ಡಿಜೆ ಹಳ್ಳಿ ಕೋಮು ಅಟ್ಟಹಾಸಕ್ಕೆ 'ಜಾತಿಯ ತುಪ್ಪ' ಸುರಿದ ಬಿಜೆಪಿ, ಸಿದ್ದರಾಮಯ್ಯ
ಬೆಂಗಳೂರು, ಆ 13: ನಗರದ ಪೂರ್ವ ಭಾಗದಲ್ಲಿ ಎರಡು ದಿನಗಳ ಹಿಂದೆ ನಡೆದ ಹಿಂಸಾಚಾರ ಮತ್ತೆ ಪುನಾವರ್ತನೆಗೊಳ್ಳದಂತೆ ನೋಡಿಕೊಳ್ಳಲು, ಪಕ್ಷಬೇಧ ಮೆರೆತು, ಪರಿಹಾರ ಕಂಡುಕೊಳ್ಳುವ ಬದಲು, ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್, ಡಿಜೆ ಹಳ್ಳಿ ಬೆಂಕಿಯಲ್ಲಿ ಜಾತಿಯ ತುಪ್ಪವನ್ನು ಸುರಿಯುತ್ತಿವೆ.
ಬೆಂಗಳೂರು ನಗರ ಪೊಲೀಸ್ ಪಡೆಯ ಆಯಕಟ್ಟಿನ ಡಿಸಿಪಿಯನ್ನೇ ಪುಂಡರು ಠಾಣೆಯೊಳಗೆ ನುಗ್ಗಿ ಹೊಡೆಯಲು ಮುಂದಾಗಿದ್ದಾರೆಂದರೆ, ನಗರದ ಕಾನೂನು ಮತ್ತು ಸುವ್ಯವಸ್ಥೆಗೆ ಇದಕ್ಕಿಂತ ದೊಡ್ಡ ಹಿನ್ನಡೆ/ಅವಮಾನ ಇನ್ನೊಂದಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
"ನಾವು ದೀಪ ಹಚ್ಚುವವರ ಪರವೇ ಹೊರತೂ, ಬೆಂಕಿ ಹಚ್ಚುವವರ ಪರವಲ್ಲ"
ರಾಜಕಾರಣವನ್ನು ಬದಿಗೊತ್ತಿ, ಇಂತಹ ಸಮಾಜ ವಿದ್ರೋಹಿಗಳು, ಮುಂದೆಂದೂ ಈ ರೀತಿಯ ಕೆಲಸಕ್ಕೆ ಮುಂದಾಗಬಾರದು, ಆ ರೀತಿಯ ಪಾಠ ಕಲಿಸುವ ಕ್ರಮಕ್ಕೆ ಎಲ್ಲಾ ಪಕ್ಷಗಳು, ಒಗ್ಗಟ್ಟಾಗಿ ಸರಕಾರದ ಬೆನ್ನು ನಿಲ್ಲುವ ತುರ್ತು ಅವಶ್ಯಕತೆಯಿದ್ದ ಈ ಸಮಯದಲ್ಲಿ, ಪ್ರಮುಖ ಪಕ್ಷಗಳು, ಎಂದಿನಂತೆ ಕಿತ್ತಾಡಿಕೊಂಡು ಕೂತಿವೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿದ ಟ್ವೀಟ್, ನೆಟ್ಟಿಗರಿಂದ ಸಾಕಷ್ಟು ವಿರೋಧ ಕಟ್ಟುಕೊಂಡ ಬೆನ್ನಲ್ಲೇ, ಬಿಜೆಪಿ ಮುಖಂಡರು, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯನವರ ವಿರುದ್ದ ತಿರುಗಿಬಿದ್ದಿದ್ದಾರೆ. ಅದು, ಊಹಿಸಿದಂತೆ, ಜಾತಿ ರಾಜಕಾರಣದ ಕಡೆಗೆ ತಿರುಗಿದೆ. ಬಿಜೆಪಿ ಮುಖಂಡರು ಮತ್ತು ಸಿದ್ದರಾಮಯ್ಯ ನಡುವಿನ ಕೆಲವೊಂದು ಟ್ವೀಟ್ ಸ್ಯಾಂಪಲ್ ಹೀಗಿದೆ:
ಗಲಭೆ ಹಿಂದೆ ಎಸ್ಡಿಪಿಐ ಪಾತ್ರ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ
"ಕಳೆದ ರಾತ್ರಿ ಕಾವಲಭೈರಸಂದ್ರದಲ್ಲಿ ನಡೆದ ಗಲಭೆ ಮತ್ತು ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳೆರಡೂ ಖಂಡನೀಯ. ಹಿಂದೂ-ಮುಸ್ಲಿಂ ಎರಡು ಸಮುದಾಯದವರು ಸಂಯಮದಿಂದ ವರ್ತಿಸಿ ಶಾಂತಿ ಕಾಪಾಡಬೇಕೆಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ" ಎಂದು ಮೊದಲು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಬಹುಮಟ್ಟಿಗೆ ಆಕ್ರೋಶಕ್ಕೆ ಕಾರಣವಾಯಿತು.
