ಪರಮ ದುರವಸ್ಥೆಯ ಆಗರ ಲಗ್ಗೆರೆ ಸೇತುವೆ ಅಕ್ಕಪಕ್ಕ
ಬೆಂಗಳೂರು, ಸೆಪ್ಟೆಂಬರ್ 28 : ಬೆಂಗಳೂರಿನ ಅವ್ಯವಸ್ಥೆಗೆ, ಪರಮ ದುರವಸ್ಥೆಗೆ ಕನ್ನಡಿ ಹಿಡಿಯುವಂಥ ಲೇಖನಗಳನ್ನು ಒನ್ಇಂಡಿಯಾ ಕನ್ನಡ ಆರಂಭಿಸಿದೆ. ಇವನ್ನು ಓದುತ್ತಿರುವ ಓದುಗರು ಮೆಚ್ಚಿಕೊಂಡಿದ್ದಾರೆ, ಕೆಲ ಸಂಬಂಧಿಸಿದ ಸರಕಾರಿ ಅಧಿಕಾರಿಗಳು ಸ್ಪಂದಿಸಿದ್ದಾರೆ ಕೂಡ. ಅವರಿಗೆ ಮನಸಾರೆ ಧನ್ಯವಾದಗಳು.
ಎಲ್ಲರಿಗಿಂತ ಧನಾತ್ಮಕವಾಗಿ ಮತ್ತು ತಕ್ಷಣ ಸ್ಪಂದಿಸುತ್ತಿರುವುದು ಬೆಂಗಳೂರು ಪೊಲೀಸರು. ಆವಲಹಳ್ಳಿ ಜಂಕ್ಷನ್ ನಲ್ಲಿ ವಾಹನ ಸಂಚಾರಿಗಳು ಎದುರಿಸುತ್ತಿರುವ ಟ್ರಾಫಿಕ್ ತೊಂದರೆ ಮತ್ತು ಅಲ್ಲಿ ಇರದಿದ್ದ ಪೊಲೀಸ್ ಕಾನ್ಸ್ಟೇಬಲ್ ಬಗ್ಗೆ ಅವರ ಗಮನಕ್ಕೆ ತಂದಾಗ, ತಕ್ಷಣದಿಂದಲೇ ಕ್ರಮ ಜರುಗಿಸಿದ್ದಾರೆ.
ಯಡಿಯೂರು ವಾರ್ಡ್ ಮಾದರಿ ಫುಟ್ಪಾತ್ಗೆ ನಿರ್ವಹಣೆ ಸಮಸ್ಯೆ
ಈ ಲೇಖನಮಾಲಿಕೆ ಪ್ರಕಟವಾಗುತ್ತಿರುವ ಹಂತದಲ್ಲಿ ನಮ್ಮ ಇನ್ ಬಾಕ್ಸಿಗೆ ಒಂದು ಈಮೇಲ್ ಬಂದಿತ್ತು. ಅದು ಹೀಗಿತ್ತು, "ಸರ್, ದಯವಿಟ್ಟು ರಿಂಗ್ ರಸ್ತೆಯಲ್ಲಿರುವ ಲಗ್ಗೆರೆ ಬಡಾವಣೆಗೆ ಒಮ್ಮೆ ಬಂದು ಅಲ್ಲಿನ ಅವ್ಯವಸ್ಥೆ ನೋಡಿ. ಕಿತ್ತು ಹೋಗಿರುವ ರಸ್ತೆಗಳು, ಬ್ರಿಜ್ ಕೆಳಗೆ ಕಸದ ರಾಶಿಯ ದುರ್ನಾತ ಅಲ್ಲಿನ ನಾಗರಿಕರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಕಾರ್ಪೊರೇಟರ್ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ!"
