ಬೆಂಗಳೂರು ಅಪರಾಧ ಸುದ್ದಿ ರೌಂಡಪ್: ಇಂಜೆಕ್ಷನ್ನಿಂದ ಕೈ ಢಮಾರ್!
ಬೆಂಗಳೂರು, ಆ. 03: ಪೊಲೀಸರ ಮೇಲೆ ದಾಳಿ ಮಾಡಿದ ಆರೋಪ ಎದುರಿಸುತ್ತಿದ್ದ ನೈಜೀರಿಯಾ ಮೂಲದ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ನಾಲ್ವರಿಗಾಗಿ ಶೋಧ ನಡೆಸಲಾಗುತ್ತಿದೆ. ಇನ್ನು ನೈಜೀರಿಯನ್ ಪ್ರಜೆಗಳಿಗೆ ಪ್ರಚೋದನೆ ನೀಡಿದ ಸಾರಾಯಿಪಾಳ್ಯದ ಮಹಿಳೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಮೂರು ವಿಶೇಷ ತಂಡಗಳನ್ನು ರಚನೆ ಮಾಡಿದ್ದು, ತಲೆ ಮರೆಸಿಕೊಂಡಿರುವ ಮಹಿಳೆ ಹಾಗೂ ಇತರೆ ನಾಲ್ವರು ಅರೋಪಿಗಳಿಗಾಗಿ ಹುಡುಕಾಟ ಅರಂಭಿಸಿದ್ದಾರೆ. ಸಿಸಿಟಿವಿ ಹಾಗೂ ಕ್ಯಾಮರಾ ದೃಶ್ಯಗಳನ್ನು ಆಧರಿಸಿ ಕೊತ್ತನೂರು, ಹೆಣ್ಣೂರು, ಬಾಣಸವಾಡಿ ಆರ್.ಟಿ. ನಗರ ಸುತ್ತಮುತ್ತ ತಲಾಷೆ ಮಾಡುತ್ತಿದ್ದಾರೆ.
ಮೃತದೇಹ ಹಸ್ತಾಂತರ: ಪೊಲೀಸರ ಕಸ್ಟಡಿಯಲ್ಲಿ ಸಾವನ್ನಪ್ಪಿದ ಶಂಕಿತ ಡ್ರಗ್ ಪೆಡ್ಲರ್ ಜಾನ್ ಅಲಿಯಾಸ್ ಜೋಯಿಲ್ ಮಲು ಮರಣೋತ್ತರ ಪರೀಕ್ಷೆಯನ್ನು ಬೌರಿಂಗ್ ಅಸ್ಪತ್ರೆಯಲ್ಲಿ ನಡೆಸಲಾಗಿದೆ. ಮೃತ ದೇಹ ಹಸ್ತಾಂತರಿಸಲು ರಾಯಭಾರಿ ಕಚೇರಿ ಪೋಷಕರ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಜೀರಿಯನ್ ಆರೋಪಿಗಳಿಗೆ ಡೋಪಿಂಗ್ ಟೆಸ್ಟ್
ಪೊಲೀಸರ ಮೇಲೆ ಹಲ್ಲೆ ಮಾಡಿ ಬಂಧನಕ್ಕೆ ಒಳಗಾಗಿರುವ ಆರು ಆರೋಪಿಗಳನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಒಬ್ಬ ಆರೋಪಿ ಗಲಾಟೆ ವೇಳೆ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಐವರು ಮೂತ್ರ ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಗುರ್ಲೋಡ್ ಎಂಬ ಮಾದಕ ವಸ್ತು ಸೇವನೆ ಮಾಡಿರುವುದನ್ನು ವೈದ್ಯರು ದೃಢಪಡಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೈ ಕಳೆದುಕೊಂಡ ಮಾದಕ ವ್ಯಸನಿ ಯುವಕ
ಮಾದಕ ವಸ್ತು ಸಿಗದ ಕಾರಣಕ್ಕೆ ಯುವಕನೊಬ್ಬ ಮತ್ತು ಬರುವ ಚುಚ್ಚು ಮದ್ದು ತೆಗೆದುಕೊಂಡು ಬಲಗೈ ತೆಗೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತೆರಳಿದ್ದ ಯುವಕನಿಗೆ ಮಾದಕ ವಸ್ತು ಸಿಕ್ಕಿರಲಿಲ್ಲ. ಹೀಗಾಗಿ ನೋವು ನಿವಾರಕ ಚುಚ್ಚು ಮದ್ದು ಚುಚ್ಚುಕೊಂಡಿದ್ದಾನೆ. ಇದರಿಂದ ಕೈ ಊತವಾಗಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ಕೈ ಕೊಳೆತು ಅದನ್ನು ತೆಗೆದಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ಬೈಕ್ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಈತ ಎರಡು ಬಾರಿ ಪರಿಹಾರ ಕೇಂದ್ರದಲ್ಲಿದ್ದ. ಮಾದಕ ವ್ಯಸನಕ್ಕೆ ಬಿದ್ದು ಬೈಕ್ ಕಳ್ಳತನಕ್ಕೆ ಇಳಿದಿರುವ ಮಾಹಿತಿ ಬಹಿರಂಗವಾಗಿದೆ.
