ಬೆಂಗಳೂರು ಸಚಿವರ ಪಟ್ಟಿಗೆ ಮೂರು ಹೊಸ ಸೇರ್ಪಡೆ
ಬೆಂಗಳೂರು, ಫೆಬ್ರವರಿ 06: ಉಪಚುನಾವಣೆಯಲ್ಲಿ ಗೆದ್ದು ಬಂದಿದ್ದ ಹನ್ನೆರಡು ಬಿಜೆಪಿ ಶಾಸಕರಲ್ಲಿ ಹತ್ತು ಮಂದಿ ನೂತನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಹೊಸ ಸಚಿವರ ಪ್ರಮಾಣ ವಚನದ ನಂತರ ಬೆಂಗಳೂರು ನಗರಕ್ಕೆ ಮತ್ತಷ್ಟು ಸಚಿವರ ಸೇರ್ಪಡೆ ಆದಂತಾಗಿದೆ. ಈಗಾಗಲೇ ನಾಲ್ಕು ಸಚಿವ ಸ್ಥಾನ ಪಡೆದುಕೊಂಡಿದ್ದ ಬೆಂಗಳೂರಿಗೆ ಇನ್ನೂ ಮೂವರು ಸಚಿವರು ದೊರೆತಂದಾಗಿದೆ.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಪದ್ಮನಾಭನಗರ ಶಾಸಕ ಆರ್.ಅಶೋಕ್, ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ಮಲ್ಲೇಶ್ವರಂ ನ ಅಶ್ವತ್ಥನಾರಾಯಣ್, ಗೋವಿಂದರಾಜನಗರ ಶಾಸಕ ವಿ.ಸೋಮಣ್ಣ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು.
ಇಂದು ನಡೆದ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು, ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟ್ ಕೆ.ಗೋಪಾಲಯ್ಯ ಅವರುಗಳಿಗೆ ಸಚಿವ ಸ್ಥಾನ ದೊರೆತಿದೆ. ಆ ಮೂಲಕ ಬೆಂಗಳೂರಿಗೆ ಏಳು ಸಚಿವ ಸ್ಥಾನ ದೊರೆತಂದಾಗಿದೆ.
ಆಕಾಂಕ್ಷಿ ಆಗಿರುವ ಅರವಿಂದ ಲಿಂಬಾವಳಿ, ಉಪಚುನಾವಣೆಗೆ ಕಾಯುತ್ತಿರುವ ಮುನಿರತ್ನ ಗೆದ್ದು ಅವರಿಗೂ ಸಚಿವ ಸ್ಥಾನ ಕೊಟ್ಟರೆ ಬೆಂಗಳೂರಿಗೆ ಒಟ್ಟು ಒಂಬತ್ತು ಸಚಿವ ಸ್ಥಾನ ನೀಡಿದಂತಾಗುತ್ತದೆ.