ಒನ್ಇಂಡಿಯಾ ಫಲಶ್ರುತಿ : ಆವಲಹಳ್ಳಿ ಜಂಕ್ಷನ್ ನಲ್ಲಿ ಪೇದೆ ಪ್ರತ್ಯಕ್ಷ
ದಿನನಿತ್ಯ ಅಲ್ಲಿ ಅಡ್ಡಾಡುವವರಿಗೆ, ವರ್ಷಾನುಗಟ್ಟಲೆ ಅಲ್ಲಿಯೇ ನೆಲೆಸಿರುವ ನಿವಾಸಿಗಳಿಗೇ ಗೊತ್ತು ತಾವು ಎಂಥ ನರಕಸದೃಶ, ಅನಾರೋಗ್ಯಕರ, ಸಹಿಸಲು ಅಸಾಧ್ಯವಾದಂತಹ ವಾತಾವರಣದಲ್ಲಿ ನೆಲೆಸುತ್ತಿದ್ದೇವೆ ಎಂದು. ಅಲ್ಲಿ ನಾವು ಸ್ವತಃ ನೋಡಿ, ಅಲ್ಲಿನ ಜನರನ್ನು ಮಾತನಾಡಿಸಿದಾಗಲೇ ಲಗ್ಗೆರೆ ಸೇತುವೆ ಬಳಿ ಎಂಥ ಲೋಕವಿದೆಯೆಂದು ಗೊತ್ತಾಗಿದ್ದು.
ಅಂತಿಮ ಕ್ಷಣಗಳನ್ನು ಎದುರಿಸುತ್ತಿರುವ ತೆರೆದ ಗುಂಡಿಗಳು!
ಲಗ್ಗೆರೆ ಸೇತುವೆ ಬಳಿಯ ನರಕ ದರ್ಶನ ಮಾಡಿ ಬರುವ ಮೊದಲು, ಕೆಲವೊಂದು ಮಾಹಿತಿ ತಿಳಿದುಕೊಂಡು ಬಿಡೋಣ ಬನ್ನಿ. ಲಗ್ಗೆರೆ ಬರುವುದು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ, ಶಾಸಕರು ಸನ್ಮಾನ್ಯ ಮುನಿರತ್ನ ಅವರು, ವಾರ್ಡ್ ನಂಬರ್ 69ರ ಕಾರ್ಪೊರೇಟರ್ ಜೆಡಿಎಸ್ ಪಕ್ಷದ ಶ್ರೀಮತಿ ಮಂಜುಳಾ ನಾರಾಯಣಸ್ವಾಮಿ(9900454848)ಯವರು.
ಕಾರ್ಪೊಟರಿಗೊಂದು ಅಭಿನಂದನೆ ಸಲ್ಲಿಸಿ!
ಬನ್ನಿಬನ್ನಿ ಬೇಗ ಬನ್ನಿ ಲಗ್ಗೆರೆ ಬಡಾವಣೆಯ ಸೇತುವೆ ಬಳಿಯ, ಸಣ್ಣಸಣ್ಣ ಕೆರೆಗಳಿಂತಿರುವ ಹೊಂಡ, ಚಿಕ್ಕಪುಟ್ಟ ಜಲಪಾತ, ಟ್ರೆಕ್ಕಿಂಗ್ ಗೆ ಹೇಳಿ ಮಾಡಿಸಿದಂತಿರುವ 'ಪಿಕ್ನಿಕ್' ಸ್ಪಾಟ್ ನಂತಿರುವ ಈ ಪ್ರದೇಶವನ್ನು ಸುತ್ತಾಡಿಕೊಂಡು ಬರೋಣ. ನಿಮಗೇನಾದರೂ ಅನ್ನಿಸಿದರೆ ಮೇಲಿನ ಸಂಖ್ಯೆಗೆ ಕರೆ ಮಾಡಿ ಕಾರ್ಪೊರೇಟರಿಗೆ ಅಭಿನಂದನೆ ಸಲ್ಲಿಸಿ.
ಲಗ್ಗೆರೆ ಊರೊಳಗೆ ಲಗ್ಗೆ ಹಾಕೋಣ ಬನ್ನಿ
ಸುಮ್ಮನಹಳ್ಳಿ ಬ್ರಿಜ್ ನಿಂದ ರಾಜಕುಮಾರ ಸಮಾಧಿಗೆ ಹೋಗುವ ಮಾರ್ಗದ ಮಧ್ಯ ಸಿಗುವ ಲಗ್ಗೆರೆ ಬ್ರಿಜ್ ಸಿಗುವ ಮುನ್ನವೇ ಸರ್ವೀಸ್ ರಸ್ತೆ ಹಿಡಿದು ಲಗ್ಗೆರೆ ಊರೊಳಗೆ ಲಗ್ಗೆ ಹಾಕಿದರೆ ಅಲ್ಲಿ ನಿಮಗೆ ಕಿತ್ತುಹೋಗಿರುವ ರಸ್ತೆಗಳ, ಅರ್ಧಕ್ಕೆ ನಿಂತಿರುವ ಕಾಲುವೆಯ, ಗಬ್ಬು ನಾರುತ್ತಿರುವ ಮೋರಿಯ ದಿಗ್ದರ್ಶನವಾಗುತ್ತದೆ.
