ವಿದ್ಯಾರ್ಥಿನಿ ಅಮೂಲ್ಯಾ ಲಿಯೊನಾಗೆ ಜಾಮೀನು ಸಿಕ್ಕಿದ್ದು ಹೇಗೆ?
ಬೆಂಗಳೂರು, ಜೂನ್ 11: 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿ ದೇಶದ್ರೋಹದ ಆರೋಪ ಹೊತ್ತುಕೊಂಡಿದ್ದ ವಿದ್ಯಾರ್ಥಿನಿ, ಎಡಪಂಥೀಯ ಚಿಂತನೆಯ ಅಮೂಲ್ಯ ಲಿಯೊನಾ ನರೋನಾಗೆ ಜಾಮೀನು ಮಂಜೂರಾಗಿದೆ.
Recommended Video
ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ಸಿಎಎ, ಎನ್ಆರ್ಸಿ ವಿರೋಧಿಸಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಂಸದ ಅಸಾದುದ್ದಿನ್ ಓವೈಸಿ ಭಾಗಿಯಾಗಿದ್ದ ಈ ಸಮಾವೇಶದಲ್ಲಿ ಅಮೂಲ್ಯ ಲಿಯೋನಾ 'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರು.
ಅಮೂಲ್ಯಾ ವಿರುದ್ಧ ದೇಶದ್ರೋಹದ ಆರೋಪ ಹೊರೆಸಿ ಜೈಲಿಗೆ ಕಳಿಸಲಾಗಿತ್ತು. ಆದರೆ, ಹಲವು ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೂ ಜಾಮೀನು ಮಂಜೂರಾಗಿರಲಿಲ್ಲ. ಬುಧವಾರ (ಜೂನ್ 10)ದಂದು ಕೂಡಾ ಅಮೂಲ್ಯಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಜಡ್ಜ್ ವಿದ್ಯಾಧರ್ ಅವರು ಜಾಮೀನು ಮಂಜೂರು ಮಾಡಿಲ್ಲ ಎಂಬ ಸುದ್ದಿ ಹಬ್ಬಿತ್ತು.
'ಪಾಕಿಸ್ತಾನ್ ಜಿಂದಾಬಾದ್' ಎಂದ ಅಮೂಲ್ಯ ಲಿಯೋನ್ ಯಾರು?
ಆದರೆ, ಅಮೂಲ್ಯ ಪರ ವಕೀಲರು ಕಾನೂನು ಪ್ರಕ್ರಿಯೆಯಲ್ಲಿ ವಿಳಂಬ, ಪೊಲೀಸ್ ತನಿಖೆಯಲ್ಲಿನ ದೋಷವನ್ನು ಕೋರ್ಟ್ ಮುಂದೆ ಎತ್ತಿ ಹಿಡಿದು ತೋರಿಸಿದ್ದರಿಂದ ಅಮೂಲ್ಯಾಗೆ ಜಾಮೀನು ನೀಡುವುದು ಅನಿವಾರ್ಯವಾಯಿತು.
ಹೀಗಾಗಿ, ಜೂನ್ 11ರಂದು ಕಾನೂನಿಗೆ ಬದ್ಧವಾಗಿ ಸಿಆರ್ ಪಿ ಸಿ ಸೆಕ್ಷನ್ 162 ಕಲಂ 2 ಅಡಿಯಲ್ಲಿ statutory bail ನೀಡಲಾಗಿದೆ. ಶುಕ್ರವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಅಮೂಲ್ಯ ಲಿಯೋನಾಗೆ ಬಿಡುಗಡೆ ಸಿಗುವ ಸಾಧ್ಯತೆಯಿದೆ.
ಮಾಧ್ಯಮಗಳಲ್ಲಿ ಬಂದ ವರದಿಯಲ್ಲಿ ಏನಿತ್ತು?
