ಮುಂದಾಗದಿರಲಿ ಎಂದು ಪೋಷಕರು ಅಭಿಪ್ರಾಯ ಪಟ್ಟಿದ್ದಾರೆ.