ನರಸಿಂಹ ಸ್ವಾಮಿ ಬಡಾವಣೆಗೆ ಹೋಗುವ ಹಾದಿ
ಅಲ್ಲಿಂದ ನಿಮಗೆ ಸರ್ಕಸ್ ಬರುತ್ತಿದ್ದರೆ, ದ್ವಿಚಕ್ರ ವಾಹನ ಓಡಿಸುವಲ್ಲಿ ಎಕ್ಸ್ ಪರ್ಟ್ ಆಗಿದ್ದರೆ ಮಾತ್ರ ನರಸಿಂಹಸ್ವಾಮಿ ಬಡಾವಣೆಗೆ ಹೋಗುವ ದಾರಿಯಲ್ಲಿ ನರಸಿಂಹ ಸ್ವಾಮಿಗೊಂದು ಮನಃಪೂರ್ವಕವಾಗಿ ನಮಸ್ಕರಿಸಿ ಪಯಣಿಸಿ. ಎಡಭಾಗದಲ್ಲಿ ಅರ್ಧಕ್ಕೆ ನಿಂತು ಹೋಗಿರುವ ಚರಂಡಿಯ ನಿರ್ಮಾಣ, ಬಲಭಾಗದಲ್ಲಿ ಇನ್ನೂ ಶುರುವಾಗದೇ ಇರುವ ಚರಂಡಿಯತ್ತ ಅಪ್ಪಿತಪ್ಪಿಯೂ ಗಮನಹರಿಸಬೇಡಿ.
ಜನ ಹೇಗಪ್ಪಾ ಇಲ್ಲಿ ಅಡ್ಡಾಡುತ್ತಾರೆ?
ಮುಂದೆ ಅಲ್ಲಿ ರಸ್ತೆಯಂತೇನೂ ಇಲ್ಲ, ಇದ್ದರೂ ಅದು ತಗ್ಗುದಿಣ್ಣೆ, ಮಳೆಯ ನೀರಿನಿಂದ ತುಂಬಿ ಹೋಗಿದೆ. ಮಳೆ ಹುಯ್ದಿದ್ದರಿಂದ ರಸ್ತೆಯೆಲ್ಲ ಕೊಚ್ಚೆಯಾಗಿ, ಹೆಣ್ಣುಮಕ್ಕಳು ಮೊಳಕಾಲುಮಟ್ಟ ಸೀರೆ ಎತ್ತಿಕೊಂಡು, ಕಿಚಿಪಿಚಿ ರಾಡಿಯಲ್ಲಿ ಅಡ್ಡಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಜನ ಹೇಗಪ್ಪಾ ಇಲ್ಲಿ ಅಡ್ಡಾಡುತ್ತಾರೆ ಎಂದು ಅನ್ನಿಸಿದರೆ ಮಂಜುಳಾ ಅವರಿಗೆ ಒಂದು ಫೋನ್ ಮಾಡಿ.
ಕರ್ಚೀಫು ಮೂಗಿಗೆ ಕಟ್ಟಿಕೊಂಡು ಅಡ್ಡಾಡಿ
ಇನ್ನು ಜರೂರಾಗಿ ನೋಡಲೇಬೇಕಾದ ಸ್ಥಳವೆಂದರೆ ಲಗ್ಗೆರೆ ಬ್ರಿಜ್ ಕೆಳಗಿನ ಪ್ರದೇಶ. ಸಾಧ್ಯವಾದರೆ ಮೂಗಿಗೆ ಕರ್ಚೀಫು, ವೇಲ್ ಕಟ್ಟಿಕೊಂಡು ಸಾಗಿದರೆ ಉತ್ತಮ. ಇನ್ನು ರಸ್ತೆಬದಿಯಲ್ಲಿ ಸೇತುವೆ ಕೆಳಗೆ, ಹಳ್ಳಗಳನ್ನು ತಪ್ಪಿಸಿಕೊಂಡು ಸಾಗುವಾಗ ಆಯತಪ್ಪಿ ಬಿದ್ದರೆ ಎಡಬದಿಯಲ್ಲಿ ಕಾಣುವ ಬೃಹತ್ ಕೊಳ್ಳದಲ್ಲಿಯೇ ನಿಮ್ಮ ಸಮಾಧಿ ಗ್ಯಾರಂಟಿ. ಆರೋಗ್ಯ ವಿಮೆ ಮಾಡಿಸಿರದಿದ್ದರೆ ಈಗಲೇ ಮಾಡಿಸಿ.