''ಆಕೆಗೆ ಜಾಮೀನು ದೊರೆತರೆ ಬೇರೆ ರೀತಿಯ ಅಪರಾಧಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಸಮಾಜಕ್ಕೂ ಒಳಿತಲ್ಲ ಎಂದು ಬುಧವಾರದಂದು ಜಡ್ಜ್ ವಿದ್ಯಾಧರ ಶಿರಹಟ್ಟಿ ಅಭಿಪ್ರಾಯಪಟ್ಟಿದ್ದಾರೆ ಹೀಗಾಗಿ, ಆಕೆಗೆ ಜಾಮೀನು ನೀಡಲು ಸಾಧ್ಯವಾಗಿಲ್ಲ'' ಎಂದು ಒನ್ಇಂಡಿಯಾ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದು ಉದ್ದೇಶಪೂರ್ವಕವಾಗಿ ಕೋರ್ಟ್ ಹಾಲ್ ನಿಂದ ಬಂದ ತಪ್ಪು ಮಾಹಿತಿ ಎಂದು ನಂತರ ಸ್ಪಷ್ಟವಾಗಿದೆ.
ದೋಷರೋಪಣ ಪಟ್ಟಿ ಸಲ್ಲಿಸಿಲ್ಲವೇಕೆ?
ಕಾನೂನಿನ ಪ್ರಕಾರ,ಆರೋಪಿಯನ್ನು ಬಂಧಿಸಿ ಜೈಲಿನಲ್ಲಿರಿಸಿದ ಬಳಿಕ 90 ದಿನಗಳೊಳಗೆ ದೋಷಾರೋಪಣ ಪಟ್ಟಿಯನು ಕೋರ್ಟಿಗೆ ಸಲ್ಲಿಸಬೇಕಾಗುತ್ತದೆ. ಆದರೆ, ಅಮೂಲ್ಯಾ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ ಕಾರಣ ಆಕೆಗೆ ಡೀಫಾಲ್ಡ್ ಬೇಲ್ ಸಿಗಬೇಕಿದೆ ಎಂದು ವಾದಿಸಿದರು.
ಈ ಕುರಿತಂತೆ ಮೇ 26, ಮೇ 29ರಂದು ಇಮೇಲ್ ಕಳಿಸಿದ್ದರು. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದೆಲ್ಲ ಫಲ ನೀಡದಿದ್ದಾಗ ಜೂನ್ 2 ರಂದು ಅರ್ಜಿ ಸಲ್ಲಿಸಿದ್ದಾರೆ. ಇದಾದ ಬಳಿಕ ಜೂನ್ 3 ರಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ವಕೀಲ ಪ್ರಸನ್ನ ತಿಳಿಸಿದರು.
ಹೀಗಾಗಿ, ಕಾನೂನಿಗೆ ಬದ್ಧವಾಗಿ ಸಿಆರ್ ಪಿ ಸಿ ಸೆಕ್ಷನ್ 162 ಕಲಂ 2 ಅಡಿಯಲ್ಲಿ statutory bail ನೀಡಲಾಗಿದೆ. ಶುಕ್ರವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಅಮೂಲ್ಯ ಲಿಯೋನಾಗೆ ಬಿಡುಗಡೆ ಸಿಗುವ ಸಾಧ್ಯತೆಯಿದೆ.
ಜಾಮೀನು ಸಿಕ್ಕಿದ್ದು ಹೇಗೆ?
ಅಮೂಲ್ಯ ಅವರ ವಿರುದ್ಧ ದೇಶದ್ರೋಹ ಹಾಗೂ ಸಮಾಜದಲ್ಲಿ ದ್ವೇಷ ಹೊತ್ತಿಸುವ ಆರೋಪವಿದೆ. ಒಂದೊಮ್ಮೆ ಅಮೂಲ್ಯಳಿಗೆ ಜಾಮೀನು ದೊರೆತರೆ ಆಕೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರಿ ವಕೀಲರು ಕೂಡಾ ವಾದಿಸಿದ್ದರು.
