ಬೆಂಗಳೂರು ಕ್ರೈಂ ರೌಂಡಪ್: ಬೆಂಗಳೂರು ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿದ್ದು ಯಾಕೆ?
ಬೆಂಗಳೂರು, ನ. 30: ಬೆಂಗಳೂರು ಸೆಂಟ್ರಲ್ ಜೈಲಿನ ಮೇಲೆ ಸಿಸಿಬಿ ಪೊಲೀಸರ ದಾಳಿ. ವಯಸ್ಸು ಹದಿನೆಂಟು ದಾಟದಿದ್ದರೂ ಬೈಕ್ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ವಶ, ಅಕ್ಕನ ಮೇಲಿನ ಮುನಿಸಿನಿಂದ ಮಹಡಿ ಮೇಲಿಂದ ಜಿಗಿದು ತಂಗಿ ಆತ್ಮಹತ್ಯೆಗೆ ಯತ್ನ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಜೈಲಿನ ಮೇಲೆ ಸಿಸಿಬಿ ದಾಳಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ದಾಳಿ ವೇಳೆ ಗಾಂಜಾ, ಗಾಂಜಾ ಸೇವನೆ ಉಪಕರಣಗಳು ಪತ್ತೆಯಾಗಿವೆ. ಕೆಲ ದಿನಗಳ ಹಿಂದಷ್ಟೇ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಆಗಲೂ ಗಾಂಜಾ ಮತ್ತು ಅದರ ಸೇವನೆ ವಸ್ತುಗಳು ಪತ್ತೆಯಾಗಿದ್ದವು. ಇದೀಗ ಮತ್ತೊಮ್ಮೆ ದಾಳಿ ಮಾಡಿದಾಗಲೂ ಮಾದಕ ವಸ್ತುಗಳು ಪತ್ತೆಯಾಗಿವೆ.
ಜೈಲಿನಲ್ಲಿರುವ ಕೈದಿಗಳು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ, ಜೈಲಿನಲ್ಲಿದ್ದುಕೊಂಡೇ ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ಕೇವಲ ಗಾಂಜಾ ಮತ್ತು ಅದರ ಉಪಕರಣ ಪತ್ತೆಯಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಗರುಡ ಅಧಿಕಾರಿಗಳು ಜೈಲಿನ ಮೇಲೆ ದಾಳಿ ನಡೆಸಿದ್ದರು. ಕೆಲವು ಕೈದಿಗಳು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ದೊರೆತ ಬೆನ್ನಲ್ಲೇ ಗರುಡ ಟೀಮ್ ದಾಳಿ ಮಾಡಿತ್ತು. ಕೆಲವು ಕ್ರಿಮಿನಲ್ಗಳು ಜೈಲಿನಲ್ಲಿದ್ದುಕೊಂಡೇ ಅಕ್ರಮ ಕೃತ್ಯ ಎಸಗಿರುವ ಮಾಹಿತಿ ಒದಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ದಾಳಿ ಮಾಡಲಾಯಿತು.
ದಾಳಿ ವೇಳೆ ಯಾವುದೇ ಅಕ್ರಮ ಕಂಡು ಬಂದಿಲ್ಲ ಎಂದು ಗರುಡ ಪೊಲೀಸ್ ತಂಡದ ಮುಖ್ಯಸ್ಥರಾದ ಅರುಣ್ ಚಕ್ರವರ್ತಿ ತಿಳಿಸಿದ್ದಾರೆ. ಗರುಡ ತಂಡ ದಾಳಿ ಬೆನ್ನಲ್ಲೇ ಸಿಸಿಬಿ ಪೊಲೀಸರು ದಾಳಿ ಮಾಡಿರುವುದು ವಿಶೇಷ. ಕೆಲವು ಕೈದಿಗಳು ಜೈಲಿನಲ್ಲಿದ್ದುಕೊಂಡೇ ತಂತ್ರಜ್ಞಾನ ಬಳಸಿಕೊಂಡು ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಕೆಲವು ಕೈದಿಗಳು ಸ್ಮಾರ್ಟ್ ಪೋನ್ಗಳನ್ನು ಜೈಲಿನಲ್ಲಿಯೇ ಬಳಕೆ ಮಾಡುತ್ತಿದ್ದು, ಸಿಸಿಬಿ, ಗರುಡ ದಾಳಿ ನಡೆದರೂ ಈ ಸಂಪರ್ಕ ಜಾಲವನ್ನು ತಡೆಯಲು ಸಾಧ್ಯವಾಗಿಲ್ಲ.
ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೆರೆ:
ಆತನ ವಯಸ್ಸು ಇನ್ನೂ ಹದಿನೆಂಟು ವರ್ಷ ಆಗಿಲ್ಲ. ಅದಾಗಲೇ ಏಳು ಕಡೆ ಬೈಕ್ ಕದ್ದು ಮಾರಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಮಡಿವಾಳ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕದಿಯುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಈತನ ವಿಚಾರಣೆ ಬಳಿಕ ಪುಲಿಕೇಶಿನಗರ, ಕುಮಾರಸ್ವಾಮಿ ಲೇಔಟ್ ಠಾಣೆ, ಮಡಿವಾಳ ಸೇರಿದಂತೆ ಏಳು ಕಡೆ ಬೈಕ್ ಕಳ್ಳತನ ಮಾಡಿದ್ದ. ಬಂಧಿತನ ಬಳಿ ಆರು ಬೈಕ್ ಮತ್ತು ಒಂದು ಅಟೋ ಸೇರಿ ಆರು ಲಕ್ಷ ರೂ. ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಬಂಧನದಿಂದ ಏಳು ಅಪರಾಧ ಪ್ರಕರಣ ಪತ್ತೆಯಾಗಿದೆ ಎಂದು ಪೊಲೀರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ:
ಅಕ್ಕನೊಂದಿಗೆ ಜಗಳ ಮಾಡಿ ಮುನಿಸಿಕೊಂಡಿದ್ದ ಸಹೋದರಿ ಮಹಡಿ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೀವನ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೇಕ್ರೆಡ್ ಹಾರ್ಟ್ ಕಾಲೇಜ್ನ ಎರಡನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೀವನ ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಅಕ್ಕನ ಜತೆ ವಾಸವಿದ್ದ ವಿದ್ಯಾರ್ಥಿನಿ ಸೋಮವಾರ ಸಂಜೆ ಜಗಳ ಮಾಡಿಕೊಂಡಿದ್ದಾಳೆ. ಇದರಿಂದ ಬೇಸತ್ತು ಬೆಳಗ್ಗೆ ಕಾಲೇಜಿಗೆ ಬಂದಿರುವ ವಿದ್ಯಾರ್ಥಿನಿ ಎರಡನೇ ಮಹಡಿಯಿಂದ ಜಿಗಿದು ಬಿದ್ದಿದ್ದಾಳೆ. ಈ ವೇಳೆ ಕೈ ಮತ್ತ ಕಾಲು ಮುರಿದಿದ್ದು ಕಾಲೇಜು ಆಡಳಿತ ಮಂಡಳಿ ಅಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಜೀವನ ಭೀಮಾ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Recommended Video
ಆತ್ಮಹತ್ಯೆ ತಡೆ ಸಹಾಯವಾಣಿ; ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಆರಂಭಿಸಿದೆ. ದೂರವಾಣಿ ಸಂಖ್ಯೆ 080 - 25497777.