ಸೇತುವೆ ಬುಡ ಅಕ್ಷರಶಃ ತಿಪ್ಪೆಗುಂಡಿ
ಸೇತುವೆ ಕೆಳಗಿನ ಜಾಗ ಅಕ್ಷರಶಃ ತಿಪ್ಪೆಗುಂಡಿಯಾಗಿದೆ. ಇಡೀ ಲಗ್ಗೆರೆಯ ತಿಪ್ಪೆಯನ್ನು ಅಲ್ಲಿ ಬಿಸಾಕಲಾಗುತ್ತದೆ, ಅಲ್ಲಿಂದಲೇ ಹಸಿ, ಒಣ ಎಲ್ಲ ಕಸಗಳನ್ನು ಒಟ್ಟಿಗೆ ಸೇರಿಸಿಕೊಂಡು ಹೊತ್ತುಕೊಂಡು ಹೋಗುಲಾಗುತ್ತದೆ. ಅಲ್ಲೊಂದು ಬಿಳಿ ಮಾರುತಿ ಕಾರು ನಿಂತಿದೆ. ಅದರ ಮೇಲೆ ಕೂಡ ಗಬ್ಬುನಾರುವ ಕಸವನ್ನು ಒಟ್ಟಲಾಗಿದೆ. ಈ ಚಿತ್ರ ನೋಡಿದರೆ ನಿಮಗೇ ಗೊತ್ತಾಗುತ್ತದೆ ಅಲ್ಲಿನ ಸ್ಥಿತಿಗತಿ ಹೇಗಿದೆಯೆಂದು.
ಕಾರ್ಪೊರೇಟರ್ ಏನೂ ಕ್ರಮ ತೆಗೆದುಕೊಂಡಿಲ್ಲ
ಸ್ಥಳೀಯರಾದ ನಾಗರಾಜ್ ಅವರ ಪ್ರಕಾರ, ಕಸ ವಿಲೇವಾರಿಯ ಬಗ್ಗೆ, ರಸ್ತೆಗಳ ಅವ್ಯವಸ್ಥೆಯ ಬಗ್ಗೆ ಕಾರ್ಪೊರೇಟರಾಗಿರುವ ಮಂಜುಳಾ ನಾರಾಯಣಸ್ವಾಮಿ ಮತ್ತು ಶಾಸಕರಾದ ಮುನಿರತ್ನ ಅವರಿಗೆ ಹಲವಾರು ಬಾರಿ ದೂರು ನೀಡಲಾಗಿದ್ದರೂ ಅವರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಂಥ ಪ್ರದೇಶದಲ್ಲಿ ನಾವು ಇದ್ದೇವೆಂದು ಹೇಳಲು ನಿಜಕ್ಕೂ ನಾಚಿಕೆಯಾಗುತ್ತದೆ ಎಂದು ಅವರು ಅಳಲು ತೋಡಿಕೊಂಡರು.
ಈ ಸಮಸ್ಯೆಗಳಿಗೆ ಪರಿಹಾರ ಹೇಗೆ?
ಜನಪ್ರತಿನಿಧಿಗೆ ಮತ ಹಾಕಿದ್ದು, ಪ್ರತಿಯೊಂದು ವ್ಯವಸ್ಥೆಗೆ ತೆರಿಗೆ ಕಟ್ಟುತ್ತಿರುವುದು ವ್ಯರ್ಥವಾಗಬಾರದೆಂದರೆ, ನಿಮ್ಮ ಬಡಾವಣೆಯಲ್ಲಿಯೂ ಉತ್ತಮ ರಸ್ತೆಗಳು, ಚರಂಡಿಗಳು, ಸೇತುವೆಗಳು ಇರಬೇಕೆಂದು ನಿಮಗೆ ಅನ್ನಿಸಿದ್ದರೆ ಕಾರ್ಪೊರೇಟರ್ ಮನೆ ಮುಂದೆ, ಏರಿಯಾದ ಜನರೆಲ್ಲ ಸೇರಿ ಒಟ್ಟಾಗಿ ಹೋಗಿ ಧರಣಿ ಕುಳಿತುಕೊಳ್ಳಿ. ರಿಪೇರಿ ಮಾಡಿಸುವವರೆಗೆ ಬಿಡಬೇಡಿ.