ವೈದ್ಯ ವಿದ್ಯಾರ್ಥಿಯ ನಿಗೂಢ ಸಾವು
ವೈದ್ಯ ವಿದ್ಯಾರ್ಥಿಯ ವಿವಸ್ತ್ರ ಮೃತ ದೇಹ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದ್ದು, ಕೊಲೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಯ್ಯದ್ ಹುಮೈದ್ ಅಹಮದ್ ಮೃತ ವೈದ್ಯಕೀಯ ವಿದ್ಯಾರ್ಥಿ. ಮೃತ ದೇಹದ ಮರ್ಮಾಂಗ ಹಾಗೂ ಕತ್ತಿನ ಮೇಲೆ ಗಾಯವಾಗಿದ್ದು, ಇದೊಂದು ಕೊಲೆಯಾಗಿರಬಹುದು ಎಂದು ರೈಲ್ವೇ ಪೊಲೀಸರು ಶಂಕಿಸಿದ್ದಾರೆ. ಹುಬ್ಬಳ್ಳಿಯ ಪ್ರತಿಷ್ಠಿತ ವಿಮ್ಸ್ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಓದುತ್ತಿದ್ದ ಸಯ್ಯದ್ ಬಕ್ರೀದ್ ಆಚರಣೆಗೆಂದು ಆರ್.ಟಿ. ನಗರದಲ್ಲಿರುವ ಮನೆಗೆ ಬಂದಿದ್ದ. ಈತನನ್ನು ಸುಲಿಗೆ ಮಾಡಲು ಕೊಲೆ ಮಾಡಿದರೇ ಇಲ್ಲವೇ ಅನ್ಯ ಕಾರಣಕ್ಕೆ ಹತ್ಯೆ ಮಾಡಿರಬಹುದೇ ಎಂಬುದರ ಬಗ್ಗೆ ದಂಡು ರೈಲ್ವೇ ಪೊಲೀಸರು ಶಂಕಿಸಿದ್ದಾರೆ.
Recommended Video
20 ವರ್ಷಕ್ಕೆ ಪಾತಕ ಲೋಕಕ್ಕೆ ಎಂಟ್ರಿ
ಶಿವಾಜಿನಗರದ ರೌಡಿ ಶೀಟರ್ ನಾಸಿರ್ ಅಲಿಯಾಸ್ ಬೈಲ್ ನಾಸಿರ್ ಎಂಬಾತನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ. 20 ವರ್ಷ ವಯಸ್ಸಿನಲ್ಲಿ ಸುಮಾರು ಹನ್ನೊಂದಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದು, ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾದ ಬಳಿಕವೂ ಅಪರಾಧ ಕೃತ್ಯಗಳಲ್ಲಿಸಕ್ರಿಯನಾಗಿದ್ದ. ಈ ಹಿನ್ನೆಲೆಯಲ್ಲಿ ಗೂಂಡಾ ಕಾಯ್ದೆ ಅಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.