ವ್ಹೀಲಿಂಗ್ಗೆ ಅಡ್ಡಿಪಡಿಸಿದ ನಾಯಿಯನ್ನು ಕೊಂದ ಬೈಕ್ ಸವಾರರು!
ಬೆಂಗಳೂರು, ಅ. 26: ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಗ್ಯಾಂಗ್ ಬೊಗಳಿದ ನಾಯಿ ಮರಿಗೆ ರಾಡ್ನಿಂದ ಹೊಡೆದು ಕೊಲೆ ಮಾಡಿ ವಿಕೃತ ಮೆರೆದಿದ್ದಾರೆ. ಹೆಚ್ಚು ಅಂಕ ಗಳಿಸಿಲ್ಲ ಎಂದು ತಂದೆ ಬೈದ ಕಾರಣಕ್ಕೆ ರೈಲ್ವೇ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ ಕೂದಳೆಲೆ ಅಂತರದಲ್ಲಿ ಪಾರು. ನೆಲಮಂಗಲದ ಕೆರೆಯಲ್ಲಿ ತಮಿಳುನಾಡು ಮೂಲದ ವ್ಯಕ್ತಿಯ ಮೃತದೇಹ ಪತ್ತೆ. ಅತ್ಯಾಚಾರ ಆರೋಪದಡಿ ಸ್ಯಾಂಡಲ್ ವುಡ್ ನಟನ ಬಂಧನ. ಇದು ಬೆಂಗಳೂರಿನ ಅಪರಾಧ ಸುದ್ದಿಗಳ ಚಿತ್ರಣ.
ವ್ಹೀಲಿಂಗ್ಗೆ ಅಡ್ಡಿ ಮಾಡಿದ ನಾಯಿ ಹತ್ಯೆ:
ವ್ಹೀಲಿಂಗ್ ಮಾಡಿ ಕರ್ಕಶ ಶಬ್ಧ ಮಾಡುತ್ತಿದ್ದ ಪುಂಡರನ್ನು ನೋಡಿ ಬೊಗಳಿದ ನಾಯಿ ಮರಿಯನ್ನೇ ಕಿರಾತಕರು ಹತ್ಯೆ ಮಾಡಿ ವಿಕೃತ ಮೆರೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾದಕ ವಸ್ತು ಸೇವನೆ ಅಮಲಿನಲ್ಲಿ ದೇವಸಂದ್ರದ ವಾರ್ಡ್ನ ಕಾಮಧೇನು ಲೇಔಟ್ ನಲ್ಲಿ ಪುಂಡರ ಗುಂಪೊಂದು ವ್ಹೀಲಿಂಗ್ ಮಾಡುತ್ತಿತ್ತು. ಪುಂಡರ ಗ್ಯಾಂಗ್ ನೋಡಿದ ನಾಯಿ ಮರಿ ಬೊಗಳಿತ್ತು. ಇದರಿಂದ ಕುಪಿತಗೊಂಡ ಪುಂಡರು ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಕಿರಾತಕರ ಈ ಕೃತ್ಯದಿಂದ ನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ನಾಯಿ ಮೇಲೆ ಹಲ್ಲೆ ಮಾಡುವ ಭೀಕರ ದೃಶ್ಯ ವೈರಲ್ ಆಗಿದ್ದು, ಸ್ಥಳೀಯರು ನೀಡಿದ ದೂರಿನ ಮೇರೆಗೆ ವ್ಹೀಲಿಂಗ್ ಮಾಡಿ ನಾಯಿ ಹತ್ಯೆ ಮಾಡಿದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕೂದಲೆಳೆ ಅಂತರದಲ್ಲಿ ಪಾರಾದ ಬಾಲಕ:
ಹೆಚ್ಚಿನ ಅಂಕ ತೆಗೆಯಲಿಲ್ಲ ಎಂದು ತಂದೆ ಬೈದಿದ್ದಕ್ಕೆ ಬಾಲಕನೊಬ್ಬ ಮೆಜೆಸ್ಟಿಕ್ನ ರೈಲು ಅಡಿ ಕೂತು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಆ ಬಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಹೆಚ್ಚಿನ ಅಂಕ ಗಳಿಸಿಲ್ಲ ಎಂದು ತಂದೆ ಬೈದಿದ್ದಕ್ಕೆ ಬಾಲಕ ಮನೆ ಬಿಟ್ಟು ಮೆಜೆಸ್ಟಿಕ್ಗೆ ಬಂದಿದ್ದಾನೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ರೈಲು ಹಳಿಗೆ ತೆರಳಿದ್ದಾನೆ. ಅಲ್ಲಿ ಕೂತು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ತನ್ನ ಸಂಬಂಧಿಗೆ ತಿಳಿಸಿದ್ದಾನೆ. ತಂದೆ ಬೈಯಬಾರದಿತ್ತು ಎಂದು ಹೇಳಿ ವಿಡಿಯೋ ಮಾಡಿದ್ದ. ವಿಡಿಯೋದಲ್ಲಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಹಾಕಿದ್ದ ಟ್ರೇನ್ ಅನೌನ್ಸ್ಮೆಂಟ್ ಶಬ್ಧ ರೆಕಾರ್ಡ್ ಆಗಿತ್ತು. ಅದರ ಮಾಹಿತಿ ಆಧರಿಸಿ ಪೋಷಕರು ಮೆಜೆಸ್ಟಿಕ್ಗೆ ಬಂದು ಬಾಲಕನನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಕೊಲೆ; ನೆಲಮಂಗಲದಲ್ಲಿ ಮೃತದೇಹ:
ನಿನ್ನ ಪತ್ನಿಯ ಹೊಟ್ಟೆಯಲ್ಲಿರುವ ಮಗು ನನ್ನದೇ ಎಂದು ಕೀಟಲೆ ಮಾಡಿದ ವ್ಯಕ್ತಿಯ ತಲೆಗೆ ರಾಡ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಆದರೆ ಕೊಲೆಯಾದ ವ್ಯಕ್ತಿಯ ಮೃತ ದೇಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪ ಪತ್ತೆಯಾಗಿದೆ. ಅ. 21 ರಂದು ನೆಲಮಂಗಲ ಕೆರೆಯಲ್ಲಿ ಪತ್ತೆಯಾಗಿದ್ದ ಮೃತದೇಹದ ಜಾಡು ಹಿಡಿದು ತನಿಖೆ ನಡೆಸಿದ ಸೇಲಂ ಪೊಲೀಸರು ಇಬ್ಬರು ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ರಮೇಶ್ ಕೊಲೆಯಾಗಿದ್ದು, ಶೇಖರ್ ಮತ್ತು ಧನುಶ್ ಬಂಧಿತ ಆರೋಪಿಗಳು. ಮದ್ಯಪಾನ ಮಾಡುವ ವೇಳೆ ನಿನ್ನ ಪತ್ನಿಯ ಹೊಟ್ಟೆಯಲ್ಲಿರುವ ಮಗು ನನ್ನದೇ ಎಂದಿದ್ದ ರಮೇಶ್ಗೆ ಪಾರ್ಟಿ ಕೊಡುವ ನೆಪದಲ್ಲಿ ಕರೆಸಿ ಹತ್ಯೆ ಮಾಡಿದ್ದಾರೆ. ಮೃತ ದೇಹವನ್ನು ಕಾರಿನಲ್ಲಿ ಬೆಂಗಳೂರಿಗೆ ಸಾಗಿಸಿ ನೆಲಮಂಗಲದ ಕೆರೆಗೆ ಬಿಸಾಡಿದ್ದಾರೆ.