ಅಂದು ಆಕೆ ಪಾಕಿಸ್ತಾನ್ ಜಿಂದಾಬಾದ್ ಎಂದ ಕೆಲವೇ ಕ್ಷಣಗಳಲ್ಲಿ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಬದಲಾಯಿಸಿದ್ದಳು. ಆಕೆಯ ಕೈಲಿದ್ದ ಮೈಕನ್ನು ಕಸಿದುಕೊಳ್ಳಲಾಗಿತ್ತು. ಆದರೆ, ಆಕೆಗೆ ಸಿಗಬೇಕಾದ ಜಾಮೀನನ್ನು ಬೇಕಂತಲೇ ನಿರಾಕರಿಸಲಾಗಿದೆ ಎಂದು ಅಮೂಲ್ಯ ಪರ ವಕೀಲರಾದ ಆರ್ ಪ್ರಸನ್ನ ವಾದಿಸಿದರು. ಜೊತೆಗೆ ಡಿಫಾಲ್ಡ್ ಬೇಲ್ ಗಾಗಿ ಅರ್ಜಿ ಸಲ್ಲಿಸಿ, ಚಾರ್ಜ್ ಶೀಟ್ ಫೈಲ್ ಮಾಡದೆ ಜೈಲಿನಲ್ಲಿರಿಸಿರುವುದು ತಪ್ಪು ಎಂದು ವಾದಿಸಿದ್ದು ಫಲನೀಡಿದೆ.
ಎನ್ಎಮ್ಕೆಆರ್ವಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರ ಬಳಿ ಅಮೂಲ್ಯಳ ತಂದೆ ವಾಜಿ, ತಾಯಿ ಲವೀನಾ ವಾಸವಿದ್ದಾರೆ. ಅವರ ತಾಯಿ ಲವೀನಾ ಅವರು ಕೂಡ ಮಗಳ ಘೋಷಣೆಯನ್ನು ವಿರೋಧಿಸಿ, 'ಅದಕ್ಕಾಗಿ ಕ್ಷಮೆ ಕೇಳುತ್ತೇನೆ. ಅವಳು ಭಾರತದ ಪರ ವಹಿಸಿ ಮಾತನಾಡಿ, ಏನೋ ಹೇಳುವಾಗ ಆ ರೀತಿ ಹೇಳಿರಬಹುದು' ಎಂದು ಪ್ರತಿಕ್ರಿಯಿಸಿದ್ದರು.
ಬೆಂಗಳೂರು ಜಯನಗರದ ಎನ್ಎಮ್ಕೆಆರ್ವಿ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ವಿಷಯದಲ್ಲಿ ಪದವಿ ಪಡೆಯುತ್ತಿರುವ ಅಮೂಲ್ಯ ಸದ್ಯ ಬೆಂಗಳೂರಿನಲ್ಲಿ ನೆಲಸಿದ್ದಾಳೆ. ಗೌರಿ ಲಂಕೇಶ್ ಹತ್ಯೆಯಾದಾಗ ಹಾಗೂ ಎಡಪಂಥೀಯ ಕಾರ್ಯಕ್ರಮಗಳಲ್ಲಿ, ಸಿಎಎ ವಿರೋಧಿ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಕಾಣಿಸಿಕೊಳ್ಳುತ್ತಿದ್ದಳು. ಕನ್ನಡದ ಜೊತೆ ಹಿಂದಿ ಇಂಗ್ಲೀಷ್ ಚೆನ್ನಾಗಿ ಮಾತನಾಡುತ್ತಾಳೆ.ಭಾಷಾಂತರ ಕೆಲಸ ಮಾಡುವ ಅಮೂಲ್ಯ ಇತ್ತೀಚೆಗೆ ಸಿಎಎ ವಿರೋಧಿ ಹಾಗೂ ಕೇಂದ್ರ ಸರ್ಕಾರ, ಮೋದಿ ವಿರೋಧಿ ಪ್ರತಿಭಟನೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಯುವತಿಯ ದೇಶವಿರೋಧಿ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಭಾಷಾಂತರ ಕೆಲಸ ಬಿಟ್ಟು ಇತ್ತೀಚೆಗೆ ಅಮೂಲ್ಯ ಸಂಪೂರ್ಣ ಎಡಪಂಥೀಯ ವಿಚಾರಧಾರೆಗಳಲ್ಲಿ ತೊಡಗಿಸಿಕೊಂಡಿದ್ದಳು.