ಆಪರೇಷನ್ ಕಮಲ ಚುರುಕು: ಬಿಜೆಪಿ ಸೇರ್ಪಡೆಗೊಂಡ ಕಾಂಗ್ರೆಸ್ ಮುಖಂಡ
ಬೆಂಗಳೂರು, ಮೇ 31: ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ರಾಜ್ಯ ರಾಜಕಾರಣದಲ್ಲಿ ಸದ್ದಿಲ್ಲದೇ ಪಕ್ಷಾಂತರ ಪರ್ವ ಆರಂಭಗೊಂಡಿದೆ.
ರಾಜ್ಯದಲ್ಲಿ ಆಪರೇಷನ್ ಕಮಲ ಕೂಡ ಚುರುಕುಕೊಂಡಿದ್ದು, ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ.
ಪಾದರಾಯನಪುರ ಸೀಲ್ ಡೌನ್, ಕಾರ್ಪೋರೇಟರ್ ವಿರುದ್ಧ ಎಫ್ಐಆರ್!
ಬೆಂಗಳೂರು ನಗರದ ಟಿ.ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯೆಯ ಪತಿ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದ ತಿಮ್ಮನಂಜಯ್ಯ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಪಕ್ಷ ಕಾಂಗ್ರೆಸ್ ಗೆ ಭಾರೀ ಹಿನ್ನಡೆಯಾದಂತಾಗಿದೆ.
ಬೆಂಗಳೂರಿನ ಟಿ.ದಾಸರಹಳ್ಳಿಯ ಮಾಜಿ ಬಿಜೆಪಿ ಶಾಸಕ ಹಾಗೂ ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಎಸ್.ಮುನಿರಾಜು, ಕೊರೊನಾ ವೈರಸ್ ಲಾಕ್ ಡೌನ್ ನಡುವೆಯೇ ತಮ್ಮ ಕ್ಷೇತ್ರದಲ್ಲಿ ಹಸಿದವರಿಗೆ ಊಟ, ದಿನಸಿ, ತರಕಾರಿ ನೀಡಿ ಜನರಿಗೆ ನೆರವಾಗಿದ್ದರು. ಈ ನಡುವೆ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕೆ ಟಿ.ದಾಸರಹಳ್ಳಿಯಲ್ಲಿ ಆಪರೇಷನ್ ಕಮಲ ಚುರುಕುಗೊಳಿಸಿದ್ದು, ತಿಮ್ಮನಂಜಯ್ಯರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದಾರೆ.
ತಿಮ್ಮನಂಜಯ್ಯರ ಪತ್ನಿ ಲಲಿತಾ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ಸದಸ್ಯೆಯಾಗಿದ್ದಾರೆ. ಪತಿ ತಿಮ್ಮನಂಜಯ್ಯ ಸೇರ್ಪಡೆ ಮೂಲಕ ಟಿ.ದಾಸರಹಳ್ಳಿ ಕ್ಷೇತ್ರದಲ್ಲಿ ಮಾಜಿ ಶಾಸಕ ಎಸ್.ಮುನಿರಾಜು ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಶಾಕ್ ನೀಡಿದ್ದಾರೆ.
ಕೊರೊನಾ ವೈರಸ್ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಟಿ.ದಾಸರಹಳ್ಳಿಯ ಬಾಗಲಗುಂಟೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಮುನಿರಾಜು, ಕ್ಷೇತ್ರದ ಅಧ್ಯಕ್ಷ ಲೋಕೇಶ್, ತಿಮ್ಮನಂಜಯ್ಯ, ಮುಖಂಡರಾದ ನರಸಿಂಹ ಮೂರ್ತಿ, ಸಿ.ಎಂ ನಾಗರಾಜು, ಉಮಾದೇವಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.