ದುರ್ಯೋಧನನು ಅಧರ್ಮದ ದಾರಿ ಹಿಡಿದಿದ್ದರೂ ತಿದ್ದದ ಧೃತರಾಷ್ಟ್ರ
"ಕಾಂಗ್ರೆಸ್ಸಿಗರೇ.... ಎಲ್ಲಿಯವರೆಗೆ ನಿಮ್ಮ ಓಲೈಕೆ? ದುರ್ಯೋಧನನು ಅಧರ್ಮದ ದಾರಿ ಹಿಡಿದಿದ್ದರೂ ತಿದ್ದದ ಕುರುಡ ಧೃತರಾಷ್ಟ್ರ ತನ್ನ ವಂಶವನ್ನೇ ಕಳೆದುಕೊಂಡ. ಹೀಗೆ ಕಣ್ಣಿದ್ದು ಕುರುಡರಂತೆ ಮತಾಂಧರ ತಪ್ಪನ್ನು ಸಮರ್ಥಿಸಿಕೊಳ್ಳುತ್ತಿದ್ದರೆ ಕಾಂಗ್ರೆಸ್ ಸರ್ವನಾಶ ಖಂಡಿತ. ಮೊನ್ನೆ ನಡೆದ ಘಟನೆಗಳ ಹಿನ್ನೆಲೆಯಲ್ಲಿ ತುಷ್ಟೀಕರಣ ಹಾಗೂ ಸಾಮಾಜಿಕ ನ್ಯಾಯ, ತುಷ್ಟೀಕರಣ ಮತ್ತು ಶಾಂತಿ ವ್ಯವಸ್ಥೆಗಳ ನಡುವೆ 'ತುಷ್ಟೀಕರಣವೆ' ತನ್ನ ಮೊದಲ ಆದ್ಯತೆ ಎಂದು ಕಾಂಗ್ರೆಸ್ ಸಾಬೀತುಪಡಿಸಿದೆ"ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದರು.
ಬಿ.ಎಲ್.ಸಂತೋಷ್ ಟ್ವೀಟ್
"ಬಂಧಿತ ನವೀನ್ ಸಾಮಾಜಿಕ ತಾಣದಲ್ಲಿ ಮಾಡಿದ ಪೋಸ್ಟ್ ಮತ್ತು ಪೊಲೀಸರು ವಿಳಂಬವಾಗಿ ಕ್ರಮ ತೆಗೆದುಕೊಳ್ಳಲು ಮುಂದಾದರು ಎನ್ನುವ ಅಭಿಪ್ರಾಯ ನೀಡಲು ಕಾಂಗ್ರೆಸ್ಸಿಗೆ ಹದಿನಾಲ್ಕು ಗಂಟೆ ಬೇಕಾಯಿತು. ಅಲ್ಪಸಂಖ್ಯಾತ ಗುಂಪುಗಳ ಗಲಭೆಯನ್ನು ಖಂಡಿಸಲು ಕಾಂಗ್ರೆಸ್ ಏಕೆ ಹಿಂಜರಿಯುತ್ತಿದೆ. ಕೊನೆಯ ಪಕ್ಷ ನಿಮ್ಮ ಪಕ್ಷದ ದಲಿತ ಶಾಸಕನ ಮನೆಯ ಮೇಲೆ ದಾಳಿ ನಡೆದಿದೆ ಎನ್ನುವುದು ಗೊತ್ತಿರಲಿ"ಎಂದು ಬಿ.ಎಲ್.ಸಂತೋಷ್ ಟ್ವೀಟ್ ಮಾಡಿದ್ದರು.
ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡ್ಬೇಡಿ
"ದಿವಂಗತ ಬಂಗಾರು ಲಕ್ಷ್ಮಣ್ ಅವರನ್ನು ನಿಮ್ಮ ಪಕ್ಷದ ಏಕೈಕ ಭ್ರಷ್ಟನೆಂಬ ರೀತಿಯಲ್ಲಿ ಬಲಿಗೊಟ್ಟಿದ್ದು ಯಾರು @blsanthosh ಅವರೇ? ದಲಿತರು ಜಾಗೃತರಾಗಿದ್ದಾರೆ, ಹಿತೈಷಿಗಳು ಯಾರು? ಹಿತಶತ್ರುಗಳು ಯಾರು ಎನ್ನುವುದು ಅವರಿಗೆ ಗೊತ್ತಿದೆ. ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡ್ಬೇಡಿ" ಎಂದು ಸಿದ್ದರಾಮಯ್ಯ , ಸಂತೋಷ್ ಟ್ವೀಟಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ
"@nalinkateel ಅವರೇ, ನೀವು ದಲಿತರ ಪರವೋ? ಹಿಂದೂಗಳ ಪರವೋ? ನೀವೊಬ್ಬ ಹಿಂದುವಾದರೆ, ಅಖಂಡ ಶ್ರೀನಿವಾಸಮೂರ್ತಿ ಯಾಕೆ ಹಿಂದು ಅಲ್ಲ? ಅವರು ಯಾಕೆ ಹಿಂದು ಆಗದೆ ಕೇವಲ ದಲಿತ ಆಗಿಬಿಟ್ಟರು?
ಹಿಂದುತ್ವದ ಸರಿಯಾದ ವ್ಯಾಖ್ಯಾನ ಏನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ?"ಎನ್ನುವ ಪ್ರಶ್ನೆಯನ್ನು ಸಿದ್ದರಾಮಯ್ಯ ಎತ್ತಿದ್ದಾರೆ.ಅಹಿಂದ ಕಟ್ಟಿ ದಲಿತರನ್ನು ಮಾತ್ರ ಸೇರಿಸಿಕೊಂಡವರು ನೀವು
"ನಮಗೆ ಎಲ್ಲರು ಹಿಂದೂಗಳೇ, ಒಡೆದಾಳುವ ನೀತಿ ನಿಮ್ಮದು! ಅಹಿಂದ ಕಟ್ಟಿ ದಲಿತರನ್ನು ಮಾತ್ರ ಸೇರಿಸಿಕೊಂಡವರು ನೀವು. ದೇಶದ ರಾಜಕೀಯ ಇತಿಹಾಸದಲ್ಲಿ ದಲಿತರನ್ನು ಬಳಸಿಕೊಂಡು ರಾಜಕೀಯ ಮಾಡಿದ್ದು ನೀವು ಮತ್ತು ನಿಮ್ಮ ಪಕ್ಷದವರು. ಹಿಂದೂ ಧರ್ಮ 'ವಸುಧೈವ ಕುಟುಂಬಕಂ' ಎಂಬುದನ್ನು ಕಲಿಸುತ್ತದೆಯೇ ಹೊರತು ನಿಮ್ಮಂತೆ ದ್ವೇಷದ ಬೆಂಕಿ ಹಚ್ಚುವುದನ್ನಲ್ಲ"ಎಂದು ನಳಿನ್ ಕಟೀಲ್ ಇದಕ್ಕೆ ಉತ್ತರ ನೀಡಿದ್ದಾರೆ.