ಗೆಳತಿಯ ಖಾಸಗಿ ಕ್ಷಣ ಕ್ಲಿಕ್ಕಿಸಿ, ಅನ್ಯರಿಗೆ ಕಳುಹಿಸಿ, ಪೊಲೀಸರಿಗೆ ತಗ್ಲಾಕಿಕೊಂಡ!
ಬೆಂಗಳೂರು, ಆ 15: ನಗರ ಸಿಸಿಬಿ ಘಟಕದ ಸೈಬರ್ ಕ್ರೈಂ ಪೊಲೀಸರು, ಕಮ್ಮನಹಳ್ಳಿ KFC ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ತನ್ನ ಗೆಳತಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಭಾವಚಿತ್ರವನ್ನು ಆಕೆಯ ಸಂಬಂಧಿಗೆ ಕಳುಹಿಸಿ ಬ್ಲಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈತನಿಂದ, ಮೊಬೈಲ್ ಫೋನ್ ಅನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಚಿಕ್ಕಬಾಣಸವಾಡಿಯ, ಕಿರಣ್ ಆಲಿಯಾಸ್ ಸತ್ಯನಾರಾಯಣ (23) ಬಂಧಿತ ಆರೋಪಿಯಾಗಿದ್ದು, ಆತನ ಗೆಳತಿ ನೀಡಿದ ದೂರಿನನ್ವಯ, ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಪ್ರಾರಂಭಿಸಲಾಗಿತ್ತು.
ಅಪರೂಪದ ಪ್ರಾಣಿಯನ್ನು ವಶ ಪಡಿಸಿಕೊಂಡ ಬೆಂ.ಉತ್ತರ ಪೊಲೀಸರು
ಆರೋಪಿ ಮತ್ತು ಆತನ ಗೆಳತಿ ಕಳೆದ ಎರಡು ವರ್ಷಗಳಿಂದ ಬಾಣಸವಾಡಿಯ ಅಂಗಡಿಯೊಂದರಲ್ಲಿ ಒಟ್ಟಾಗಿ ಕೆಲಸ ಮಾಡಿಕೊಂಡಿದ್ದರು. ಕಳೆದ ಎರಡು ತಿಂಗಳ ಹಿಂದೆ ಇಬ್ಬರು ಸಲುಗೆ ಬೆಳೆಸಿಕೊಂಡು ಭೇಟಿ ಮಾಡಿ, ಆ ಸಮಯದಲ್ಲಿ ಇಬ್ಬರು ಒಟ್ಟಾಗಿ ಸಲುಗೆಯಿಂದ ಇರುವ ಖಾಸಗಿ ಕ್ಷಣಗಳನ್ನು ಮೊಬೈಲ್ ಫೋನ್ ಮೂಲಕ ಕ್ಲಿಕ್ಕಿಸಿಕೊಂಡಿದ್ದರು.
ಮುಂದೆ, ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ದೂರವಾಗಿದ್ದರು. ಆದರೆ, ಆರೋಪಿ, ಗೆಳತಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು ಫಲಪ್ರದವಾಗದ ಕಾರಣ ಗೆಳತಿಯ ಸಂಬಂಧಿ ಮಹಿಳೆಯ ಮೊಬೈಲಿಗೆ ಖಾಸಗಿ ಕ್ಷಣಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದ.
ಇದು, ತನ್ನ ಘನತೆಗೆ ಕುಂದುಂಟಾಗುವ ಕೆಲಸ ಮತ್ತು ಬ್ಲಾಕ್ಮೇಲ್ ಎಂದು ಗೆಳತಿ ದೂರು ನೀಡಿದ್ದರು. ಈ ಸಂಬಂಧ, ಆರೋಪಿ ಕಿರಣ್ ನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
"ಸ್ನೇಹಿತರೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನು ಮೊಬೈಲ್ /ವಿದ್ಯುನ್ಮಾನ ಉಪಕರಣಗಳಲ್ಲಿ ಸೆರೆಹಿಡಿದುಕೊಂಡಲ್ಲಿ ಯಾವುದೇ ಸಮಯದಲ್ಲಿ ಅಪರಾಧಕ್ಕೆ ಬಲಿಪಶುವಾಗುವ ಸಂಭವಗಳು ಹೆಚ್ಚಾಗಿರುತ್ತದೆ ಎಂಬ ಅಂಶವನ್ನು ಗಮನಿಸಬೇಕು" ಎಂದು ಪೊಲೀಸರು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.