ಸ್ಯಾಂಡಲ್ವುಡ್ ನಟನ ಸೆರೆ:
ವಂಚನೆ ಮತ್ತು ಅತ್ಯಾಚಾರ ಆರೋಪದಡಿ ಸ್ಯಾಂಡಲ್ವುಡ್ ನಟ ಶೇಷಗಿರಿ ಅಲಿಯಾಸ್ ಬಸವರಾಜ್ ಎಂಬಾತನನ್ನು ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ. ಹಲವು ದಿನಗಳಿಂದ ಶೇಷಗಿರಿ ಮೈಸೂರಿನಲ್ಲಿ ತಲೆ ಮರೆಸಿಕೊಂಡಿದ್ದ. ಬ್ಯಾಂಕ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿ ಬಳಿ ಹಣ ಪಡೆದು ಅಸಭ್ಯವಾಗಿ ನಡೆದುಕೊಂಡಿದ್ದ. ಮೋಸ ಹೋಗಿದ್ದ ಯುವತಿ ಸುಬ್ರಮಣ್ಯನಗರ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ ಶೇಷಗಿರಿ ಬಸವರಾಜ್ ನನ್ನು ಬಂಧಿಸಿದ್ದು, ಈತ ಕನ್ನಡ ಡಾರ್ಕ್, ಸಸ್ಪೆನ್ಸ್, ಕಿಲಾಡಿಗಳು, ಆಶಿಕಿ - 2 ಸಿನಿಮಾಗಳಲ್ಲಿ ನಟನೆ ಮಡಿದ್ದ. ಬ್ಯಾಂಕ್ ಕೆಲಸ ಬಿಟ್ಟು ಸಿನಿಮಾದಲ್ಲಿ ವಿಲನ್ ಪಾತ್ರ ನಿರ್ವಹಣೆ ಮಾಡುತ್ತಿದ್ದ. ವಂಚನೆ ಆರೋಪದಲ್ಲಿ ಶೇಷಗಿರಿ ಬಸವರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಗಲ್ ಪ್ರೇಮಿ ಬಂಧನ:
ಉದಯೋನ್ಮುಖ ನಟಿಗೆ ಪ್ರೀತಿಸುವಂತೆ ಪೀಡಿಸಿ ಹಿಂಸೆ ಕೊಡುತ್ತಿದ್ದ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಉದಯೋನ್ಮುಖ ನಟಿ ಅನುಷಾ ನೀಡಿದ ದೂರಿನ ಮೇರೆಗೆ ಇಂಜಿನಿಯರ್ ಚಂದನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೇಜು ದಿನಗಳಲ್ಲಿ ಅನುಷಾಳನ್ನು ಚಂದನ್ ಪ್ರೀತಿಸುತ್ತಿದ್ದ. ಎರಡು ಮೂರು ತಿಂಗಳು ಇಬ್ಬರೂ ಪರಸ್ಪರ ಓಡಾಡಿದ್ದರು. ಲವ್ ಮಾಡಲು ಇಷ್ಟವಿಲ್ಲದೇ ಇಬ್ಬರೂ ದೂರ ಸರಿದಿದ್ದರು. ಇದರ ಬಳಿಕವೂ ಅನುಷಾಳನ್ನು ಹಿಂಬಾಲಿಸುತ್ತಿದ್ದ. ನಾಗರಭಾವಿಯಲ್ಲಿ ನೆಲೆಸಿದ್ದ ನಟಿ ಅನುಷಾ ಮನೆ ಬದಲಿಸಿದ್ದಳು. ನನ್ನನ್ನು ಪ್ರೀತಿಸದಿದ್ದರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿದ್ದ. ತನ್ನ ಸ್ನೇಹಿತೆ ಮನೆಗೆ ಕ್ಯಾಬ್ನಲ್ಲಿ ಹೋಗುವಾಗ ಅಡ್ಡ ಗಟ್ಟಿ ಹಲ್ಲೆಮಾಡಿದ್ದ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅನುಷಾ ದೂರು ನೀಡಿದ್ದು, ಪಾಗಲ್ ಪ್ರೇಮಿ ಚಂದನ್ ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ರೌಡಿ ಕಾಲಿಗೆ ಗುಂಡೇಟು:
Recommended Video
ಎಂಟು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಅಮೃತಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಪಿಎಸ್ಐ ಪ್ರಕಾಶ್ ಗಾಯಗೊಂಡಿದ್ದಾರೆ. ರೌಡಿ ಶೀಟರ್ ಸ್ಯಾಮುಯಲ್ ಗುಂಡೇಟು ತಿಂದವ. ಎಂಟು ಪ್ರಕರಣದಲ್ಲಿ ಬೇಕಾಗಿದ್ದ ಸ್ಯಾಮುಯಲ್ ಬಂಧನಕ್ಕೆ ತೆರಳಿದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಗುರು ಪ್ರಸಾದ್ ಗುಂಡು ಹಾರಿಸಿದ್ದು ಸ್ಯಾಮುಯಲ್ ಕಾಲಿಗೆ ತಗುಲಿದೆ. ಆತನನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.