ಪ್ರತಿಭಟನೆ ವೇಳೆ ರಾಷ್ಟ್ರಗೀತೆ: ದೇಶದ ಮನಗೆದ್ದ ಬೆಂಗಳೂರು ಪೊಲೀಸ್ ಅಧಿಕಾರಿ
Recommended Video
ಬೆಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದ ಅನೇಕ ಕಡೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಶಾಂತಿಯುತ ಪ್ರತಿಭಟನೆಗೆ ಮುಂದಾಗುತ್ತಿರುವವರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಸಂಘರ್ಷ ಕೂಡ ನಡೆದಿದೆ. ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿರುವುದರ ಮಧ್ಯೆಯೇ ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು ಎಲ್ಲರ ಮನಗೆದ್ದಿದ್ದಾರೆ.
ಪ್ರತಿಭಟನಾಕಾರರನ್ನು ಚೆದುರಿಸಲು ಎಲ್ಲಾ ಕಡೆ ಪೊಲೀಸರು ಲಾಠಿ ಚಾರ್ಜ್, ಬಂಧನದ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋರ್ ರಾಷ್ಟ್ರಗೀತೆ ಹಾಡುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಕೈಬಿಟ್ಟು ಅಲ್ಲಿಂದ ತೆರಳುವಂತೆ ಮಾಡಿದ್ದಾರೆ.
ಪೌರತ್ವ ಕಾಯ್ದೆ: ಬಂಧಿತರಿಗೆ ಬಿರಿಯಾನಿ, ಪ್ರತಿಭಟಿಸಿದವರಿಗೆ ಕಡಲೆಪುರಿ
ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುವ ಮತ್ತು ರಾಷ್ಟ್ರಗೀತೆ ಹಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದಕ್ಕೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗಿದೆ.
ಟೌನ್ ಹಾಲ್ ಮುಂಭಾಗ ಪ್ರತಿಭಟನೆ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಗುರುವಾರ ನಗರದ ಪುರಭವನದ ಮುಂದೆ ಪ್ರತಿಭಟನೆ ಆಯೋಜಿಸಲಾಗಿತ್ತು. ನಿಷೇಧಾಜ್ಞೆ ವಿಧಿಸಿದ್ದರೂ ಅದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಅಲ್ಲಿ ಸೇರಿದ್ದರು. ಹಾಗೆ ಬರುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಬಲವಂತವಾಗಿ ದೂರ ಕಳಿಸುತ್ತಿದ್ದರು. ದೊಡ್ಡ ಗುಂಪುಗಳಲ್ಲಿ ಬರುತ್ತಿದ್ದ ಪ್ರತಿಭಟನಾಕಾರರನ್ನು ಚೆದುರಿಸಲು ಪೊಲೀಸರು ಲಾಠಿ ಪ್ರಹಾರದಂತಹ ಕ್ರಮಕ್ಕೆ ಮುಂದಾಗುವುದಕ್ಕೆ ಡಿಸಿಪಿ ಚೇತನ್ ಸಿಂಗ್ ರಾಥೋರ್ ಅವಕಾಶ ನೀಡಲಿಲ್ಲ.
ರಾಷ್ಟ್ರಗೀತೆ ಹಾಡಿ
ಪುರಭವನದ ಮುಂದೆ ನೆರೆದಿದ್ದ ಪ್ರತಿಭಟನಾಕಾರರು ಅಲ್ಲಿಂದ ತೆರಳುವಂತೆ ಡಿಸಿಪಿ ಮನವಿ ಮಾಡಿದರು. ಆದರೆ ಅದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ. ಇಂತಹ ಪ್ರತಿಭಟನೆಗಳನ್ನು ಸಮಾಜ ವಿರೋಧಿ ಶಕ್ತಿಗಳು ತಮ್ಮ ಲಾಭಕ್ಕಾಗಿ ಹೇಗೆ ಬಳಸಿಕೊಳ್ಳುತ್ತವೆ ಎಂದು ವಿವರಿಸಿದ ಚೇತನ್ ಸಿಂಗ್, ತಮ್ಮ ಮೇಲೆ ನಂಬಿಕೆ ಇಡುವುದಾದರೆ ತಮ್ಮೊಂದಿಗೆ ಎಲ್ಲರೂ ರಾಷ್ಟ್ರಗೀತೆ ಹಾಡಿ ಎಂದು ಹೇಳಿದರು.
ಬಿಜೆಪಿಯ ರಹಸ್ಯ ಕಾರ್ಯಸೂಚಿಗೆ ಇಬ್ಬರು ಬಲಿ: ಸಿದ್ದರಾಮಯ್ಯ ಕಿಡಿ
|
ಶಾಂತಿಯುತ ನಿರ್ಗಮನ
ಕೂಡಲೇ ಎಲ್ಲ ಪ್ರತಿಭಟನಾಕಾರರೂ ಎದ್ದು ನಿಂತು ಚೇತನ್ ಸಿಂಗ್ ಅವರೊಂದಿಗೆ ರಾಷ್ಟ್ರಗೀತೆ ಹಾಡಿದರು. ಕೊನೆಯಲ್ಲಿ 'ಜೈ ಹಿಂದ್' ಘೋಷ ಮೊಳಗಿಸಿದರು. ಪ್ರತಿಭಟನಾ ಸ್ಥಳದಿಂದ ಶಾಂತಿಯುತವಾಗಿ ನಿರ್ಗಮಿಸಲು ಒಪ್ಪಿಕೊಂಡರು. ಇದರಿಂದ ಯಾವ ಗಲಾಟೆಯೂ ಇಲ್ಲದೆ ಪ್ರತಿಭಟನೆ ಅಂತ್ಯಕಂಡಿತು.
ಟೌನ್ಹಾಲ್ ಮುಂಭಾಗ ಬಿಗಿ ಭದ್ರತೆ
ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಡಿ. 21ರ ಮಧ್ಯರಾತ್ರಿಯವರೆಗೂ ನಿಷೇಧಾಜ್ಞೆ ಹೇರಲಾಗಿದೆ. ಮಂಗಳೂರಿನಲ್ಲಿ ಡಿ. 22ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಬೆಂಗಳೂರಿನ ಟೌನ್ಹಾಲ್ ಮುಂಭಾಗ ಶುಕ್ರವಾರ ಕೂಡ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ಸ್ಥಳದಲ್ಲಿ ಮೂರು ಕೆಎಸ್ಆರ್ಪಿ ತುಕಡಿಗಳನ್ನು ಮತ್ತು ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.