ಕ್ರೈಂ ರೌಂಡಪ್: 100 ಕೋಟಿ ಸಾಲ ಕೊಡುವ ಅಸೆ ತೋರಿಸಿ 1.80 ಕೋಟಿ ರು ಮೋಸ
ಬೆಂಗಳೂರು, ಡಿ. 09: ನೂರು ಕೋಟಿ ರೂ. ಸಾಲ ಕೊಡಿಸುವ ಆಸೆ ತೋರಿಸಿ 1.80 ಕೋಟಿ ಪಡೆದು ನಾಮ ಹಾಕಿದ ಕಿರಾತಕ, ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರು ಪಾಲು. ದುಶ್ಚಟ ಬಿಡುಸುವ ಕೇಂದ್ರದಲ್ಲಿ ಯುವಕನ ಅನುಮಾನಾಸ್ಪದ ಸಾವು. ಕೊಲೆ ಎಂದು ಪೋಷಕರ ಆರೋಪ. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ನೂರು ಕೋಟಿ ಸಾಲ ಆಸೆ ತೋರಿಸಿ ನಾಮ:
ಮೋಸ ಹೋಗುವರು ಇರುವವರೆಗೂ ಟೋಪಿ ಹಾಕುವರು ಮಾತ್ರ ಬಿಡಲ್ಲ! ನೂರು ಕೋಟಿ ರೂಪಾಯಿ ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 1.80 ಕೋಟಿ ರೂ. ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಂಥೆನಾ ತರುಣ್ ಗಾಂಧಿ ಮೋಸ ಹೋದ ವ್ಯಕ್ತಿ. ಕಾರ್ತಿಕ್ ವೇಲನ್ ಮೋಸ ಮಾಡಿದ ವ್ಯಕ್ತಿ. ಹೈದರಾಬಾದ್ ಮೂಲದ ಉದ್ಯಮಿ ಮಂಥೆನಾ ತರುಣ್ ಗಾಂಧಿ ಉದ್ಯಮಕ್ಕಾಗಿ ಸಾಲ ಪಡೆಯಲು ಪ್ರಯತ್ನಿಸುತ್ತಿದ್ದರು. ಬಿಸಿನೆಸ್ ಸಾಲ ಪಡೆಯಲು ಹುಡುಕಾಡುತ್ತಿದ್ದ ವೇಳೆ, ಬೆಂಗಳೂರಿನ ಫ್ಯೂಚರ್ ಕ್ರೈಸ್ಟ್ ವೆಂಚರ್ಸ್ ಕಂಪನಿ ಸಾಲ ಕೊಡುವ ಬಗ್ಗೆ ಮಾಹಿತಿ ಪಡೆದಿದ್ದರು. ಅದರಂತೆ ಅದರ ಮಾಲೀಕ ಕಾರ್ತಿಕ್ ವೇಲನ್ ನನ್ನು ಮಂಥೆನಾ ತರುಣ್ ಗಾಂಧಿ ಭೇಟಿ ಮಾಡಿದ್ದರು.
ನೂರು ಕೋಟಿ ರೂ. ಸಾಲ ಕೊಡಬೇಕಾದರೆ, ಮೂರು ತಿಂಗಳ ಬಡ್ಡಿ 1.80 ಕೋಟಿ ರೂ. ಹಣವನ್ನು ಮುಂಗಡವಾಗಿ ಇಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪಿದ ಮಂಥೆನಾ ತರುಣ್ ಗಾಂಧಿ 1.80 ಕೋಟಿ ರೂ. ಹಣವನ್ನು ಕಾರ್ತಿಕ ವೇಲನ್ ಒಡೆತನದ ಕಂಪನಿಗೆ ಕೊಟ್ಟಿದ್ದಾರೆ. ಹಣ ಪಡೆದ ಬಳಿಕ ಕಾರ್ತಿಕ್ ವೇಲನ್ ಕಚೇರಿ ಬಾಗಿಲು ಹಾಕಿಕೊಂಡು ಎಸ್ಕೇಪ್ ಆಗಿದ್ದಾನೆ. ಮೊಬೈಲ್ ನಂಬರ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಬೇರೆ ದಾರಿಯಿಲ್ಲದೇ ಮಂಥೆನಾ ತರುಣ್ ಗಾಂಧಿ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾರ್ತಿಕ್ ವೇಲನ್ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಕಾರ್ತೀಕ್ ವೇಲನ್ ಬಗ್ಗೆ ಪೊಲೀಸರು ಹುಡುಕಾಡಿದರೂ ಸುಳಿವು ಸಿಕ್ಕಿಲ್ಲ. ಸಿಕ್ಕಿದರೂ ಹಣ ರೀಕವರಿಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಮೋಸ ಹೋಗುವರು ಇರುವವರೆಗೂ ಯಾಮಾರಿಸುವರು ಪಕ್ಕದಲ್ಲೇ ಇರುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ.
ರಿಹ್ಯಾಬ್ ಸೆಂಟರ್ನಲ್ಲಿ ಯುವಕ ಸಾವು:
ಮದ್ಯ ವಸನ ಮುಕ್ತಗೊಳಿಸುವ ರಿಹ್ಯಾಬ್ ಸೆಂಟರ್ ಸೇರಿದ್ದ 24 ವರ್ಷದ ಯುವಕನೊಬ್ಬ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುಭಾಷ್ ಪಾಂಡಿ ಮೃತಪಟ್ಟ ಯುವಕ. ಕೆಲ ವರ್ಷಗಳಿಂದ ಕುಡಿತದ ಚಟಕ್ಕೆ ಬಿದ್ದಿದ್ದ. ಕುಡಿತ ಬಿಡಿಸಲೆಂದು ಪೋಷಕರು ಮಂಗಮ್ಮನಪಾಳ್ಯದಲ್ಲಿರುವ ರಿಹ್ಯಾಬಿಲೇಷನ್ ಸೆಂಟರ್ಗೆ ಸೇರಿಸಲಾಗಿತ್ತು. ಕೆಲ ದಿನಗಳ ಹಿಂದೆ ನೇಣು ಬಿಗಿದ ಸ್ಥಿತಿಯಲ್ಲಿ ಸುಭಾಷ್ ಮೃತ ದೇಹ ಪತ್ತೆಯಾಗಿದೆ. ಪೋಷಕರಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಹೋಗಿ ನೋಡಿದಾಗ ಸುಭಾಷ್ ಮೃತ ದೇಹ ಪತ್ತೆಯಾಗಿದೆ. ಇದೀಗ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಬಂಡೆಪಾಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಸೂಕ್ತ ಚಿಕಿತ್ಸೆ ನೀಡದೇ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಪೋಷಕರು ಅರೋಪಿಸಿದ್ದಾರೆ.
ಈಜಲು ಹೋಗಿ ನೀರು ಪಾಲು:
ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಮಾದನಾಯಕನಳ್ಳಯ ಹುಳ್ಳೇಗೌಡನಹಳ್ಳಿಯಲ್ಲಿ ನಡೆದಿದೆ. ಏಕಾಕ್ಷ ಮತ್ತು ಭರತ್ ಮೃತಪಟ್ಟ ದುರ್ದೈವಿಗಳು. ಬಸವನಹಳ್ಳಿ ವೆಂಕಟೇಶ್ ಮತ್ತು ನೇತ್ರವಾತಿ ದಂಪತಿಯ ಮಕ್ಕಳಿಬ್ಬರು ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video