ಪೊಲೀಸ್ ಇಲಾಖೆಯಿಂದ ಭದ್ರತಾ ತಂತ್ರಜ್ಞಾನ ಪ್ರದರ್ಶನ
ಬೆಂಗಳೂರು, ಡಿ. 10: ಅಪರಾಧ ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ಡಿಸೆಂಬರ್ ಮಾಹೆಯನ್ನು ಅಪರಾಧ ತಡೆ ಮಾಸವಾಗಿ ಆಚರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಡಿ. 19 ಮತ್ತು 20 ರಂದು ಮಲ್ಲೇಶ್ವರಂನ ಡಾ. ರಾಜ್ಕುಮಾರ್ ರಸ್ತೆಯ ಬ್ರಿಗೇಟ್ ಗೇಟ್ವೆಯಲ್ಲಿರುವ ಒರಿಯನ್ ಮಾಲ್ನಲ್ಲಿ ಸಾರ್ವಜನಿಕರಿಗಾಗಿ ಪ್ರದರ್ಶನ ಆಯೋಜಿಸಲಾಗಿದೆ. ಈ ಪ್ರದರ್ಶನದ ಮೂಲಕ ಸಾರ್ವಜನಿಕರಿಗೆ ರಕ್ಷಣಾ ಮತ್ತು ಭದ್ರತೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಆಧುನಿಕ ಸಲಕರಣೆಗಳ ಬಗ್ಗೆ ಮಾಹಿತಿ ನೀಡಲಾಗುವುದು. [ಶಾಲೆಗಳಿಗೆ ಪೊಲೀಸ್ ಆಯುಕ್ತರ ಖಡಕ್ ಸೂಚನೆ]
ಈ ನಿಮಿತ್ತ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಅವರ ಸೂಚನೆಯ ಮೇರೆಗೆ ಸುರಕ್ಷತಾ ಸಾಧನ, ಸಿಸಿಟಿವಿ ಅಳವಡಿಕೆ, ಮೊಬೈಲ್ ಅಪ್ಲಿಕೇಷನ್ಸ್, ಆಂಟಿ ಬರ್ಗಲರಿ ಅಲಾರಾಂ, ತುರ್ತು ಸಂದೇಶ ರವಾನೆ ವ್ಯವಸ್ಥೆ, ಗೃಹ ರಕ್ಷಣೆ, ದತ್ತಾಂಶ ರಕ್ಷಣೆ ಇತ್ಯಾದಿಗಳನ್ನು ಒಳಗೊಂಡ ಉಪಕರಣಗಳ ಪ್ರದರ್ಶನ ಆಯೋಜಿಸಲಾಗಿದೆ.
ನಗರದ ಸಾರ್ವಜನಿಕರು, ವ್ಯಾಪಾರಸ್ಥರು, ಶಾಲೆಗಳು, ಸಂಘ ಸಂಸ್ಥೆಗಳು, ಇತರೆ ಇಲಾಖೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಬೇಕೆಂದು ಪೊಲೀಸ್ ಇಲಾಖೆ ಕೋರಿದೆ. [ಕಮಿಶನರ್ ರೆಡ್ಡಿಗೆ ಟ್ವೀಟ್ ಮಾಡಿ]
ಆಸಕ್ತರು ವೆಬ್ ಸೈಟ್ http://bit.ly/bcpregister ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಅಪರಾಧ ವಿಭಾಗದ ಡಿಸಿಪಿ ಅಭಿಷೇಕ್ ಗೋಯೆಲ್ ಅವರನ್ನು ಇಮೇಲ್ [email protected] ಅಥವಾ ಮೊ. 94808 01016 ಮೂಲಕ ಸಂಪರ್ಕಿಸಬಹುದು.