ಬೆಳ್ಳಂದೂರು ಕೆರೆ ಶುದ್ಧ ಮಾಡಲು ನೀವು ಸಹಿ ಹಾಕಿ
ಬೆಂಗಳೂರು, ಅಕ್ಟೋಬರ್. 06: ಬೆಂಗಳೂರು ಮಹಾನಗರ ಪಾಲಿಕೆ ಆಡಳಿತ ಬದಲಾಗಿದೆ, ಆದರೆ ಸಮಸ್ಯೆಗಳು ಹಾಗೇ ಇದೆ. ಕಳೆದ ಆರು ತಿಂಗಳಿನಿಂದ ಕಾಡುತ್ತಿರುವ ಬೆಳ್ಳಂದೂರು ಕರೆ ರಾಸಾಯನಿಕ ನೊರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಒಡಲಲ್ಲಿ ವಿಷ ತುಂಬಿಕೊಂಡಿರುವ ಬೆಳ್ಳಂದೂರು ಕೆರೆ ಸಮಸ್ಯೆ ಆರಂಭವಾಗಿ 6 ತಿಂಗಳುಗಳೇ ಕಳೆದಿದೆ. ಮಾಧ್ಯಮಗಳು, ನಾಗರಿಕರು ಮಾಡಿಕೊಂಡ ಮನವಿಗೆ ಬಿಬಿಎಂಪಿ ಕಿವಿಗೊಟ್ಟಿಲ್ಲ. ತಾತ್ಕಾಲಿಕ ಪರಿಹಾರ ಮಾಡಿ ಕೈ ತೊಳೆದುಕೊಳ್ಳುತ್ತಿದೆ. ['ಕ್ಲೀನ್ ಅಪ್ ಬೆಳ್ಳಂದೂರು ಲೇಕ್' ಅಭಿಯಾನಕ್ಕೆ ಸಹಿ ಮಾಡಿ]
ಆದರೆ ಇದೀಗ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು ಭಾಗದ ಜನ ಪ್ರತಿ ನಿತ್ಯ ಮೈ-ಕೈ ತುರಿಕೆ, ಉಸಿರಾಟದ ತೊಂದರೆ, ಗಂಟು ನೋವು, ಕಣ್ಣು ಉರಿ ಅನುಭವಿಸುತ್ತ ನರಕಯಾತನೆ ಅನುಭವಿಸುತ್ತಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಐಟಿ ಉದ್ಯೋಗಿಯೊಬ್ಬರು ಸಹಿ ಸಂಗ್ರಹ ಅಭಿಯಾನ ಆರಂಭ ಮಾಡಿದ್ದಾರೆ. ಬೆಳ್ಳಂದೂರು ನಿವಾಸಿ ಸಂಚಿತಾ ಝಾ ರಾಸಾಯನಿಕ ಮಿಶ್ರಿತ ನೊರೆ ಸಮಸ್ಯೆಗೆ ಬೇಸತ್ತು ಸಹಿ ಸಂಗ್ರಹ ಅಭಿಯಾನಕ್ಕೆ ಇಳಿದಿದ್ದಾರೆ. 26 ವರ್ಷದ ಝಾ 'ಕ್ಲೀನ್ ಅಪ್ ಬೆಳ್ಳಂದೂರು ಲೇಕ್' ಎಂಬ ಹೆಸರಿನಲ್ಲಿ ಅಭಿಯಾನ ಆರಂಭ ಮಾಡಿದ್ದಾರೆ.[ಒಡಲಲ್ಲಿ ವಿಷ ತುಂಬಿಕೊಂಡ ಬೆಳ್ಳಂದೂರು ಕರೆ ಕಣ್ಣೀರ ಕತೆ]
15000 ಜನರ ಬೆಂಬಲ ಅಭಿಯಾನಕ್ಕೆ ಬೇಕಿದ್ದು ಇನ್ನು ಕೇವಲ 63 ಜನ ಸಹಿ ಮಾಡಿದರೆ ಸಾಕು. ಕೆಲ ವಾರಗಳ ಹಿಂದೆ ಆರಂಭವಾದ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಇನ್ನಾದರೂ ಸರ್ಕಾರ ಮತ್ತು ಬಿಬಿಎಂಪಿ ಶಾಶ್ವತ ಪರಿಹಾರ ಹುಡುಕಲು ಮನಸ್ಸು ಮಾಡುತ್ತದೆಯೋ ಕಾದು ನೋಡಬೇಕು.